ಚಾಮರಾಜನಗರ: ಅದು ದಟ್ಟ ಕಾಡಿನ ನಡುವಿನ ಒಂದು ಪುಟ್ಟ ಆದಿವಾಸಿ ಗ್ರಾಮ. ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಮುಗಿದರೂ, ಅಲ್ಲಿನ ಜನರ ಪಾಲಿಗೆ ‘ಬೆಳಕು’ ಎಂಬುದು ಕೇವಲ ಕನಸಾಗಿತ್ತು. ಆದರೆ, ಅಜ್ಜಿಯೊಬ್ಬರ ಹಠ ಮತ್ತು ಇಡೀ ಗ್ರಾಮದ ಒಗ್ಗಟ್ಟಿನ ಹೋರಾಟ ಇಂದು ಆ ಕಗ್ಗತ್ತಲ ಅಡವಿಯಲ್ಲಿ ವಿದ್ಯುತ್ ಬಲ್ಬ್ಗಳು ಝಗಮಗಿಸುವಂತೆ ಮಾಡಿದೆ. ಇದು ಹನೂರು ತಾಲೂಕಿನ ಮೆದಗಾಣೆ ಹಾಡಿಯ ವಿಜಯಗಾಥೆ.
ದಯಾಮರಣದ ಪತ್ರ: ಒಂದು ಮೌನ ಪ್ರತಿಭಟನೆಯ ಕಿಚ್ಚು
ಈ ಬದಲಾವಣೆಯ ಹಿಂದೆ 60 ವರ್ಷದ ವೃದ್ಧೆ ಕೆಂಪಮ್ಮ ಅವರ ನೋವಿನ ಅಳಲಿದೆ. ತಾನು ಕತ್ತಲೆಯಲ್ಲಿ ಕಳೆದ ಬದುಕು ಸಾಕು, ಕನಿಷ್ಠ ತನ್ನ ಮೊಮ್ಮಕ್ಕಳಾದರೂ ಬೆಳಕಿನಲ್ಲಿ ಓದಲಿ ಎಂಬ ಆಸೆಯಿಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. “ನಮಗೆ ವಿದ್ಯುತ್ ಕೊಡಿ, ಇಲ್ಲವೇ ದಯಾಮರಣ ನೀಡಿ” ಎಂಬ ಆ ತಾಯಿಯ ಆರ್ತನಾಧ ಸರ್ಕಾರದ ಕದ ತಟ್ಟಿತು. ದೃಷ್ಟಿಮಾಂದ್ಯತೆಯ ನಡುವೆಯೂ ಕೆಂಪಮ್ಮ ಅವರು ತೋರಿದ ಈ ಧೈರ್ಯ ವ್ಯವಸ್ಥೆಯನ್ನು ಎಚ್ಚರಿಸಿತು.
7 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ಜನರ ಕೆಚ್ಚೆದೆ
ವಿದ್ಯುತ್ ಸಂಪರ್ಕಕ್ಕಾಗಿ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದ ಗ್ರಾಮಸ್ಥರು, ಹಕ್ಕು ಪಡೆಯಲು ಹೋರಾಟದ ಹಾದಿ ಹಿಡಿದರು. ಸುಮಾರು 60ಕ್ಕೂ ಹೆಚ್ಚು ಮಂದಿ ಸತತ 7 ದಿನಗಳ ಕಾಲ ಅನ್ನ-ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅರಣ್ಯ ಇಲಾಖೆಯ ನಿಯಮಗಳೋ ಅಥವಾ ತಾಂತ್ರಿಕ ಅಡೆತಡೆಗಳೋ – ಯಾವುದೂ ಜನರ ಈ ದೃಢ ಸಂಕಲ್ಪದ ಮುಂದೆ ನಿಲ್ಲಲಾಗಲಿಲ್ಲ.
