ಶಿವಮೊಗ್ಗ: ಜ್ಞಾನದ ದೇಗುಲವೆಂದು ಕರೆಯಲ್ಪಡುವ ಸಾಗರದ ಶೆಡ್ತೀಕೆರೆ ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಶಿಕ್ಷಕರಿಂದಲೇ ಸಮೂಹ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಮತ್ತು ಅದರ ನಂತರದ ಬೆಳವಣಿಗೆಗಳು ಇಡೀ ಶಿಕ್ಷಣ ಇಲಾಖೆಯ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಸಾಗರ ತಾಲ್ಲೂಕಿನ ಶೇಡ್ತಿಕೇರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಈ ಘಟನೆ, ವ್ಯವಸ್ಥೆಯು ಹೇಗೆ ಸಂತ್ರಸ್ತ ಮಗುವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಆ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಿ.ಟಿ ಸತ್ಯನಾರಾಯಣ ಅವರು ಸೋಷಿಯಲ್ ಮೀಡಿಯಾದಲ್ಲಿ ಎತ್ತಿರುವ ಪ್ರಶ್ನೆಗಳು ಮುಂದಿದೆ ಓದಿ..
ವ್ಯವಸ್ಥಿತ ಸಂಚಿನ ರೂಪವೇ ಈ ‘ಸಭಾ ನಡಾವಳಿ’?
ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆದು, ಆ ಮಗು ದೈಹಿಕ ಮತ್ತು ಮಾನಸಿಕ ನೋವಿನಿಂದ ನರಳುತ್ತಿರುವಾಗ, ಆತನಿಗೆ ಮತ್ತು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾದ ಶಿಕ್ಷಣ ಇಲಾಖೆ ಮತ್ತು ಎಸ್ಡಿಎಂಸಿ (SDMC) ಪದಾಧಿಕಾರಿಗಳು ಮಾಡಿದ್ದೇನು? ಲಭ್ಯವಿರುವ ಸಭಾ ನಡಾವಳಿಗಳನ್ನು ಗಮನಿಸಿದರೆ, ಅಲ್ಲಿ ನಡೆದಿದ್ದು ಮಗುವಿನ ಪರವಾದ ಚರ್ಚೆಯಲ್ಲ, ಬದಲಾಗಿ ಹಲ್ಲೆ ಮಾಡಿದ ಶಿಕ್ಷಕರನ್ನು ರಕ್ಷಿಸುವ ‘ಆರೋಪ ಪಟ್ಟಿ’ಯ ತಯಾರಿ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಒಂದು ಮಗು ತಪ್ಪು ಮಾಡಿದ್ದರೆ ಅದನ್ನು ತಿದ್ದಲು ಕಾನೂನಾತ್ಮಕ ಮತ್ತು ವೈಜ್ಞಾನಿಕ ಮಾರ್ಗಗಳಿವೆ. ಆದರೆ, ಮೈ ತುಂಬಾ ಬಾಸುಂಡೆ ಬರುವಂತೆ ಹೊಡೆದು, ನಂತರ ಆ ಹಲ್ಲೆಯನ್ನು ಸಮರ್ಥಿಸಿಕೊಳ್ಳಲು ಮಗುವಿನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಮಕ್ಕಳನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಅಮಾನವೀಯತೆ
ಈ ಪ್ರಕರಣದಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ, ಹಿರಿಯರು ತಮ್ಮ ಬೇಳೆ ಬೇಯಿಸಿಕೊಳ್ಳಲು ಶಾಲಾ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು. ಸಭೆಯಲ್ಲಿ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ತಮ್ಮದೇ ಸಹಪಾಠಿಯ ವಿರುದ್ಧ ಕಂಠಪಾಠ ಮಾಡಿದಂತೆ ಆರೋಪಗಳನ್ನು ಮಾಡುತ್ತಾರೆ. ಆದರೆ “ನೀವು ಇದನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ಅಂದರೆ, ಮಗುವನ್ನು ಮಾನಸಿಕವಾಗಿ ಜರ್ಜರಿತಗೊಳಿಸಲು ಇತರ ಮಕ್ಕಳ ಬಾಯಲ್ಲಿ ಸುಳ್ಳು ಹೇಳಿಸುವ ಮಟ್ಟಕ್ಕೆ ಈ ‘ಶಿಕ್ಷಣದ ಹರಿಕಾರರು’ ಇಳಿದಿದ್ದಾರೆಯೇ? ಎನ್ನುವ ಅನುಮಾನ ವ್ಯಕ್ತಪಡಿಸುತ್ತಾರೆ.
