ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷೀಯ ಚುನಾವಣಾ ಕಣ ಈಗ ರಂಗೇರಿದೆ. ಮಾರಿಕಾಂಬಾ ಹಿತರಕ್ಷಣಾ ಸಮಿತಿಯು ತನ್ನ ಅಧಿಕೃತ ಅಧ್ಯಕ್ಷ ಅಭ್ಯರ್ಥಿಯಾಗಿ 8 ಸಮಾಜವನ್ನು ಪ್ರತಿನಿಧಿಸುವ ಹಿಂದುಳಿದ ವರ್ಗಗಳ ಪ್ರಬಲ ನಾಯಕ ಎಂ.ಡಿ. ಆನಂದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಈ ಬಾರಿಯ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ.
ಹಿಂದುಳಿದ ವರ್ಗಗಳ ಧ್ವನಿಯಾಗಿ ಆನಂದ್
ಎಂಟು ಸಮಾಜಗಳ ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡಿರುವ ಎಂ.ಡಿ. ಆನಂದ್, ಸಮಾಜದ ವಿವಿಧ ಸ್ತರಗಳ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಒಂದು ವೇಳೆ ಇವರು ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ, ಅದು ಮಾರಿಕಾಂಬಾ ದೇವಿ ನ್ಯಾಸದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯಾಗಲಿದೆ. ಶೋಷಿತ ಮತ್ತು ಹಿಂದುಳಿದ ವರ್ಗಗಳ ನಾಯಕನೊಬ್ಬ ಇಂತಹ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯ ಉನ್ನತ ಸ್ಥಾನ ಅಲಂಕರಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಚುನಾವಣಾ ಫಲಿತಾಂಶ ಮತ್ತು ಸಮಿತಿಯ ಸಾಧನೆ
ಇತ್ತೀಚೆಗಷ್ಟೇ ನಡೆದ ನ್ಯಾಸ ಪ್ರತಿಷ್ಠಾನದ 36 ಸ್ಥಾನಗಳ ಚುನಾವಣೆಯಲ್ಲಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯು ಅಭೂತಪೂರ್ವ ಯಶಸ್ಸು ಕಂಡಿದೆ.
15 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಸಮಿತಿಯು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ 13 ವರ್ಷಗಳಿಂದ ದೇವಿಯ ಭಕ್ತರ ಧ್ವನಿಯಾಗಿ ಹೋರಾಡುತ್ತಾ ಬಂದಿರುವ ಸಮಿತಿಯು, ಈ ಬಾರಿ ತನ್ನ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ನಾಲ್ಕು ಸ್ಥಾನಗಳ ಕೊರತೆಯಿಂದ ಸ್ಪಷ್ಟ ಬಹುಮತದಿಂದ ವಂಚಿತವಾಗಿದ್ದರೂ, ಅತಿ ದೊಡ್ಡ ತಂಡವಾಗಿ ಹೊರಹೊಮ್ಮಿರುವ ಸಮಿತಿಯು ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಪಣ ತೊಟ್ಟಿದೆ.
ಮಾರ್ಚ್.29ರಂದು ಅಧ್ಯಕ್ಷರ ಆಯ್ಕೆಗೆ ಕಸರತ್ತು, ನಿರ್ಣಾಯಕ ದಿನ
ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದ ಚುನಾವಣೆ ಬಹುತೇಕ ಮಾರ್ಚ್ 29 ರಂದು ನಡೆಸಲು ನಿಗದಿ ಪಡಿಸಲಾಗಿದೆ. ಇತರ ತಂಡಗಳಿಂದಲೂ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಹಿತರಕ್ಷಣಾ ಸಮಿತಿಯು ಎಂ.ಡಿ ಆನಂದ್ ಅವರನ್ನು ಕಣಕ್ಕಿಳಿಸಿರುವುದು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ.
ಮಾರಿಕಾಂಬಾ ದೇವಿಯ ಭಕ್ತರ ಹಿತ ಕಾಪಾಡಲು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಶ್ರಮಿಸಿದ್ದೇವೆ. ಎಂ.ಡಿ. ಆನಂದ್ ಅವರ ನಾಯಕತ್ವದಲ್ಲಿ ನ್ಯಾಸ ಪ್ರತಿಷ್ಠಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಆಶಯ ನಮ್ಮದು ಎಂದು ಸಮಿತಿಯು ವಿಶ್ವಾಸ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ, ಮಾರ್ಚ್.29ರಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಅಧ್ಯಕ್ಷರ ಆಯ್ಕೆಯ ಕಸರತ್ತು ನಡೆಯಲಿದೆ. ಅಂದು ಮೂರು ತಂಡಗಳಾಗಿ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಕಂಡಿರುವಂತ 36 ಅಭ್ಯರ್ಥಿಗಳಲ್ಲಿ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್ ಅವರು ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದೇ ಆದಲ್ಲಿ, ಅದು 8 ಸಮಾಜಗಳಿಗೆ ಸಮಿತಿಯ ಸದಸ್ಯರು ಕೊಟ್ಟ ಗೌರವವೇ ಆಗಲಿದೆ. ಜೊತೆ ಜೊತೆಗೆ ಸಾಗರದಲ್ಲಿ ಹೊಸ ಇತಿಹಾಸವೇ ಸೃಷ್ಠಿಯಾದಂತೆ ಆಗಲಿದೆ. ಆ ನಿಟ್ಟಿನಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಯ ಚದುರಂಗದಾಟದಲ್ಲಿ ಎಂ.ಡಿ. ಆನಂದ್ ಅವರು ಇತಿಹಾಸ ಬರೆಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.








