ಬೆಂಗಳೂರು: ಪ್ರತಿವರ್ಷ ಮೇ 1ರಂದು ವಿಶ್ವದಾದ್ಯಂತ ಕಾರ್ಮಿಕ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. 19ನೇ ಶತಮಾನದಲ್ಲಿ ಅಮೆರಿಕದ ಶಿಕಾಗೋದಲ್ಲಿ ಎಂಟು ಗಂಟೆಗಳ ಕೆಲಸದ ಅವಧಿಗಾಗಿ ನಡೆದ ಐತಿಹಾಸಿಕ ಹೋರಾಟದ ನೆನಪಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಭಾರತದಲ್ಲಿ 1923ರಲ್ಲಿ ಮೊದಲ ಬಾರಿಗೆ ಕಾರ್ಮಿಕ ದಿನಾಚರಣೆ ಜಾರಿಗೆ ಬಂದಿತು. ದೇಶದ ಆರ್ಥಿಕ ಪ್ರಗತಿಯಲ್ಲಿ, ಅದರಲ್ಲೂ ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆವರಿನ ಹನಿ ಹರಿಸುವ ಕಟ್ಟಡ ಕಾರ್ಮಿಕರ ಹಿತರಕ್ಷಣೆಗಾಗಿ ‘ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.
ಕಾರ್ಮಿಕರು ಈ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು, ಅರ್ಹ ಸಮಯದಲ್ಲಿ ಅವುಗಳನ್ನು ಪಡೆದುಕೊಳ್ಳುವುದು ಅವರ ಹಕ್ಕಾಗಿದೆ. ಮಂಡಳಿಯ ಪ್ರಮುಖ ಸೌಲಭ್ಯಗಳ ವಿವರ ಇಲ್ಲಿದೆ:
ಪಿಂಚಣಿ ಸೌಲಭ್ಯ: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ
ಮಂಡಳಿಯಲ್ಲಿ ನೋಂದಣಿಯಾಗಿ ಕನಿಷ್ಠ ಮೂರು ವರ್ಷ ಸಕ್ರಿಯ ಸದಸ್ಯರಾಗಿರುವ ಕಾರ್ಮಿಕರಿಗೆ 60 ವರ್ಷ ತುಂಬಿದ ನಂತರ ಮಾಸಿಕ 3,000 ರೂ. ಪಿಂಚಣಿ ನೀಡಲಾಗುತ್ತದೆ.
ಕುಟುಂಬ ಪಿಂಚಣಿ: ಪಿಂಚಣಿದಾರ ಕಾರ್ಮಿಕ ಮೃತಪಟ್ಟರೆ, ಅವರ ಪತಿ ಅಥವಾ ಪತ್ನಿಗೆ ಮಾಸಿಕ 1,500 ರೂ. ಕುಟುಂಬ ಪಿಂಚಣಿ ದೊರೆಯುತ್ತದೆ.
ಅಂಗವೈಕಲ್ಯ ಪಿಂಚಣಿ: ಕೆಲಸದ ಅವಧಿಯಲ್ಲಿ ಸಂಪೂರ್ಣ ಅಂಗವಿಕಲರಾದವರಿಗೆ ಮಾಸಿಕ 2,000 ರೂ. ಪಿಂಚಣಿ ಹಾಗೂ 2 ಲಕ್ಷ ರೂ.ವರೆಗೆ ವೈದ್ಯಕೀಯ ನೆರವು ನೀಡಲಾಗುತ್ತದೆ.
ಅಪಘಾತ ಪರಿಹಾರ ಮತ್ತು ವೈದ್ಯಕೀಯ ನೆರವು
ಮರಣ ಪರಿಹಾರ: ಕೆಲಸದ ಅವಧಿಯ ಹೊರತಾಗಿ ಅಪಘಾತದಿಂದ ಮೃತಪಟ್ಟರೆ ಮಂಡಳಿಯು 8 ಲಕ್ಷ ರೂ. ವರೆಗೆ ಪರಿಹಾರ ನೀಡುತ್ತದೆ (ಆತ್ಮಹತ್ಯೆ, ಮಾದಕ ದ್ರವ್ಯ ಸೇವನೆ ಅಥವಾ ಕ್ರಿಮಿನಲ್ ಚಟುವಟಿಕೆಗಳಿಗೆ ಇದು ಅನ್ವಯಿಸುವುದಿಲ್ಲ).