ಸಮರೋಪಾದಿಯಲ್ಲಿ ನಡೆದ ‘ಮಿಷನ್ ಮೆದಗಾಣೆ’
ಕೆಂಪಮ್ಮ ಅವರ ಪತ್ರ ಮತ್ತು ಗ್ರಾಮಸ್ಥರ ಹೋರಾಟಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದರು. ಪರಿಣಾಮವಾಗಿ, ಅರಣ್ಯ ಇಲಾಖೆ ಮತ್ತು ಸೆಸ್ಕಾಮ್ (CESCOM) ಅಧಿಕಾರಿಗಳು ಹಗಲಿರುಳು ಶ್ರಮಿಸಿದರು. ದಟ್ಟ ಅರಣ್ಯದ ನಡುವೆ ವಿದ್ಯುತ್ ಕಂಬಗಳನ್ನು ನೆಟ್ಟು, ಲೈನ್ಗಳನ್ನು ಎಳೆದು ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು.
ಹೊಸ ಭವಿಷ್ಯದ ಮುನ್ನುಡಿ
ಸಂಜೆ ವೇಳೆ ಗ್ರಾಮದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಲ್ಬ್ ಬೆಳಗಿದಾಗ ಇಡೀ ಮೆದಗಾಣೆ ಹಾಡಿ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.
-
ಮರುಜನ್ಮದ ಸಂಭ್ರಮ: “ನನ್ನ ಮೊಮ್ಮಕ್ಕಳ ಭವಿಷ್ಯಕ್ಕಾಗಿ ನಾನು ದಯಾಮರಣ ಕೇಳಿದ್ದೆ, ಈಗ ನಮಗೆ ಮರುಜನ್ಮ ಸಿಕ್ಕಂತಾಗಿದೆ” ಎಂದು ಕೆಂಪಮ್ಮ ಭಾವುಕರಾದರು.
-
ವಿದ್ಯಾಭ್ಯಾಸಕ್ಕೆ ಆಸರೆ: ಈವರೆಗೆ ಸೀಮೆಎಣ್ಣೆ ಬುಡ್ಡಿ ದೀಪದ ಮಂದ ಬೆಳಕಿನಲ್ಲಿ ಓದುತ್ತಿದ್ದ ಹಾಡಿಯ ಮಕ್ಕಳಿಗೆ ಈಗ ಸುಸಜ್ಜಿತ ಬೆಳಕು ಸಿಕ್ಕಿದೆ.
-
800 ಜನರ ಬದುಕಿನಲ್ಲಿ ಬೆಳಕು: ಸುಮಾರು 800 ಜನರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇಂದು ಹೊಸ ಆಸೆ ಚಿಗುರಿದೆ.
77 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮೆದಗಾಣೆ ಹಾಡಿ ಕತ್ತಲೆಯಿಂದ ಮುಕ್ತಿ ಪಡೆದಿದೆ. ಇದು ಕೇವಲ ಒಂದು ಗ್ರಾಮಕ್ಕೆ ವಿದ್ಯುತ್ ಬಂದ ಕಥೆಯಲ್ಲ; ಬದಲಾಗಿ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನರ ಧ್ವನಿ ಮತ್ತು ಹೋರಾಟಕ್ಕೆ ಸಿಕ್ಕ ದೊಡ್ಡ ಜಯ. ಕೆಂಪಮ್ಮ ಅವರ ಹೋರಾಟ ಮತ್ತು ಸರ್ಕಾರದ ತ್ವರಿತ ಸ್ಪಂದನೆ ಇಂದು ಒಂದು ಇಡೀ ಬುಡಕಟ್ಟು ಸಮುದಾಯದ ಬದುಕನ್ನು ಬೆಳಗಿದೆ.
ಬೆಂಗಳೂರಿಗೆ 4ನೇ ರಿಂಗ್ ರಸ್ತೆ ಭಾಗ್ಯ: 12 ಉಪನಗರಗಳನ್ನು ಜೋಡಿಸುವ 210 ಕಿ.ಮೀ ‘ಇಂಟರ್ಮೀಡಿಯೇಟ್ ರಿಂಗ್ ರೋಡ್’
ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ








