ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಅಕ್ಷಯ ತೃತೀಯದಂದು ಚಿನ್ನ ಮತ್ತು ಬೆಳ್ಳಿಯ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯವಹಾರವು ಶೇ. 30 ರಿಂದ 35ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯಾದ್ಯಂತ ಎರಡು ದಿನಗಳಲ್ಲಿ ಒಟ್ಟು 1,250 ಕೆ.ಜಿ. ಚಿನ್ನ ಹಾಗೂ 10 ಟನ್ ಬೆಳ್ಳಿ ಮಾರಾಟವಾಗಿದೆ. ಸುಮಾರು ₹1,800 ರಿಂದ ₹2,000 ಕೋಟಿ ಮೌಲ್ಯದ ಚಿನ್ನ ಹಾಗೂ ₹800 ಕೋಟಿ ಮೌಲ್ಯದ ಬೆಳ್ಳಿಯನ್ನು ಗ್ರಾಹಕರು ಖರೀದಿಸಿದ್ದಾರೆ.ರಾಜಧಾನಿ ಬೆಂಗಳೂರು ಒಂದರಲ್ಲೇ ಸುಮಾರು ₹800 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ. ನಗರದಲ್ಲಿ 4 ಟನ್ ಬೆಳ್ಳಿ ಮಾರಾಟವಾಗಿದ್ದರೆ, ಉಳಿದ 6 ಟನ್ ಬೆಳ್ಳಿ ರಾಜ್ಯದ ಇತರ ಭಾಗಗಳಲ್ಲಿ ಮಾರಾಟವಾಗಿದೆ.
ಜಾಗತಿಕ ಮಟ್ಟದ ಯುದ್ಧದ ಭೀತಿ ಅಥವಾ ಚಿನ್ನದ ದರ ವಿಪರೀತ ಏರಿಕೆಯಾಗಿರುವುದು ಈ ಇಳಿಕೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಸುಮಾರು 1,600 ಕೆ.ಜಿ. ಚಿನ್ನ ಹಾಗೂ 15 ಟನ್ ಬೆಳ್ಳಿ ಮಾರಾಟವಾಗಿತ್ತು.
ಗ್ರಾಹಕರ ಒಲವು:
ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಕಡಿಮೆ ತೂಕದ ಆಭರಣಗಳಿಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಸಾಮಾನ್ಯವಾಗಿ 10 ಗ್ರಾಂ ಚಿನ್ನ ಖರೀದಿಸುತ್ತಿದ್ದವರು, ಈ ಬಾರಿ ಕೇವಲ 1 ಗ್ರಾಂ ಚಿನ್ನ ಖರೀದಿಸಿ ಸಂಪ್ರದಾಯ ಪೂರೈಸಿದ್ದಾರೆ.