ಪ್ರಶ್ನಿಸಬೇಕಾದ ಗಂಭೀರ ಅಂಶಗಳು:
- ಶಿಕ್ಷಕರ ಜವಾಬ್ದಾರಿ ಎಲ್ಲಿ?: ಮಗು ಸಿಗರೇಟ್ ಸೇದುತ್ತಿತ್ತು ಎಂಬುದು ಶಿಕ್ಷಕರ ಆರೋಪ. ಒಂದು ವೇಳೆ ಇದು ನಿಜವೇ ಆಗಿದ್ದರೂ, ಶಾಲಾ ಆವರಣದಲ್ಲಿ ಅಂತಹ ಚಟುವಟಿಕೆ ನಡೆಯಲು ಹೆಡ್ ಮಾಸ್ಟರ್ ಮತ್ತು ಶಿಕ್ಷಕರ ಬೇಜವಾಬ್ದಾರಿ ಕಾರಣವಲ್ಲವೇ?
- ಹಲ್ಲೆ ಖಂಡನೀಯವಲ್ಲವೇ?: ಎಸ್ಡಿಎಂಸಿ ಸಭೆಯಲ್ಲಿ ಮಗುವಿನ ಮೇಲಿನ ಹಲ್ಲೆಯನ್ನು ಖಂಡಿಸುವ ಅಥವಾ ಹಲ್ಲೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಒಂದು ಸಾಲಾದರೂ ಚರ್ಚೆಯಾಗಿದೆಯೇ? ಇಲ್ಲ. ಬದಲಾಗಿ ನ್ಯಾಯ ಕೇಳಲು ಬಂದ ಪೋಷಕರ ವಿರುದ್ಧವೇ ಪೊಲೀಸ್ ಮೆಟ್ಟಿಲೇರುವ ತಂತ್ರ ರೂಪಿಸಲಾಗಿದೆ.
- ರಾಜಕೀಯ ಮತ್ತು ಸಂಘಟನೆಗಳ ಹಸ್ತಕ್ಷೇಪ: ಶಿಕ್ಷಣದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸಂಘಟನೆಗಳು, ಆರೋಪಿ ಶಿಕ್ಷಕರ ಬೆನ್ನಿಗೆ ನಿಂತು ಮಗುವನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಮಕ್ಕಳು ತಪ್ಪು ಮಾಡುವುದು ಸಹಜ, ಅವರನ್ನು ಪ್ರೀತಿ ಮತ್ತು ಮಾರ್ಗದರ್ಶನದ ಮೂಲಕ ಸರಿದಾರಿಗೆ ತರುವುದು ಶಿಕ್ಷಕರ ಧರ್ಮ. ಆದರೆ ಇಲ್ಲಿ ಶಿಕ್ಷಕರ ಕ್ರೌರ್ಯವನ್ನು ಮುಚ್ಚಿ ಹಾಕಲು ಇಡೀ ಇಲಾಖೆಯೇ ವ್ಯವಸ್ಥೆ ಪರ ನಿಂತಿರೋದು ದುರಂತ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರೇ, ನಿಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅನ್ಯಾಯದ ವಿರುದ್ಧ ನೀವು ಧ್ವನಿ ಎತ್ತುತ್ತೀರಾ? ಶೇಡ್ತಿಕೇರಿ ಶಾಲೆಯ ಮಗುವಿಗೆ ನ್ಯಾಯ ಸಿಗುತ್ತದೆಯೇ? ಅಥವಾ ವ್ಯವಸ್ಥೆಯು ಹೀಗೆಯೇ ಮಗುವನ್ನು ಬಲಿಪಶು ಮಾಡುತ್ತದೆಯೇ? ನ್ಯಾಯ ಪ್ರಜ್ಞೆ ಸತ್ತಿರುವ ಈ ವ್ಯವಸ್ಥೆಯಲ್ಲಿ ಅಕ್ಷರ ಕಲಿಸುವ ಗುರುಗಳೇ ‘ಅನ್ಯಾಯದ ಶಿಲ್ಪಿಗಳಾಗುತ್ತಿರುವುದು’ ಸಮಾಜದ ಪತನದ ಮುನ್ಸೂಚನೆಯಾಗಿದೆ ಎಂಬುದಾಗಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಒಟ್ಟಾರೆಯಾಗಿಜಿ. ಟಿ. ಸತ್ಯನಾರಾಯಣ ಕರೂರು ಅವರು ಎತ್ತಿರುವ ಪ್ರಶ್ನೆಗಳು ಕೇವಲ ಒಂದು ಶಾಲೆಯದ್ದಲ್ಲ, ಇಡೀ ಶಿಕ್ಷಣ ವ್ಯವಸ್ಥೆಯ ನೈತಿಕತೆಯನ್ನೇ ಅಲುಗಾಡಿಸುವಂತಿವೆ. ಮಗುವನ್ನು ತಿದ್ದಬೇಕಾದ ಕೈಗಳು ಮಗುವಿನ ಮೇಲೆ ಹಲ್ಲೆ ನಡೆಸಿ, ಬಳಿಕ ಆ ತಪ್ಪನ್ನು ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ರೂಪಿಸುವುದು ಅತ್ಯಂತ ಆತಂಕಕಾರಿ ಬೆಳವಣಿಗೆ.
ಜಿ. ಟಿ. ಸತ್ಯನಾರಾಯಣ ಕರೂರು ಅವರ ಸೋಷಿಯಲ್ ಮೀಡಿಯಾದ ಯಥಾ ರೂಪದ ಬರಹ ಹೀಗಿದೆ…
Coffee ವಿತ್ ಜಿ ಟಿ
Madhu Bangarappa ಸರ್..
ಇದನ್ನ ನಂಬಬಹುದೇ..? ಸಾಗರ ತಾಲ್ಲೂಕು ಶೇಡ್ತಿಕೇರಿ ಸರ್ಕಾರಿ ಶಾಲೆಯಲ್ಲಿ ಇಷ್ಟೇಲ್ಲಾ ಚಟುವಟಿಕೆ ನಡೆಯುತಾ ಇತ್ತಾ..? ಇಷ್ಟೆಲ್ಲಾ ನಡೆಯುತ್ತಾ ಇದ್ದರೂ ಶಾಲೆಯ ಹೆಡ್ ಮಾಸ್ಟರ್ ಮತ್ತು ಇತರೆ ಶಿಕ್ಷಕರಿಗೆ ಇವುಗಳ ಬಗ್ಗೆ ಅರಿವೇ ಇಲ್ಲವೇ..? ಹಾಗಾದರೆ ಈ ಸರ್ಕಾರಿ ಸಂಬಳ ತೆಗೆದುಕೊಂಡು ಶೈಕ್ಷಣಿಕ ವ್ಯವಸ್ಥೆಯನ್ನು ಮುನ್ನೆಡೆಸುವ ಈ ಶಿಕ್ಷಕರು ಜವಾಬ್ದಾರಿ ನಿಬಾಯಿಸಿದ್ದಾರ..?
