ಮಂಡ್ಯ : ಮದ್ದೂರು ನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಮದ್ದೂರು ಉತ್ಸವಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮದ್ದೂರು ಉತ್ಸವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ಮದ್ದೂರು ಉತ್ಸವದ ಪ್ರಾರಂಭೋತ್ಸವದ ಅಂಗವಾಗಿ ಶನಿವಾರ ನಡೆದ ಮ್ಯಾರಾಥಾನ್ ಗೆ ನಿರೀಕ್ಷೆಗೂ ಮೀರಿದ ಜನರ ಬಂದಿದ್ದು, ಹಾಗೂ ಮದ್ದೂರಮ್ಮನ ಜಾತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ದೇಶಿ ತಳಿ ಹಳ್ಳಿಕಾರ್ ದನಗಳು, ಬಂಡೂರು ಟಗರುಗಳು, ಕುದುರೆಗಳನ್ನು ರೈತರು ತಂದು ಕಟ್ಟಿರುವುದರಿಂದ ಜಾತ್ರೆಗೆ ಮತ್ತಷ್ಟು ಹೆಚ್ಚಿನ ಮೆರಗು ಬಂದಿದೆ ಎಂದರು.
ಮಂಗಳವಾರ ಮದ್ದೂರು ಉತ್ಸವದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಲಂಕಾರದ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಮೇ.8 ರ ವರೆಗೂ ದೀಪಾಲಂಕಾರವಿದ್ದು, ಇದರಿಂದ ಮದ್ದೂರಮ್ಮನ ಹಬ್ಬಕೆ ವಿಶೇಷ ಮೆರಗು ಬರಲಿದೆ ಎಂದರು.
ಮಂಗಳವಾರ ಮತ್ತು ಬುಧವಾರ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ನಗರದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ, 25 ಸಾವಿರ, 10 ಸಾವಿರ ನಗದು ಬಹುಮಾನ ನೀಡಲಾಗುವುದರ ಜೊತೆಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಏ.30 ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಬೃಹತ್ ದನಗಳ ಮೆರವಣಿಗೆ ಮೂಲಕ ಕರೆತಂದು ಉತ್ತಮ ರಾಸುಗಳಿಗೆ ಕ್ರಮವಾಗಿ ಮೊದಲ ಚಾಂಪಿಯನ್ಗೆ 2 ಲಕ್ಷ ಪರೂ. ಎರಡನೇ ಚಾಂಪಿಯನ್ಗೆ 1 ಲಕ್ಷ ರೂ. ಮೂರನೇ ಚಾಂಪಿಯನ್ಗೆ 50 ಸಾವಿರ ನಗದು ಬಹುಮಾನ ಕೊಡಲಾಗುವುದು. ಅಲ್ಲದೇ 10 ರಾಸುಗಳಿಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಟಗರುಗಳಿಗೂ ಕೂಡ ಕ್ರಮವಾಗಿ 10 ಸಾವಿರ ಹಾಗೂ 5 ಸಾವಿರ ನಗದು ಬಹುಮಾನಗಳನ್ನು ಪಶು ಸಂಗೋಪಾನಾ ಇಲಾಖೆಯ ಸಚಿವ ಕೆ.ವೆಂಕಟೇಶ್ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿತರಣೆ ಮಾಡಲಿದ್ದಾರೆಂದು ತಿಳಿಸಿದರು.
ಮೇ.1 ರಿಂದ 4 ರವರೆಗೆ ಮದ್ದೂರು ಪಟ್ಟಣದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಾದವರಿಗೆ ವಾಷಿಂಗ್ ಮಷಿನ್, ರೆಪ್ರಿಜರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು. ಮೇ.6 ರಂದು ಮದ್ದೂರು ಪಟ್ಟಣದ ಕ್ರೀಡಾಂಗಣದಲ್ಲಿ ಸಂಗೀತ ರಸ ಕಾರ್ಯಕ್ರಮವನ್ನು ಸಂಜೆ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಆಗಮಿಸಲಿದ್ದಾರೆಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಮದ್ದೂರು ಉತ್ಸವ ಹಮ್ಮಿಕೊಂಡಿರುವುದರಿಂದ ಜನರಿಗೆ ಖುಷಿ ತಂದಿದೆ ಮತ್ತು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಪ್ರತಿ ವರ್ಷ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವ ಆಚರಿಸಲಾಗುವುದು ಎಂದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಬಿಇಒ ಸಿ.ಎನ್.ಧನಂಜಯ, ಸಿಡಿಪಿಓ ಅರುಣ್ ಕುಮಾರ್, ಸಿಪಿಐಗಳಾದ ನವೀನ್ ಕುಮಾರ್, ನಾರಾಯಣಿ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಸಾಗರದ ಗಣಪತಿ ಅರ್ಬನ್ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷೆಯಾಗಿ ಸರಸ್ವತಿ ನಾಗರಾಜ್ ಆಯ್ಕೆ
ಮದ್ದೂರಿನಲ್ಲಿಯೇ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಪ್ರಾರಂಭ: ಶಾಸಕ ಕೆ.ಎಂ.ಉದಯ್








