ಶಿವಮೊಗ್ಗ: ಸಾಗರ ಮಲೆನಾಡಿನ ಹೆಬ್ಬಾಗಿಲು, ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವರ ರಥೋತ್ಸವವು ಭಾನುವಾರ ಅತ್ಯಂತ ವಿಜೃಂಭಣೆ ಮತ್ತು ಭಕ್ತಿಭಾವದಿಂದ ಸಂಪನ್ನಗೊಂಡಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ, ವೇದಘೋಷಗಳ ನಡುವೆ ನಡೆದ ಈ ರಥೋತ್ಸವವು ಸಾಗರದ ಧಾರ್ಮಿಕ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಬರೆದಿದೆ. ಬಿಸಿಲಿನ ದಗೆಯನ್ನೂ ಲೆಕ್ಕಿಸದೆ ಹರಿದುಬಂದ ಭಕ್ತ ಸಾಗರವು ‘ಗಜಮುಖನಿಗೆ ಜಯವಾಗಲಿ’ ಎಂಬ ಉದ್ಘೋಷದೊಂದಿಗೆ ರಥವನ್ನು ಎಳೆದು ಪುನೀತರಾದರು.
ಧಾರ್ಮಿಕ ವಿಧಿವಿಧಾನಗಳ ಭವ್ಯತೆ
ಭಾನುವಾರ ಬೆಳಿಗ್ಗೆ 8:15ರ ಶುಭ ಮುಹೂರ್ತದಲ್ಲಿ ರಥೋತ್ಸವದ ಧಾರ್ಮಿಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ನವೀನ್ ಜೋಯ್ಸ್ ಅವರ ನೇತೃತ್ವದಲ್ಲಿ ಗಣಪತಿ ದೇವರಿಗೆ ವಿಶೇಷ ಅಭಿಷೇಕ, ಹೋಮ-ಹವನ ಹಾಗೂ ಅಲಂಕಾರ ಪೂಜೆಗಳು ನಡೆದವು. ಅರ್ಚಕ ಬಿ.ಎನ್. ಜಗದೀಶ್ ಅವರು ತಾಂತ್ರಿಕ ವಿಧಿವಿಧಾನಗಳಿಗೆ ಸಹಕರಿಸಿದರು.

ಬೆಳಿಗ್ಗೆಯಿಂದಲೇ ಶ್ರೀ ಗಣಪತಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತದನಂತರ ಭವ್ಯವಾಗಿ ಅಲಂಕರಿಸಲ್ಪಟ್ಟ ರಥಕ್ಕೆ ದೇವಸ್ಥಾನದ ಆವರಣದಲ್ಲಿ ರಥಾರೋಹಣ ಮಾಡಲಾಯಿತು. ಮಹಾಮಂಗಳಾರತಿಯ ನಂತರ ನಡೆದ ‘ಕನಕವೃಷ್ಟಿ’ (ರಥದ ಮೇಲಿಂದ ನಾಣ್ಯ ಮತ್ತು ಹೂವುಗಳನ್ನು ಎರಚುವ ಸಂಪ್ರದಾಯ) ಭಕ್ತರ ವಿಶೇಷ ಆಕರ್ಷಣೆಯಾಗಿತ್ತು. ಇದಾದ ಕೂಡಲೇ ಸಾವಿರಾರು ಕೈಗಳು ರಥದ ಹಗ್ಗವನ್ನು ಹಿಡಿದು ಎಳೆಯುತ್ತಿದ್ದಂತೆ, ಸಾಗರದ ರಥಬೀದಿಯು ಭಕ್ತಿಯ ಪರವಶತೆಯಲ್ಲಿ ಮುಳುಗಿತು.
ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ರಥೋತ್ಸವದ ಈ ಪವಿತ್ರ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, “ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಜಾಗತಿಕ ಶಾಂತಿಗೆ ದೊಡ್ಡ ಧಕ್ಕೆಯುಂಟುಮಾಡಿದೆ. ಈ ಯುದ್ಧದ ಬಿಸಿ ಭಾರತದ ಮೇಲೂ ತಟ್ಟಿದ್ದು, ಜನರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಜಗತ್ತಿನಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಲಿ, ಯುದ್ಧದ ಭೀತಿ ದೂರವಾಗಲಿ ಎಂದು ಶ್ರೀ ಮಹಾಗಣಪತಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಅಲ್ಲದೆ, ಶಾಸಕರು ಸ್ವತಃ ಅನ್ನದಾಸೋಹದ ಪಂಕ್ತಿಯಲ್ಲಿ ನಿಂತು ಭಕ್ತಾದಿಗಳಿಗೆ ಊಟ ಬಡಿಸುವ ಮೂಲಕ ಗಮನ ಸೆಳೆದರು.
ಸಾಗರದ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಟಿ.ವಿ. ಪಾಂಡುರಂಗ ಅವರು ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಜಾತ್ರೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಹೇಳಿದರು.

ಬಿಸಿಲಿನ ದಗೆಯನ್ನೂ ಮೆಟ್ಟಿ ನಿಂತ ಭಕ್ತಿ
ಮಲೆನಾಡಿನಲ್ಲಿ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಿದ್ದರೂ, ಭಕ್ತರ ಉತ್ಸಾಹಕ್ಕೆ ಅದು ಅಡ್ಡಿಯಾಗಲಿಲ್ಲ. ಸಾಗರದ ಮೂಲ ನಿವಾಸಿಗಳು ದೇಶದ ಯಾವುದೇ ಮೂಲೆಯಲ್ಲಿದ್ದರೂ ಈ ರಥೋತ್ಸವದ ದಿನ ಸಾಗರಕ್ಕೆ ಬರುವುದು ಒಂದು ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. ಪಂಚಕಜ್ಜಾಯ ಪ್ರಸಾದವನ್ನು ದೇವರಿಗೆ ಸಮರ್ಪಿಸಿ, ಹಣ್ಣು-ಕಾಯಿ ಮಾಡಿಸಿಕೊಂಡು ಹರಕೆ ತೀರಿಸುವ ಸಂಭ್ರಮ ಎಲ್ಲೆಡೆ ಮನೆಮಾಡಿತ್ತು.
ಜಾತ್ರೆಯ ಸಂಭ್ರಮಕ್ಕೆ ಮರುಗು ನೀಡುವಂತೆ ರಥಬೀದಿಯ ನಿವಾಸಿಗಳು ಸ್ವಯಂಪ್ರೇರಿತರಾಗಿ ರಸ್ತೆಯುದ್ದಕ್ಕೂ ಭಕ್ತರಿಗೆ ತಂಪು ಪಾನೀಯ ಮತ್ತು ಮಜ್ಜಿಗೆ ವಿತರಿಸುವ ಮೂಲಕ ಮಾನವೀಯತೆ ಮೆರೆದರು. ಗಣಾಧೀಶ್ವರ ಯುವಕ ಸಂಘದ ಸದಸ್ಯರು ಭಕ್ತಾದಿಗಳಿಗೆ ಚಿತ್ರಾನ್ನ ಮತ್ತು ಮೊಸರನ್ನದ ಪ್ರಸಾದ ವಿತರಣೆ ಮಾಡಿ ದಣಿವಾರಿಸಿದರು.

‘ಗ್ಯಾಸ್ ಟ್ರಬಲ್’ನಿಂದ ಸೌದೆ ಒಲೆಯಲ್ಲಿ ಅನ್ನ ಪ್ರಸಾದ ತಯಾರಿಕೆ
ಜಾಗತಿಕ ಯುದ್ಧದ ಬಿಸಿ ಸಾಗರದ ಗಣಪತಿ ಜಾತ್ರೆಗೂ ತಟ್ಟಿದೆ ಎಂಬುದು ಇಲ್ಲಿನ ಅನ್ನದಾಸೋಹದ ಅಡುಗೆ ಮನೆಯಲ್ಲಿ ಕಂಡುಬಂದ ವಿಶೇಷ ಸಂಗತಿ. ಅಡುಗೆ ಅನಿಲದ (LPG) ಅಭಾವದ ಹಿನ್ನೆಲೆಯಲ್ಲಿ ಈ ಬಾರಿ ಗಣಪತಿ ಜಾತ್ರೆಯ ಅನ್ನದಾಸೋಹಕ್ಕೆ ಸೌದೆ ಒಲೆಗಳನ್ನೇ ಅವಲಂಬಿಸಲಾಗಿದೆ. ಇದಕ್ಕಾಗಿ ಟನ್ಗಟ್ಟಲೆ ಕಟ್ಟಿಗೆಯನ್ನು ದಾಸ್ತಾನು ಮಾಡಲಾಗಿದ್ದು, ಬಿಸಿಲಿನ ತಾಪದ ಮಧ್ಯೆಯೂ ಬಾಣಸಿಗರು ಶ್ರದ್ಧೆಯಿಂದ ಸಾವಿರಾರು ಜನರಿಗೆ ಆಹಾರ ಸಿದ್ಧಪಡಿಸುತ್ತಿರುವುದು ಗಮನಾರ್ಹವಾಗಿತ್ತು. ಮಾರ್ಚ್ 27ರವರೆಗೆ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಬುಧವಾರ ಸಾರ್ವತ್ರಿಕ ಗಣಹೋಮ ಏರ್ಪಡಿಸಲಾಗಿದೆ.
