ಭುವನೇಶ್ವರ: ಐಟಿ ದೈತ್ಯ ಕಂಪನಿ ‘ಒರಾಕಲ್’ (Oracle) ಇತ್ತೀಚೆಗೆ ನಡೆಸಿದ ಬೃಹತ್ ಉದ್ಯೋಗ ಕಡಿತದ ನಡುವೆ, ಉದ್ಯೋಗ ಕಳೆದುಕೊಂಡ ಒಡಿಶಾದ ತಂತ್ರಜ್ಞರೊಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ಈ ವ್ಯಕ್ತಿ, ಉದ್ಯೋಗ ಹೋದ ತಕ್ಷಣ ಗಾಬರಿಯಾಗದೆ ಸಮಾಧಾನದಿಂದ ಹಳ್ಳಿಗೆ ಮರಳಿದ ರೀತಿ ಮತ್ತು ಅವರ ಆರ್ಥಿಕ ಶಿಸ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಘಟನೆ? ನಾಯಕ ಸತ್ಯ ಎಂಬುವವರು ‘X’ (ಟ್ವಿಟ್ಟರ್) ನಲ್ಲಿ ತಮ್ಮ ಸ್ನೇಹಿತನ ಈ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ಒರಾಕಲ್ ಸಂಸ್ಥೆಯಿಂದ ಕೆಲಸ ಕಳೆದುಕೊಂಡ ನಂತರ ಅವರ ಸ್ನೇಹಿತ ಯಾವುದೇ ಆತಂಕಕ್ಕೆ ಒಳಗಾಗದೆ ನೇರವಾಗಿ ತಮ್ಮ ಹುಟ್ಟೂರಾದ ಭುವನೇಶ್ವರಕ್ಕೆ ಮರಳಿದರು. ಮೆಟ್ರೋ ನಗರದ ಇಎಂಐ (EMI) ಮತ್ತು ಸಾಲದ ಸುಳಿಯಿಂದ ಮುಕ್ತರಾಗಿದ್ದ ಅವರಿಗೆ, ಹಳೆಯ ಕಾಲದ ಹೂಡಿಕೆ ಪದ್ಧತಿಯೇ ಆಪತ್ಬಾಂಧವನಂತೆ ಒದಗಿಬಂದಿದೆ.
ವೈರಲ್ ಆದ ಆರ್ಥಿಕ ಯೋಜನೆ (Savings Plan):
ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಅವರು ಮಾಡಿದ ಸಾಂಪ್ರದಾಯಿಕ ಹೂಡಿಕೆಗಳು ಅವರಿಗೆ ತಿಂಗಳ ಸಾವಿರಾರು ರೂಪಾಯಿ ಆದಾಯ ತರುತ್ತಿವೆ:
-
ಅಂಚೆ ಕಚೇರಿ ಹೂಡಿಕೆ: ಪೋಷಕರು ಮತ್ತು ಪತ್ನಿಯ ಹೆಸರಿನಲ್ಲಿ ತಲಾ 15 ಲಕ್ಷ ರೂ.ಗಳ ಎರಡು ಜಂಟಿ ಅಂಚೆ ಕಚೇರಿ ಎಫ್ಡಿ (Fixed Deposits) ಮಾಡಿದ್ದರು. ಇದರಿಂದ ತಿಂಗಳಿಗೆ ಸುಮಾರು 28,000 ರೂ. ಬಡ್ಡಿ ಬರುತ್ತಿದೆ.
-
ಬ್ಯಾಂಕ್ ಎಫ್ಡಿ: ವಿವಿಧ ಬ್ಯಾಂಕ್ಗಳಲ್ಲಿ ಸುಮಾರು 30 ಲಕ್ಷ ರೂ. ಹೂಡಿಕೆ ಮಾಡಿದ್ದು, ಅಲ್ಲಿಂದ ತಿಂಗಳಿಗೆ 15,000 ರೂ. ಆದಾಯ ಲಭಿಸುತ್ತಿದೆ.
-
ಮಗುವಿನ ಹೆಸರಲ್ಲಿ ಉಳಿತಾಯ: ತಮ್ಮ ಮಗುವಿನ ಹೆಸರಿನಲ್ಲೂ ಪ್ರತ್ಯೇಕ ಠೇವಣಿ ಇರಿಸಿದ್ದಾರೆ.
ಪ್ರಸ್ತುತ ಜೀವನ: ಸದ್ಯ ಅವರು ತಮ್ಮ ಪೋಷಕರ ಜೊತೆ ಭುವನೇಶ್ವರದಲ್ಲಿ ವಾಸಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ತಮಗೆ ಇಷ್ಟವಾದಾಗ ಉಬರ್ (Uber) ಚಾಲಕನಾಗಿ ಕೆಲಸ ಮಾಡುತ್ತಾ ಆದಾಯ ಗಳಿಸುತ್ತಿದ್ದಾರೆ ಮತ್ತು ಕುಟುಂಬದ ಬೆಂಬಲದೊಂದಿಗೆ ಸ್ವಂತ ಉದ್ಯಮ ಆರಂಭಿಸಲು ಯೋಜಿಸುತ್ತಿದ್ದಾರೆ.
“ಯಾವುದೇ ಸಾಮಾಜಿಕ ಜಾಲತಾಣದ ಇನ್ಫುಯೆನ್ಸರ್ ಅಥವಾ ಹೊಸ ಟ್ರೆಂಡ್ಗಳ ಹಿಂದೆ ಹೋಗದೆ, ಶಿಸ್ತಿನಿಂದ ಹಳೆಯ ಕಾಲದ ಉಳಿತಾಯ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಇಂದು ಅವರು ನೆಮ್ಮದಿಯಾಗಿದ್ದಾರೆ” ಎಂದು ಸತ್ಯ ಅವರು ಬರೆದುಕೊಂಡಿದ್ದಾರೆ.
ಒರಾಕಲ್ ಕಂಪನಿಯು ಜಾಗತಿಕವಾಗಿ ಸುಮಾರು 30,000 ಉದ್ಯೋಗಿಗಳನ್ನು (ಭಾರತದಲ್ಲಿ ಸುಮಾರು 12,000) ಕೆಲಸದಿಂದ ತೆಗೆದುಹಾಕಿರುವ ಈ ಸಮಯದಲ್ಲಿ, ಈ ತಂತ್ರಜ್ಞನ ಕಥೆ ಆರ್ಥಿಕ ಸಿದ್ಧತೆಯ ಮಹತ್ವವನ್ನು ಸಾರುತ್ತಿದೆ.
ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ಗ್ರಾಮಪಂಚಾಯಿತಿ’ಗಳಲ್ಲಿ ಸಿಗಲಿದೆ ಈ ಸೌಲಭ್ಯಗಳು.!
ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಸಿಹಿ ಸುದ್ದಿ: ಈ ಎರಡು ಆಸ್ಪತ್ರೆಗಳಲ್ಲಿ ರೆಫರಲ್ ಇಲ್ಲದೆಯೇ ನೇರ ಚಿಕಿತ್ಸೆ








