ಶಿವಮೊಗ್ಗ : ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಡಿಹೆಚ್ಓ ಡಾ. ನಟರಾಜ.ಕೆ.ಎಸ್ ತಿಳಿಸಿದರು.
ನಗರ ಆರೋಗ್ಯ ಕೇಂದ್ರ ತುಂಗಾನಗರ ವ್ಯಾಪ್ತಿಯ ನೇತಾಜಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯಡಿ ಏರ್ಪಡಿಸಲಾಗಿದ್ದ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳಿಂದ ದೂರವಿದ್ದು, ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಕ್ಷಯರೋಗ ಸೇರಿದಂತೆ ಯಾವುದೇ ರೋಗದಿಂದ ದೂರ ಉಳಿಯಬಹುದಾಗಿದೆ. ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ಭಾರತದಲ್ಲಿ 25 ಲಕ್ಷ ಟಿಬಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1806 ಪ್ರಕರಣ ವರದಿಯಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ಷಯ ರೋಗ ಹರಡುವ ಪ್ರಮಾಣ ಶೇ.21 ಕಡಿಮೆ ಯಾಗಿದೆ. ಈ ಪ್ರಮಾಣವನ್ನು ಇನ್ನೂ ತಗ್ಗಿಸುವ ಅವಶ್ಯಕತೆ ಇದ್ದು, ಶೀಘ್ರ ಪತ್ತೆ, ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆಯಿಂದ ಇದು ಸಾಧ್ಯ ಎಂದರು.
ರೋಟರಿ ಸಂಸ್ಥೆಯ ಬಸವರಾಜ್ ಬಿ ಮಾತನಾಡಿ, ಸಂಸ್ಥೆಯ ವತಿಯಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ನಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನಿಡುತ್ತೇವೆ ಎಂದರು.
ಕಾರ್ಯಕ್ರಮದ ಅಂಗವಾಗಿ ಚಿಕಿತ್ಸೆಯಲ್ಲಿರುವವರಿಗೆ ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸಲಾಯಿತು. ಈ ಜಾಥಾ ಕಾರ್ಯಕ್ರಮದಲ್ಲಿ ತಮಟೆ ಜಗದೀಶ್ ಕಲಾ ತಂಡ ಭದ್ರಾವತಿ ಇವರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೀದಿ ನಾಟಕ ನಡೆಸಿಕೊಟ್ಟರು.
ಜಾಥಾವು ನೇತಾಜಿ ವೃತ್ತದಿಂದ ಜೆ.ಪಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿತು.
ಕಾರ್ಯಕ್ರಮದಲ್ಲಿ ಡಾ. ಕಿರಣ್.ಎಸ್.ಕೆ ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು, ಡಾ. ಚಂದ್ರಶೇಖರ್ ಟಿ.ಹೆಚ್.ಒ, ಐ.ಎಂ.ಎ ಯ ಅಧ್ಯಕ್ಷರು ಹಾಗೂ ಸದಸ್ಯರು ಆದ ಡಾ. ರವೀಶ, ಡಾ. ಸುಭ್ರತಾ, ಡಾ. ಕೌಸ್ತುಬ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರಾದ ಬಸವರಾಜ್, ಕಿರಣ್ ಮತ್ತು ಇತರರು, ಮಹಮ್ಮದ್ ನಜೀರ್ ಅಧ್ಯಕ್ಷರು ನೂರುಲ್ಲಾ ಇಸ್ಲಾಂ ಮಸೀದಿ, ನಜೀಮಾ, ಜೈ ಕರ್ನಾಟಕ ಮಹಿಳಾ ಸದಸ್ಯರು, ಸಮಾಜ ಸೇವಕ ಬಸವರಾಜಪ್ಪ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ನಂಜಪ್ಪ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀನಿವಾಸ್ ಸ್ವಾಗತಿಸಿ, ಶ್ರೀ ಕುಮಾರ್ ಎಸ್ ನಿರೂಪಿಸಿದರು. ಜಾಥಾ ಕಾರ್ಯಕ್ರಮವನ್ನು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಮಾಪ್ತಿಗೊಳಿಸಲಾಯಿತು.








