ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು, ಫಾಸ್ಟ್ಟ್ಯಾಗ್ನಲ್ಲಿ ಹಣವಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಗಣಂಗೂರು ಟೋಲ್ ಬಳಿ ನಡೆದಿದೆ.
ಘಟನೆಯ ಹಿನ್ನೆಲೆ:
ಎರಡು ದಿನಗಳ ಹಿಂದೆ ಮಹೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಮೂಲಕ ಪ್ರಯಾಣಿಸುತ್ತಿದ್ದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ತಲುಪಿದಾಗ, ಅವರ ಕಾರಿನ ಫಾಸ್ಟ್ಟ್ಯಾಗ್ನಲ್ಲಿ (Fastag) ಹಣ ಖಾಲಿಯಾಗಿರುವುದು ಗಮನಕ್ಕೆ ಬಂದಿದೆ.
ನಡೆದಿದ್ದೇನು?
ಫಾಸ್ಟ್ಟ್ಯಾಗ್ನಲ್ಲಿ ಹಣವಿಲ್ಲದ ಕಾರಣ, ಮಹೇಶ್ ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದು ತನಗೆ ಪರಿಚಯವಿರುವವರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಹಾಗೂ ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಆಕ್ರೋಶಗೊಂಡ ಟೋಲ್ ಸಿಬ್ಬಂದಿಗಳು ಕಾನೂನನ್ನು ಕೈಗೆತ್ತಿಕೊಂಡು ಗೂಂಡಾಗಳಂತೆ ವರ್ತಿಸಿದ್ದಾರೆ.
ಯುವಕನಿಗೆ ಅಸಭ್ಯ ಭಾಷೆಯಲ್ಲಿ ಬೈದು ಗಲಾಟೆ ಆರಂಭಿಸಿದ್ದಾರೆ.ಯುವಕ ಯಾರನ್ನೋ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ದರ್ಪ ತೋರಿದ್ದಾರೆ. ಅಷ್ಟಕ್ಕೇ ನಿಲ್ಲದ ಸಿಬ್ಬಂದಿಗಳು ಮಹೇಶ್ ಮೇಲೆ ಮುಗಿಬಿದ್ದು, ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ವೈರಲ್ ಆದ ವೀಡಿಯೊ:
ಟೋಲ್ ಸಿಬ್ಬಂದಿಗಳು ಮಹೇಶ್ ಮೇಲೆ ನಡೆಸಿದ ಮೃಗೀಯ ಹಲ್ಲೆಯ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. “ಇವರು ಟೋಲ್ ಸಿಬ್ಬಂದಿಗಳೋ ಅಥವಾ ರೌಡಿಗಳೋ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.








