ಬೆಂಗಳೂರು : “ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಇಂದು ಜಿಬಿಎ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕರೆದು ಪಾಲಿಕೆಗಳ ಬಜೆಟ್ ಕುರಿತು ಸಭೆ ನಡೆಸಲಾಯಿತು. ಇದರ ಜತೆಗೆ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜಿಬಿಎ ಕಾರ್ಯಕಾರಿ ಸಭೆಯನ್ನು ನಡೆಸಲಾಗಿದೆ. ಪೊಲೀಸ್, ಬೆಸ್ಕಾಂ, ಬಿಎಂಆರ್ ಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಬಿಡಿಎ ಅಧಿಕಾರಿಗಳು, ಸಚಿವರು, ಶಾಸಕರು, ಸಚಿವರು ಭಾಗವಹಿಸಿದ್ದರು” ಎಂದು ಮಾಹಿತಿ ನೀಡಿದರು.
“ಐದೂ ಪಾಲಿಕೆಗಳು ತಮ್ಮದೇ ಆದ ಪ್ರತ್ಯೇಕ ಬಜೆಟ್ ತಯಾರಿಸಿಕೊಂಡಿದ್ದಾರೆ. ಶಾಸಕರುಗಳು ಕೂಡ ತಮ್ಮ ಮನವಿ ಸಲ್ಲಿಸಿದ್ದಾರೆ. ವಾರ್ಡ್ ವಾರು ಅನುದಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ತರಲು ತೀರ್ಮಾನಿಸಿದ್ದೇವೆ. ನಾಗರೀಕರು ಪಾದಚಾರಿ ಮಾರ್ಗದಲ್ಲಿ ಸಾಗಲು ಪರದಾಡುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದು, ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ, ಜನರಿಗೆ ಪಾದಚಾರಿ ಮಾರ್ಗದಲ್ಲಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ನಿಗದಿ ಮಾಡಬೇಕು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ” ಎಂದು ತಿಳಿಸಿದರು.
“ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ, ಅಧಿಕಾರಿಗಳು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೋಗಲಿದ್ದಾರೆ. ಈಗಲೇ ಈ ವಿಚಾರದಲ್ಲಿ ಜನರು ಜಾಗೃತರಾಗಬೇಕು” ಎಂದು ಹೇಳಿದರು.
“60 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, 30 ಸಾವಿರ ಮಂದಿ ನಮಗೆ ವಾಹನ ಬೇಕು ಎಂದು ಕೇಳಿದ್ದಾರೆ. ಅದಕ್ಕೆ ಟೆಂಡರ್ ಕರೆಯಲಾಗಿದೆ. ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಯಾರು ಗುರುತಿನ ಚೀಟಿ ಹೊಂದಿಲ್ಲ, ಅಂತಹವರಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ” ಎಂದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ಘೋಷಣೆಗೂ ಮುನ್ನ ದಾವಣಗೆರೆ ಉಪಚುನಾವಣೆಯಲ್ಲಿ ಸಮರ್ಥ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವೆ” ಎಂದು ತಿಳಿಸಿದರು.
ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ
ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್








