ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿ ಸಾವಿರಾರು ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ವಾದವನ್ನು ಆಲಿಸಿದಂತ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಹಾಗೂ ಮೇ.1ರಂದು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ನಡೆದಂತ ಚುನಾವಣೆಯನ್ನು ಅಸಿಂಧುಗೊಳಿಸಿದೆ.
ಅರ್ಜಿದಾರ ದಿನಕರ್ ಶೆಟ್ಟಿ ಹೇಳಿದ್ದೇನು?
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ ಮಾಹಿತಿ ಹಂಚಿಕೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ಅರ್ಜಿದಾರರಾಗಿರುವಂತ ಕೆ. ಅಂಪಾರು ದಿನಕರ ಶೆಟ್ಟಿ ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಅಧಿಕೃತವಾಗಿ ಪೂರ್ಣ ಪ್ರಮಾಣದ ತಡೆಯಾಜ್ಞೆ ನೀಡಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಚುನಾವಣೆಗೂ ಸಂಪೂರ್ಣ ತಡೆ ನೀಡಿ ಆದೇಶಿಸಿದೆ. ಮುಂದಿನ ಹಂತದ ವಿಚಾರಣೆಯನ್ನು ಜೂನ್.29ರಂದು ನಡೆಯಲಿದೆ. ಅಲ್ಲಿಯವರೆಗೆ ಯಾವುದೇ ಚುನಾವಣೆ ಪ್ರಕ್ರಿಯೆ ಮುಂದುವರೆಸುವಂತಿಲ್ಲ. ಈವರೆಗೆ ಆದ ಎಲ್ಲಾ ಪ್ರಕ್ರಿಯೆಗಳೂ ಅಸಿಂಧುವೆಂದು ಘೋಷಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಸುಮಾರು 25,000 ಜನ ಶಿಕ್ಷಕರನ್ನು ಹೊರಗಿಟ್ಟು ಸಂವಿಧಾನ ಬದ್ದವಾಗಿ ನಡೆಯಬೇಕಿದ್ದ ರಾಜ್ಯ ಚುನಾವಣೆಯನ್ನು ಅಕ್ರಮವಾಗಿ ನಡೆಸಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ರಾಜ್ಯ ಸಂಘದವರಿಗೆ ಕೋರ್ಟ್ ಚುನಾವಣೆಯ ತಡೆಯಾಜ್ಞೆಯು ತೀವ್ರ ಹಿನ್ನಡೆಯಾಗಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ.ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ನ್ಯಾಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಧಾವೆ ಹೂಡಿದ್ದು, ಶಿಕ್ಷಕರಿಗೆ ನ್ಯಾಯ ದೊರಕುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂಬುದಾಗಿ ಹೇಳಿದ್ದಾರೆ.
ನಾಗನಗೌಡ.ಎಂ.ಎ ಹೇಳಿದ್ದೇನು ಓದಿ.!
ಇನ್ನೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗನಗೌಡ.ಎಂ.ಎ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಈಗ ಕಾನೂನು ಹೋರಾಟದ ಕಣವಾಗಿ ಮಾರ್ಪಟ್ಟಿದೆ. ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪದೋಷಗಳು ಮತ್ತು ಅಕ್ರಮಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಸದ್ಯ ಚುನಾವಣೆಗೆ ತಡೆಯಾಜ್ಞೆ ದೊರೆತಿದೆ ಎಂದಿದ್ದಾರೆ.
ಚುನಾವಣಾ ಅಕ್ರಮಗಳ ಸರಣಿ ಆರೋಪ
ನಾಗನಗೌಡ ಅವರ ಪ್ರಕಾರ, ಈ ಚುನಾವಣೆಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಅವರ ಪ್ರಮುಖ ಆರೋಪಗಳು ಈ ಕೆಳಗಿನಂತಿವೆ:
-
ಮತದಾರರ ಪಟ್ಟಿಯಿಂದ ಕೈಬಿಟ್ಟ ಶಿಕ್ಷಕರು: ಸುಮಾರು 1.20 ಲಕ್ಷ ಶಿಕ್ಷಕರ ಪೈಕಿ ಹತ್ತಾರು ಸಾವಿರ ಶಿಕ್ಷಕರ ಹೆಸರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.
-
ಚುನಾವಣೆ ಇಲ್ಲದೆಯೇ ಆಯ್ಕೆ: ರಾಜ್ಯದ 47 ತಾಲ್ಲೂಕುಗಳಲ್ಲಿ ಯಾವುದೇ ಚುನಾವಣೆ ನಡೆಸದೆ, ಕೇವಲ ಕಾಗದದ ಮೇಲೆ ತಮಗೆ ಬೇಕಾದವರ ಹೆಸರನ್ನು ಬರೆದುಕೊಂಡು ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.