ಅಬ್ಬಾ…
ಮಗುವಿನ ಮೇಲೆ ಹಲ್ಲೆ ಮಾಡಿದ ಶಿಕ್ಷಕರನ್ನು ಉಳಿಸಲೆಬೇಕು ಎಂದು ಸಾಗರದ ಶಿಕ್ಷಣ ಇಲಾಖೆ ಮತ್ತು ಕೆಲವು ಸಂಘಟನೆಗಳು ವಿದ್ಯಾರ್ಥಿ ವಿರುದ್ಧ ಆರೋಪ ಪಟ್ಟಿ ತಯಾರಿಸಲು ಕರೆದಂತೆ ಇರುವ sdmc ಸಭೆಯ ಅಧಿಕೃತ ಸಭಾ ನಡಾವಳಿ ಇದು.
ತನ್ನದೇ ಶಾಲೆಯ ಮಗು ಅದು ಏನೇ ತಪ್ಪು ಮಾಡಿರಲಿ ಅವನ ಮೇಲೆ ಶಿಕ್ಷಕರು ಸಮೂಹ ಹಲ್ಲೆ ಮಾಡಿ ಮೈ ತುಂಬಾ ಬಾಸುಂಡೆ ತಿಂದು ನೋವು ತಿಂದು ಮಲಗಿರುವಾಗ ಆತನಿಗೆ ಕುಟುಂಬಕೆ ನೈತಿಕ ಬಲ ತುಂಬ ಬೇಕಾದ ಶಿಕ್ಷಣ ಇಲಾಖೆ sdmc ಯವರ ಸೀಮಿತ ತಿಳುವಳಿಕೆಯನ್ನು ದಾಳ ಆಗಿಸಿಕೊಂಡು ಆರೋಪಿ ಶಿಕ್ಷಕರನ್ನ ಉಳಿಸಲು ಈ ತರಹದ ಕಸರತ್ತು ನಡೆಸಿದೆ. ಈ ಸಭಾ ನಡಾವಳಿ ಇಟ್ಟಿಕೊಂಡು ಸಾಗರ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿ ಶಾಲೆಯ ಪಾಠ ಪ್ರವಚನಕೆ ವಿದ್ಯಾರ್ಥಿಯ ಪೋಷಕರು ಮತ್ತು ನ್ಯಾಯ ಕೇಳುವವರಿಂದ ತೊಂದರೆ ಆಗುತ್ತಾ ಇದೆ ಎಂದು ದೂರು ನೀಡಲು ಮುಂದಾಗುತ್ತದೆ.
ಅಬ್ಬಾ.. ಸಾಗರ ಶಿಕ್ಷಣ ಇಲಾಖೆಯ ರಾಜಕೀಯವೆ..?
ಲಭ್ಯ ಇರುವ ಇನ್ನೊಂದು ವೀಡಿಯೊ ನೋಡಿದೆ. ಅದರಲ್ಲಿ ಸಭೆಯಲ್ಲಿ ಮಕ್ಕಳು ಒಬ್ಬರು ಆದ ಮೇಲೆ ಒಬ್ಬರು ತಮ್ಮದೇ ಸಹಪಾಟಿ ಮೇಲೆ ಕಂಠಪಾಠ ಮಾಡಿದ ಹಾಗೆ ನಡಾವಳಿಯಲ್ಲಿ ಉಲ್ಲೆಖಿತ ಆರೋಪಗಳನ್ನ ಹೇಳುತ್ತಾರೆ. ನೀವು ನೋಡಿದಿರಾ ಎಂದು ಪ್ರಶ್ನೆ ಕೇಳಿದರೆ ಇಲ್ಲ ಎನ್ನುತ್ತವೆ ಮಕ್ಕಳು. ಹಾಗಾದರೆ ಇದರ ಹಿಂದೆ ಇರುವವವರು ಯಾರು..? ಸಿಗರೇಟು ಸೇದಿದ ಎಂಬುದು ಗಂಭೀರ ಆರೋಪ. ಶಾಲೆ ಆವರಣದಲ್ಲಿ ಸಿಗರೇಟ್ ನ್ನು ಶಿಕ್ಷಕರು ಸೇದಬಾರದು ಅಲ್ವಾ..?
