ಮಾಸ್ಕೋ/ಕೀವ್: ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸಾಧಿಸಿದ ವಿಜಯದ ಸ್ಮರಣಾರ್ಥ (ವಿಜಯ ದಿನೋತ್ಸವ) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮೇ 8 ಮತ್ತು 9ರಂದು ಉಕ್ರೇನ್ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮೇ 5-6 ರಿಂದಲೇ ಅನ್ವಯವಾಗುವಂತೆ ತಮ್ಮದೇ ಆದ ಪ್ರತ್ಯೇಕ ಕದನ ವಿರಾಮವನ್ನು ಘೋಷಿಸುವ ಮೂಲಕ ರಷ್ಯಾಕ್ಕೆ ಸಡ್ಡು ಹೊಡೆದಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, “ವಿಜಯ ದಿನದ” ಸಂಭ್ರಮಾಚರಣೆಯನ್ನು ಗೌರವಿಸಲು ಮೇ 8ರ ಮಧ್ಯರಾತ್ರಿಯಿಂದ ಮೇ 10ರವರೆಗೆ ರಷ್ಯಾ ಯಾವುದೇ ದಾಳಿ ನಡೆಸುವುದಿಲ್ಲ.
ಎಚ್ಚರಿಕೆ: ಒಂದು ವೇಳೆ ಉಕ್ರೇನ್ ಈ ಸಮಯದಲ್ಲಿ ದಾಳಿ ನಡೆಸಿ ವಿಜಯ ದಿನದ ಮೆರವಣಿಗೆಗೆ ಅಡ್ಡಿಪಡಿಸಿದರೆ, ಕೀವ್ ನಗರದ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಲಾಗುವುದು ಎಂದು ರಷ್ಯಾ ಎಚ್ಚರಿಸಿದೆ.
ಮಾನವೀಯ ನೆಲೆ: ಈ ನಿರ್ಧಾರವನ್ನು ಮಾನವೀಯತೆಯ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಕ್ರೆಮ್ಲಿನ್ ತಿಳಿಸಿದೆ.
ರಷ್ಯಾದ ಈ ಪ್ರಸ್ತಾವನೆಯನ್ನು “ಗಂಭೀರವಾದುದ್ದಲ್ಲ” ಎಂದು ತಳ್ಳಿಹಾಕಿರುವ ಝೆಲೆನ್ಸ್ಕಿ, ಉಕ್ರೇನ್ ತನ್ನದೇ ಆದ ಶಾಂತಿ ಮಂತ್ರ ಜಪಿಸಿದೆ:
“ಮಾನವ ಜೀವವು ಯಾವುದೇ ಆಚರಣೆಗಿಂತ ದೊಡ್ಡದು. ಹೀಗಾಗಿ ನಾವು ಮೇ 5-6 ರ ಮಧ್ಯರಾತ್ರಿಯಿಂದಲೇ ಕದನ ವಿರಾಮ ಪಾಲಿಸುತ್ತೇವೆ,” ಎಂದು ಝೆಲೆನ್ಸ್ಕಿ ಘೋಷಿಸಿದ್ದಾರೆ.
ರಷ್ಯಾಕ್ಕೆ ನಿಜವಾಗಿಯೂ ಶಾಂತಿ ಬೇಕಿದ್ದರೆ ಮೇ 8ರವರೆಗೆ ಕಾಯುವ ಅಗತ್ಯವಿಲ್ಲ, ಈಗಲೇ ದಾಳಿ ನಿಲ್ಲಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಅಲ್ಲದೆ, ಕೇವಲ ಎರಡು ದಿನಗಳ ಬದಲಿಗೆ ಕನಿಷ್ಠ 30 ದಿನಗಳ ಕಾಲ ದೀರ್ಘಕಾಲೀನ ಕದನ ವಿರಾಮಕ್ಕೆ ಉಕ್ರೇನ್ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.