-
ಹಣಕಾಸಿನ ಅವ್ಯವಹಾರ: ಪ್ರತಿ ವರ್ಷ ಸುಮಾರು 3 ಕೋಟಿ ರೂಪಾಯಿಗಳಷ್ಟು ಹಣ ಸಂಘಕ್ಕೆ ಜಮೆಯಾಗುತ್ತಿದ್ದರೂ, ಕಳೆದ ಮೂರು ವರ್ಷಗಳಿಂದ 120ಕ್ಕೂ ಹೆಚ್ಚು ತಾಲ್ಲೂಕುಗಳಿಗೆ ನೀಡಬೇಕಾದ ಸದಸ್ಯತ್ವದ ಹಣವನ್ನು ನೀಡಿಲ್ಲ.
-
ಕಚೇರಿ ನಿರ್ವಹಣೆ ಕೊರತೆ: 55 ವರ್ಷಗಳ ಸುದೀರ್ಘ ಇತಿಹಾಸವಿರುವ ಸಂಘದ ರಾಜ್ಯ ಕಚೇರಿಯು ಸರ್ಕಾರಿ ಶಾಲೆಯೊಂದರ ಸಣ್ಣ ಕೊಠಡಿಯಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ.
ನ್ಯಾಯಾಲಯದ ಆದೇಶ ಮತ್ತು ಕಾನೂನು ಹೋರಾಟ
ಚುನಾವಣಾ ಪ್ರಕ್ರಿಯೆಯಲ್ಲಿನ ಈ ಎಲ್ಲ ಅಕ್ರಮಗಳನ್ನು ಗಮನಿಸಿದ ಬೆಂಗಳೂರಿನ ಸಿವಿಲ್ ನ್ಯಾಯಾಲಯವು ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಮೇ 1ರಂದೇ ತಡೆಯಾಜ್ಞೆ ನೀಡಿದ್ದರೂ, ಚುನಾವಣಾ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಚುನಾವಣೆ ನಡೆಸಲು ಮುಂದಾಗಿದ್ದರು ಎಂದು ನಾಗನಗೌಡ ಅವರು ಆರೋಪಿಸಿದ್ದಾರೆ.
ಸದ್ಯ ನ್ಯಾಯಾಲಯವು ಜೂನ್ 29ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ್ದು, ಅಲ್ಲಿಯವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಶಿಕ್ಷಕರ ಸಂಘದ ‘ಶುದ್ಧೀಕರಣ’ದ ಸಂಕಲ್ಪ
“ನಮಗೆ ಯಾವುದೇ ವೈಯಕ್ತಿಕ ಹುದ್ದೆಯ ಆಕಾಂಕ್ಷೆಯಿಲ್ಲ. ನಮ್ಮ ಉದ್ದೇಶ ಕೇವಲ ಶಿಕ್ಷಕರ ಸಂಘದ ಶುದ್ಧೀಕರಣ,” ಎಂದು ನಾಗನಗೌಡ ಅವರು ಸ್ಪಷ್ಟಪಡಿಸಿದ್ದಾರೆ. ನ್ಯಾಯಸಮ್ಮತವಾದ ಚುನಾವಣೆ ನಡೆಯಬೇಕು ಮತ್ತು ಪ್ರತಿಯೊಬ್ಬ ಶಿಕ್ಷಕನಿಗೂ ಮತದಾನದ ಹಕ್ಕು ಸಿಗಬೇಕು ಎಂಬುದು ಅವರ ಹೋರಾಟದ ಮುಖ್ಯ ಗುರಿಯಾಗಿದೆ.
ಹಿಂದೆ ಕೆಜಿಎಸ್ಟಿಎ (KGSTA) ಚುನಾವಣೆಯಲ್ಲೂ ಇದೇ ರೀತಿಯ ಅಕ್ರಮಗಳು ನಡೆದಾಗ ಮೂರು ವರ್ಷಗಳ ಕಾಲ ಮತದಾನದ ಪೆಟ್ಟಿಗೆಯನ್ನು ನ್ಯಾಯಾಲಯದ ವಶದಲ್ಲಿಡಲಾಗಿತ್ತು. ಅದೇ ಮಾದರಿಯಲ್ಲಿ ಈ ಚುನಾವಣೆಯೂ ಪಾರದರ್ಶಕವಾಗಿ ನಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
ಶಿಕ್ಷಕರು ಸಮಾಜದ ದಾರಿದೀಪಗಳು. ಅಂತಹ ಶಿಕ್ಷಕರ ಸಂಘಟನೆಯೇ ಅಕ್ರಮಗಳ ಸುಳಿಯಲ್ಲಿ ಸಿಲುಕಿರುವುದು ವಿಷಾದನೀಯ. ಸದ್ಯ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಅನ್ಯಾಯಕ್ಕೊಳಗಾದ ಶಿಕ್ಷಕರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ಸಂಘದ ಪಾರದರ್ಶಕತೆ ಮತ್ತು ಗೌರವವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಚುನಾವಣೆಯ ಅಗತ್ಯವಿದೆ.








