ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನೆಲೆಸಿರುವ 6ನೇ ತಲೆಮಾರಿನ (6th Generation) ತಮಿಳು ಮೂಲದವರಿಗೂ ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ ಪಡೆಯುವ ಅರ್ಹತೆಯನ್ನು ವಿಸ್ತರಿಸುವುದಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಘೋಷಿಸಿದ್ದಾರೆ.
ಈವರೆಗೆ ಕೇವಲ ನಾಲ್ಕನೇ ತಲೆಮಾರಿನವರೆಗೆ ಮಾತ್ರ ಇದ್ದ OCI ಅರ್ಹತೆಯನ್ನು ಈಗ ಆರನೇ ತಲೆಮಾರಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ ದಶಕಗಳ ಹಿಂದೆ ತೋಟದ ಕಾರ್ಮಿಕರಾಗಿ ಶ್ರೀಲಂಕಾಕ್ಕೆ ತೆರಳಿದ್ದ ಲಕ್ಷಾಂತರ ತಮಿಳರ ವಂಶಸ್ಥರಿಗೆ ಭಾರತದೊಂದಿಗೆ ಮರುಸಂಪರ್ಕ ಸಾಧಿಸಲು ಅವಕಾಶ ಸಿಗಲಿದೆ.
ಕೊಲಂಬೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪರಾಷ್ಟ್ರಪತಿಗಳು, “ನಮ್ಮ ರಕ್ತ ಸಂಬಂಧಿಗಳು ಎಲ್ಲೇ ಇದ್ದರೂ ಅವರು ಭಾರತದ ಅವಿಭಾಜ್ಯ ಅಂಗ. ‘Stronger Together’ ಎಂಬ ಮಂತ್ರದೊಂದಿಗೆ ನಾವು ನಮ್ಮವರನ್ನು ಬೆಂಬಲಿಸುತ್ತೇವೆ” ಎಂದು ಹೇಳಿದರು.
ಈ OCI ಕಾರ್ಡ್ ಹೊಂದುವುದರಿಂದ ಶ್ರೀಲಂಕಾದ ತಮಿಳರು ವೀಸಾ ಇಲ್ಲದೆಯೇ ಭಾರತಕ್ಕೆ ಪ್ರಯಾಣಿಸಬಹುದು ಮತ್ತು ಇಲ್ಲಿ ಸುಲಭವಾಗಿ ಶಿಕ್ಷಣ, ಉದ್ಯೋಗ ಹಾಗೂ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.