ಜಾತ್ರೆಯ ವೈವಿಧ್ಯತೆ ಮತ್ತು ಸಂಭ್ರಮ
ಜಾತ್ರೆ ಎಂದರೆ ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಬಣ್ಣಬಣ್ಣದ ಲೋಕ. ಉತ್ತರ ಪ್ರದೇಶದ ವ್ಯಾಪಾರಸ್ಥರು ತಂದಿರುವ ವೈವಿಧ್ಯಮಯ ಕೊಳಲುಗಳು ಈ ಬಾರಿ ಮಕ್ಕಳ ಮತ್ತು ಯುವಕರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ರಥಬೀದಿಯ ಇಕ್ಕೆಲಗಳಲ್ಲಿ ಹೆಣ್ಣುಮಕ್ಕಳು ಬಳೆ ಮತ್ತು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದರೆ, ಮಕ್ಕಳು ಬೆಂಡು-ಬತ್ತಾಸು ಹಾಗೂ ಸಿಹಿ ಪದಾರ್ಥಗಳ ರುಚಿ ಸವಿಯುತ್ತಿದ್ದರು.

ಜೊತೆಗೆ, ಜೋಗತಿಯರು ಮತ್ತು ಎಲ್ಲಮ್ಮನ ಸಾಂಪ್ರದಾಯಿಕ ಜಾನಪದ ಕಲಾತಂಡಗಳು ಜಾತ್ರೆಯುದ್ದಕ್ಕೂ ಜನಪದ ಸಂಸ್ಕೃತಿಯ ಕಂಪನ್ನು ಹರಡುತ್ತಿವೆ. ಸೋಮವಾರದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ನಡೆಯಲಿವೆ.
ಗಣ್ಯರ ಉಪಸ್ಥಿತಿ
ಈ ಭವ್ಯ ಸಮಾರಂಭದಲ್ಲಿ ಸಾಗರದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ, ಪ್ರಮುಖರಾದ ಐ.ವಿ. ಹೆಗಡೆ, ಉದ್ಯಮಿ ಲಿಂಗರಾಜು, ಗೌತಮ್, ಅಶೋಕ್ ಬೇಳೂರು, ಮಾಜಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಾಶಿವ ಜೋಯಿಸ್, ಹರ್ಷವರ್ಧನ್ ಭಟ್ ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಒಟ್ಟಾರೆಯಾಗಿ ಸಾಗರದ ಶ್ರೀ ಮಹಾಗಣಪತಿ ರಥೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಗಮವಾಗಿ ಮೂಡಿಬಂದಿದೆ. ಅಲ್ಲದೇ ಸಾಗರದಲ್ಲಿ ಶ್ರೀ ಮಹಾಗಣಪತಿ ರಥೋತ್ಸವ ಅದ್ಧೂರಿಯಾಗಿ ನೆರವೇರುವ ಮೂಲಕ, ಭಕ್ತಿಯ ಪರಾಕಾಷ್ಠೆ, ಸಂಸ್ಕೃತಿಯ ಸಂಗಮ ಮೇಳೈಸಿದ್ದು ಕಂಡು ಬಂದಿತು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ
ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು








