ನವದೆಹಲಿ : ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ ಪ್ರಕರಣವೊಂದರಲ್ಲಿ ಛತ್ತೀಸ್ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಒಬ್ಬ ಯುವತಿ ವಯಸ್ಕಳಾಗಿದ್ದು, ಆಕೆಯ ಸಂಪೂರ್ಣ ಸಮ್ಮತಿಯೊಂದಿಗೆ ದೈಹಿಕ ಸಂಬಂಧ ಏರ್ಪಟ್ಟಿದ್ದರೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎನ್.ಕೆ. ವ್ಯಾಸ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನ ಮೂಲಕ ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಆರೋಪಿಯನ್ನು ಖುಲಾಸೆಗೊಳಿಸಿದೆ. ಇದರೊಂದಿಗೆ ಸುಮಾರು 20 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ಯುವಕನಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಈ ಘಟನೆ ಸುರ್ಗುಜಾ ಜಿಲ್ಲೆಯ ಧೌರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. 2000ನೇ ಇಸವಿಯಲ್ಲಿ ಸಂತ್ರಸ್ತೆ 12ನೇ ತರಗತಿ ಓದುತ್ತಿದ್ದಾಗ, ಅದೇ ಪ್ರದೇಶದಲ್ಲಿ ಓದುತ್ತಿದ್ದ ಲೀನಾ ರಾಮ್ ಧ್ರುವ ಎಂಬಾತನ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿತ್ತು. ಆರೋಪಿ ಲೀನಾ ರಾಮ್ ಮದುವೆಯ ಭರವಸೆ ನೀಡಿ 2000 ರಿಂದ 2003ರವರೆಗೆ (ಸುಮಾರು 3 ವರ್ಷ) ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಯುವತಿ ಆರೋಪಿಸಿದ್ದಳು.
ಇಬ್ಬರೂ ವಿದ್ಯಾಭ್ಯಾಸ ಮುಗಿಸಿ ತಮ್ಮ ಊರುಗಳಿಗೆ ಮರಳಿದ ನಂತರವೂ ಸಂಪರ್ಕದಲ್ಲಿದ್ದರು. ಯುವತಿ ಆರೋಪಿಯ ಮನೆಯಲ್ಲಿ ಕೆಲವು ದಿನ ಪತ್ನಿಯಂತೆ ವಾಸವಿದ್ದಳು. ಆದರೆ, ಜೂನ್ 2003 ರಲ್ಲಿ ಯುವಕ ಮದುವೆಗೆ ನಿರಾಕರಿಸಿ ನಾಪತ್ತೆಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಕೆಳಹಂತದ ನ್ಯಾಯಾಲಯವು ಈ ಹಿಂದೆ ಯುವಕನನ್ನು ದೋಷಿ ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಕೆಳಗಿನ ಅಂಶಗಳನ್ನು ಗಮನಿಸಿದರು:
ಯುವತಿ ವಯಸ್ಕಳಾಗಿದ್ದರಿಂದ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಳು. ದೀರ್ಘಕಾಲದವರೆಗೆ ಸಮ್ಮತಿಯಿಂದಲೇ ಸಂಬಂಧ ಮುಂದುವರಿದಿರುವುದು ಕಂಡುಬಂದಿದೆ. ಮದುವೆಯ ಭರವಸೆಯ ಮೇಲೆ ದೀರ್ಘಕಾಲ ದೈಹಿಕ ಸಂಬಂಧ ನಡೆಸಿದ ನಂತರ, ಸಂಬಂಧ ಹಳಸಿದಾಗ ಅದನ್ನು ‘ಅತ್ಯಾಚಾರ’ ಎಂದು ಕರೆಯುವುದು ಕಾನೂನುಬದ್ಧವಲ್ಲ ಎಂದು ಕೋರ್ಟ್ ಹೇಳಿದೆ.








