ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು (FLN) ಬಲಪಡಿಸುವ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ‘ಕಲಿಕಾ ದೀಪ’ ಕಾರ್ಯಕ್ರಮವನ್ನು ರಾಜ್ಯದ 1,145 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಆದೇಶ ಹೊರಡಿಸಿದೆ.
2026-27ರ ವೇಳೆಗೆ ಎಲ್ಲಾ ವಿದ್ಯಾರ್ಥಿಗಳು ಭಾಷೆ ಮತ್ತು ಗಣಿತದಲ್ಲಿ ಪ್ರಾವೀಣ್ಯತೆ ಸಾಧಿಸುವ ಗುರಿಯೊಂದಿಗೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಏನಿದು ‘ಕಲಿಕಾ ದೀಪ’ ಯೋಜನೆ?
2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಸುಸ್ಥಿತಿಯಲ್ಲಿರುವ ಕಂಪ್ಯೂಟರ್ ಲ್ಯಾಬ್ಗಳನ್ನು ಹೊಂದಿರುವ 1,145 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ‘ಏಕ್ ಸ್ಟೆಪ್’ (EkStep) ಫೌಂಡೇಶನ್ ಸಹಯೋಗದೊಂದಿಗೆ ಈ AI ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಇದರ ಮೂಲಕ 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 1,44,062 ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತದ ಆರಂಭಿಕ ಸಾಮರ್ಥ್ಯಗಳನ್ನು ಕರಗತ ಮಾಡಿಕೊಳ್ಳಲು ತರಬೇತಿ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ ಕಡ್ಡಾಯ ಅಭ್ಯಾಸ
ಸುತ್ತೋಲೆಯ ಪ್ರಕಾರ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಕಡ್ಡಾಯವಾಗಿ ಈ ಕಾರ್ಯಕ್ರಮವನ್ನು ಶಾಲಾ ವೇಳಾಪಟ್ಟಿಯಲ್ಲಿ ಅಳವಡಿಸಿಕೊಳ್ಳಬೇಕು.
ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ 3 ದಿನ ಈ ತಂತ್ರಾಂಶದ ಮೂಲಕ ಕಲಿಯಲು ಅವಕಾಶ ನೀಡಬೇಕು.
ಪ್ರತಿದಿನ 40 ನಿಮಿಷಗಳ ಕಾಲಾವಕಾಶ ನೀಡಲಿದ್ದು, ಇದರಲ್ಲಿ 20 ನಿಮಿಷ ಭಾಷೆ (ಕನ್ನಡ/ಇಂಗ್ಲಿಷ್) ಮತ್ತು 20 ನಿಮಿಷ ಗಣಿತ ವಿಷಯದ ಅಭ್ಯಾಸಕ್ಕೆ ಮೀಸಲಿಡಬೇಕು.
ಸದ್ಯಕ್ಕೆ ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ವಿದ್ಯಾರ್ಥಿ ಐಡಿ (Unique Student ID) ಬಳಸಿ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳಲ್ಲಿ ಲಾಗಿನ್ ಆಗಿ ಕಲಿಯಲಿದ್ದಾರೆ.
ಮೂಲಸೌಕರ್ಯ ಮತ್ತು ತರಬೇತಿ ಸಂಪೂರ್ಣ
ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಈಗಾಗಲೇ ರಾಜ್ಯ, ಜಿಲ್ಲಾ (DIET) ಮತ್ತು ತಾಲೂಕು ಮಟ್ಟದಲ್ಲಿ ಸಾವಿರಾರು ಸಂಪನ್ಮೂಲ ವ್ಯಕ್ತಿಗಳಿಗೆ (MRPs) ಮತ್ತು ಸುಮಾರು 5,000 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಎಸ್.ಎಸ್.ಕೆ (SSK) ಕಚೇರಿಯಿಂದ ಬಿಡುಗಡೆಯಾದ ಅನುದಾನವನ್ನು ಬಳಸಿ ಹೆಡ್ಸೆಟ್ (Headphones) ಮತ್ತು ಇಂಟರ್ನೆಟ್ ಸೌಲಭ್ಯವನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಆಯ್ಕೆಯಾದ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಪರಿಣಾಮಕಾರಿ ಮೇಲ್ವಿಚಾರಣೆ
ಯೋಜನೆಯ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದಲ್ಲಿ TALP ಮತ್ತು ಕಲಿಕಾ ದೀಪ ನೋಡಲ್ ಅಧಿಕಾರಿ, ತಾಲೂಕು ಮಟ್ಟದಲ್ಲಿ BRP ಹಾಗೂ ಶಾಲಾ ಹಂತದಲ್ಲಿ ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುತ್ತದೆ. ವಾಟ್ಸ್ಯಾಪ್ ಗ್ರೂಪ್ಗಳನ್ನು ರಚಿಸಿ, ವಿಡಿಯೋ ಕ್ಲಿಪ್ ಮತ್ತು ಪಿಪಿಟಿಗಳ ಮೂಲಕ ಶಿಕ್ಷಕರಿಗೆ ನಿರಂತರ ಮಾರ್ಗದರ್ಶನ ನೀಡಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.









