ಸಿಂಧನೂರು: ಆಧ್ಯಾತ್ಮಿಕ ಜೀವನ ಹಾಗೂ ಶಿಕ್ಷಕ ವೃತ್ತಿ ಎರಡನ್ನೂ ನಿಭಾಯಿಸುತ್ತಿದ್ದ ಸ್ವಾಮೀಜಿಯೊಬ್ಬರು ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ದೇವೇಂದ್ರಪ್ಪ (58) ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ಇವರು, ಕಳೆದ 20 ವರ್ಷಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ವೈರಾಗ್ಯದ ಹಾದಿ ಹಿಡಿದಿದ್ದ ಶಿಕ್ಷಕ
ಶಿಕ್ಷಕ ವೃತ್ತಿಯ ನಡುವೆಯೇ ವೈರಾಗ್ಯ ಜೀವನದತ್ತ ಆಕರ್ಷಿತರಾಗಿದ್ದ ದೇವೇಂದ್ರಪ್ಪ ಅವರು, ಬಸಾಪುರ ಗ್ರಾಮದಲ್ಲಿ ಶಿವಾನಂದ ಜಗದ್ಗುರು ನಾಮಧಾರಿ ಮಠವನ್ನು ಸ್ಥಾಪಿಸಿದ್ದರು. ಖಾವಿ ವಸ್ತ್ರ ಧರಿಸಿ ಭಕ್ತರಿಗೆ ಧಾರ್ಮಿಕ ಪ್ರವಚನ ನೀಡುತ್ತಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸಾವಿನ ಸುತ್ತ ಅನುಮಾನ:
ಸದಾ ಪ್ರವಚನ ನೀಡುತ್ತಾ ಇತರರಿಗೆ ದಾರಿ ದೀಪವಾಗಿದ್ದ ಸ್ವಾಮೀಜಿಯವರು ಇದ್ದಕ್ಕಿದ್ದಂತೆ ಮಠದಲ್ಲೇ ನೇಣಿಗೆ ಶರಣಾಗಿರುವುದು ಗ್ರಾಮಸ್ಥರಲ್ಲಿ ಹಾಗೂ ಅವರ ಭಕ್ತ ವಲಯದಲ್ಲಿ ತೀವ್ರ ಆಘಾತ ಮತ್ತು ಅನುಮಾನಗಳನ್ನು ಮೂಡಿಸಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ತುರುವಿಹಾಳ ಠಾಣೆಯ ಪಿಎಸ್ಐ ಸುಜಾತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