ಅಂಗವೈಕಲ್ಯ ಪರಿಹಾರ: ಶಾಶ್ವತ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ವೈದ್ಯಕೀಯ ವಿಮೆ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ ದಿನಕ್ಕೆ ಗರಿಷ್ಠ 20,000 ರೂ. ವರೆಗೆ ಹಣಕಾಸಿನ ನೆರವು ಸಿಗಲಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ 6 ತಿಂಗಳೊಳಗೆ ಇದಕ್ಕೆ ಅರ್ಜಿ ಸಲ್ಲಿಸಬೇಕು.
ಮಹಿಳಾ ಕಾರ್ಮಿಕರಿಗೆ ವಿಶೇಷ ಯೋಜನೆಗಳು
ತಾಯಿ-ಮಗು ಸಹಾಯ ಹಸ್ತ: ಮಗು ಜನಿಸಿದ ದಿನದಿಂದ ಮೂರು ವರ್ಷಗಳವರೆಗೆ ಪೌಷ್ಠಿಕಾಂಶದ ಬೆಂಬಲಕ್ಕಾಗಿ ತಿಂಗಳಿಗೆ 500 ರೂ.ನಂತೆ ಒಟ್ಟು 6,000 ರೂ. ನೆರವು ನೀಡಲಾಗುತ್ತದೆ.
ಹೆರಿಗೆ ಭತ್ಯೆ: ಮೊದಲ ಎರಡು ಹೆರಿಗೆಗಳಿಗೆ ತಲಾ 50,000 ರೂ. ಆರ್ಥಿಕ ಸಹಾಯ ಲಭ್ಯವಿದೆ. ಮಗು ಜನಿಸಿದ 6 ತಿಂಗಳೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.
ಶಿಕ್ಷಣ ಮತ್ತು ವಿವಾಹ ಸಹಾಯಧನ
ಶಿಕ್ಷಣ: ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಧನಸಹಾಯ ನೀಡಲಾಗುತ್ತದೆ (ದೂರಶಿಕ್ಷಣಕ್ಕೆ ಅನ್ವಯವಿಲ್ಲ).
ವಿವಾಹ: ಕಾರ್ಮಿಕ ಅಥವಾ ಅವರ ಇಬ್ಬರು ಅವಲಂಬಿತ ಮಕ್ಕಳ ವಿವಾಹಕ್ಕೆ ತಲಾ 60,000 ರೂ. ಸಹಾಯಧನ ನೀಡಲಾಗುತ್ತದೆ. ಮದುವೆಯಾದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
ಇತರೆ ಸೌಲಭ್ಯಗಳು
ಅಂತ್ಯಕ್ರಿಯೆ ವೆಚ್ಚ: ನೋಂದಾಯಿತ ಕಾರ್ಮಿಕ ಮೃತಪಟ್ಟರೆ ಅಂತ್ಯಕ್ರಿಯೆಗಾಗಿ ವಾರಸುದಾರರಿಗೆ 1.46 ಲಕ್ಷ ರೂ. ವರೆಗೆ ನೆರವು ಸಿಗಲಿದೆ.
ಉಚಿತ ಬಸ್ ಪಾಸ್: ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಿಎಂಸಿಟಿ ಬಸ್ಗಳಲ್ಲಿ ಪ್ರಯಾಣಿಸಲು ಉಚಿತ ಮಾಸಿಕ ಪಾಸ್ ಸೌಲಭ್ಯವಿದೆ.
ಗಮನಿಸಿ: ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಪ್ರತಿ ವರ್ಷ ಕಾರ್ಡನ್ನು ನವೀಕರಿಸುವುದು ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕಾರ್ಮಿಕ ಇಲಾಖೆ ಕಚೇರಿ ಅಥವಾ ಅಧಿಕೃತ ಆನ್ಲೈನ್ ಪೋರ್ಟಲ್ ಅನ್ನು ಸಂಪರ್ಕಿಸಬಹುದು.