ಈ ಶಿಕ್ಷಕರು ಆವರ ಹಿಂದೆ ಇರುವ ಸಂಘಟನೆಗಳ ರಾಜಕೀಯ ನೋಡಿ ಫಿಚ್ಚೆನಿಸುತ್ತದೆ. ಯಾವುದೇ ಶಾಲೆ ಆಗಲಿ sdmc ಗಳಿಗೆ ತಮ್ಮ ಶಾಲೆಯ ಬಗ್ಗೆ ಅಪಾರ ಕಾಳಜಿ ಇರುತ್ತದೆ. ಆದರೆ ಆ ಕಾಳಜಿಯನ್ನು ಶಿಕ್ಷಕರು ದುರುಪಯೋಗ ಮಾಡಿಕೊಳ್ಳಬಾರದು. ಶೇಡ್ತಿಕೇರಿ ಶಾಲೆ ಸಭೆಯಲ್ಲಿ ಮಗುವಿನ ಹಲ್ಲೆ ಬಗ್ಗೆ ಖಂಡನೆ ನಡಾವಳಿ ಮಾಡಿದ್ದಾರ..? ಹಲ್ಲೆ ಮಾಡಿದ ಶಿಕ್ಷಕರ ತಂಡ ವಿರುದ್ದ ಕ್ರಮಕೆ ಇಲಾಖೆ ಮತ್ತು ಪೋಲೀಸ್ ಗೆ ದೂರು ಕೊಟ್ಟಿದ್ದಾರ..? ಇಲ್ಲವಲ್ಲ. ಬದಲಿಗೆ ಸಂತ್ರಸ್ತ ಮಗುವನ್ನು ಆರೋಪಿ ಎಂದು ಬಿಂಬಿಸುವ ಪ್ರಚಾರ ಮತ್ತು ಸಭಾ ನಡಾವಳಿ ಮಾಡಲಾಗಿದೆ.
ಈ ಪ್ರಕರಣದಲ್ಲಿ ಮತ್ತು ಈ ಸಭೆಯಲ್ಲಿ ಕೂಡಾ ಶಿಕ್ಷಣ ಇಲಾಖೆ ಮತ್ತು ಸಂಘಟನೆಗಳು ಆರೋಪಿ ಶಿಕ್ಷಕರನ್ನು ರಕ್ಷಣೆ ನೀಡಲು ತಮ್ಮ ಹೃದಯ ಅಡ ಇಟ್ಟು ಬುದ್ದಿಯನ್ನು ಬಳಸಿವೆ.
ತಮ್ಮ ಶಿಕ್ಷಕರ ಕ್ರೋರ್ಯ ಮುಚ್ಚುವ ಪ್ರಯತ್ನದಲ್ಲಿ ಮಗುವನ್ನು ಆರೋಪಿ ಮಾಡಿ ಆತನ ಮೇಲೆ ಇನ್ನಷ್ಟು ಮಾನಸಿಕ ಜರ್ಜರಿತ ಆಗುವ ಹಾಗೆ ಸ್ವತಃ ಶಿಕ್ಷಣ ಇಲಾಖೆ ನಡೆದುಕೊಂಡಿದೆ. ನ್ಯಾಯ ಪ್ರಜ್ಞೆ ಇಲ್ಲದೆ ಇರುವ ಸಂಘಟನೆಗಳು ಮತ್ತು ಶಿಕ್ಷಕರುಗಳು ಇಲಾಖೆಯನ್ನು ಯಾವ ಮಟ್ಟಕ್ಕೆ ಇಳಿಸುತ್ತಾರೆ ಎನ್ನುವುದಕ್ಕೆ ಶೇಡ್ತಿಕೇರಿ ಪ್ರಕರಣ ಸಾಕ್ಷಿ ಆಗಿದೆ.
ಜಿ ಟಿ ಕರೂರು…








