ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ದರ ಏರಿಕೆಯ ಬಿಸಿ ಮುಟ್ಟಿಸಿದೆ. 2025-26ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರ ವಿದ್ಯುತ್ ದರವನ್ನು ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಎಸ್ಕಾಂಗಳು (ESCOMs) ಅನುಭವಿಸುತ್ತಿರುವ ಭಾರಿ ಆರ್ಥಿಕ ಕೊರತೆಯನ್ನು ನೀಗಿಸುವ ಸಲುವಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ದರ ಏರಿಕೆ: ರಾಜ್ಯದ ಆಯ್ದ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಹೆಚ್ಚಿಸಲಾಗಿದೆ. ಸುಮಾರು 1,254.88 ಕೋಟಿ ರೂ.ಗಳ ಬೃಹತ್ ಆದಾಯ ಕೊರತೆಯನ್ನು ಭರ್ತಿ ಮಾಡಲು ಆಯೋಗವು ಈ ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ದರಗಳ ವಿವರ ಈ ಕೆಳಗಿನಂತಿದೆ:
-
ವಾಣಿಜ್ಯ ಬಳಕೆ (LT-3A): ಸ್ಥಿರ ಶುಲ್ಕವನ್ನು ಪ್ರತಿ ಕಿಲೋವ್ಯಾಟ್ಗೆ 235 ರೂ.ಗೆ ಮತ್ತು ಇಂಧನ ಶುಲ್ಕವನ್ನು ಪ್ರತಿ ಯೂನಿಟ್ಗೆ 7.10 ರೂ.ಗೆ ನಿಗದಿಪಡಿಸಲಾಗಿದೆ.
-
ಕೈಗಾರಿಕೆಗಳು (LT-5): ಪ್ರತಿ ಯೂನಿಟ್ ಇಂಧನ ಶುಲ್ಕ 5.20 ರೂ.ಗೆ ನಿಗದಿಪಡಿಸಲಾಗಿದೆ.
-
ಹೈ ಟೆನ್ಷನ್ (HT) ಬಳಕೆದಾರರು: HT-2A (ಕೈಗಾರಿಕೆ) ವರ್ಗಕ್ಕೆ ಪ್ರತಿ ಯೂನಿಟ್ಗೆ 6.70 ರೂ. ಮತ್ತು HT-2B (ವಾಣಿಜ್ಯ) ವರ್ಗಕ್ಕೆ ಪ್ರತಿ ಯೂನಿಟ್ಗೆ 6.90 ರೂ. ದರ ನಿಗದಿಪಡಿಸಲಾಗಿದೆ.
ರೈತರಿಗೆ ಸ್ವಲ್ಪ ಮಟ್ಟದ ರಿಲೀಫ್: ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ದರ ಏರಿಕೆಯ ಶಾಕ್ ನೀಡಿದ್ದರೆ, ರೈತರಿಗೆ ಮಾತ್ರ ದರ ಇಳಿಕೆಯ ಸಮಾಧಾನಕರ ಸುದ್ದಿ ಸಿಕ್ಕಿದೆ. ಕೃಷಿ ಪಂಪ್ಸೆಟ್ಗಳ (IP Sets) ವಿದ್ಯುತ್ ದರವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಇದ್ದ ಏಕರೂಪದ 8.30 ರೂ. ದರವನ್ನು, ಈಗ 6.57 ರೂ. ನಿಂದ 7.79 ರೂ. ಗಳವರೆಗೆ ಇಳಿಸಲಾಗಿದೆ. (ಈ ಇಳಿಕೆಯು ಸರ್ಕಾರ ನೀಡುವ ಸಬ್ಸಿಡಿ ಮೊತ್ತದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ).
ದರ ಏರಿಕೆ ಅನಿವಾರ್ಯ: ರಾಜ್ಯದ ಎಸ್ಕಾಂಗಳು ಅನುಭವಿಸುತ್ತಿರುವ ತೀವ್ರ ಆರ್ಥಿಕ ನಷ್ಟ ಮತ್ತು ಪಂಪ್ಸೆಟ್ಗಳಿಗೆ ನೀಡುವ ಭಾರಿ ಸಬ್ಸಿಡಿ ಹೊರೆಯಿಂದಾಗಿ ಈ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು KERC ಸ್ಪಷ್ಟಪಡಿಸಿದೆ. ಸರ್ಕಾರವು ಸಬ್ಸಿಡಿ ಮೊತ್ತದಲ್ಲಿ ಹೆಚ್ಚುವರಿ ಹಣ ನೀಡಿದರೂ, ಉಳಿದ ಕೊರತೆಯನ್ನು ಸರಿದೂಗಿಸಲು ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಂದ ವಸೂಲಿ ಮಾಡುವುದು ಅಗತ್ಯವಾಗಿದೆ ಎಂದು ಆಯೋಗ ತಿಳಿಸಿದೆ.
ಗೃಹ ಬಳಕೆದಾರರ ಮೇಲೆ ಪರಿಣಾಮ: ‘ಗೃಹ ಜ್ಯೋತಿ’ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಈ ದರ ಏರಿಕೆಯಿಂದ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ಆದರೆ, ಈ ಯೋಜನೆಯ ವ್ಯಾಪ್ತಿಗೆ ಬಾರದ ಅಥವಾ 200 ಯೂನಿಟ್ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಗ್ರಾಹಕರಿಗೆ ಸ್ಥಿರ ಶುಲ್ಕಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ವ್ಯಾಪಕ ವಿರೋಧ: ಈ ದರ ಏರಿಕೆಗೆ ಕೈಗಾರಿಕಾ ಸಂಘಟನೆಗಳು ಮತ್ತು ಉದ್ಯಮಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಏರಿಳಿತದಿಂದ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ, ವಿದ್ಯುತ್ ದರ ಏರಿಕೆಯು ಮತ್ತಷ್ಟು ಆರ್ಥಿಕ ಹೊರೆಯನ್ನು ಹೊರಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿ, ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಕುಗ್ಗಿಸಬಹುದು ಎಂಬ ಕಳವಳ ವ್ಯಕ್ತವಾಗಿದೆ.
SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!
BREAKING : ಪವಿತ್ರಾಗೌಡಗೆ ಜೈಲೂಟವೇ ಗತಿ : ಕೈದಿ ಕೇಳಿದ ಕೂಡಲೇ ಮನೆ ಊಟ ಒದಗಿಸಲು ಅವಕಾಶ ಇಲ್ಲ ಎಂದ ಹೈಕೋರ್ಟ್








