ಶಿವಮೊಗ್ಗ: ಕರ್ನಾಟಕದ ಮಲೆನಾಡು ಭಾಗ, ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳು ರಾಜ್ಯಕ್ಕೆ ಬೆಳಕು ನೀಡಿದ ಪುಣ್ಯಭೂಮಿ. ಶರಾವತಿ ಅಣೆಕಟ್ಟು ನಿರ್ಮಾಣವಾಗಿ ದಶಕಗಳೇ ಕಳೆದರೂ, ಆ ಯೋಜನೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ರೈತರು ಇಂದಿಗೂ ‘ಅತಂತ್ರ’ ಸ್ಥಿತಿಯಲ್ಲಿದ್ದಾರೆ. ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳು ಮತ್ತು ಮುಳುಗಡೆ ಸಂತ್ರಸ್ತರ ಹಕ್ಕುಪತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಇತ್ತೀಚೆಗೆ ಮಲೆನಾಡು ರೈತ ಹೋರಾಟ ಸಮಿತಿ ವತಿಯಿಂದ ಸಿಗಂಧೂರು ಸೇತುವೆ ಬಳಿ ನಡೆದ ಬೃಹತ್ ಪ್ರತಿಭಟನೆಯು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನವಾಗಿದೆ.
ರಾಜಕೀಯ ಇಚ್ಛಾಶಕ್ತಿಯ ಕೊರತೆ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್ ಅವರು ಪ್ರಸ್ತುತ ಮತ್ತು ಹಿಂದಿನ ಸರ್ಕಾರಗಳ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷವಾಗಲಿ, ಚುನಾವಣಾ ಸಮಯದಲ್ಲಿ ಮಲೆನಾಡಿನ ರೈತರಿಗೆ ನೀಡುವ ಭರವಸೆಗಳು ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಸೀಮಿತವಾಗಿವೆ ಎನ್ನುವುದು ರೈತರ ಆರೋಪ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ನಮ್ಮ ಸರ್ಕಾರ ಬಂದ ಒಂದು ವರ್ಷದೊಳಗೆ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುತ್ತೇವೆ” ಎಂದು ಘೋಷಿಸಿದ್ದರು. ಆದರೆ ಈಗ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಈ ಸಮಸ್ಯೆ ಇತ್ಯರ್ಥವಾಗದಿರುವುದು ವ್ಯವಸ್ಥೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ರೈತರು ನಲುಗುತ್ತಿದ್ದಾರೆ ಎಂದ ವಕೀಲ ಹೆಚ್.ವಿ ಕುಮಾರಸ್ವಾಮಿ
ಸಮಿತಿಯ ಕಾನೂನು ಸಲಹೆಗಾರರು ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿಗಳಾದ ಹೆಚ್.ವಿ.ಕುಮಾರಸ್ವಾಮಿ ಅವರು ಮಾತನಾಡುತ್ತಾ, “80 ವರ್ಷಗಳಿಂದ ರಾಜ್ಯದ ಏಳಿಗೆಗಾಗಿ ತಮ್ಮ ಭೂಮಿ, ಮನೆ, ಸಂಸ್ಕೃತಿಯನ್ನು ತ್ಯಾಗ ಮಾಡಿದ ಜನರಿವರು. ಇವರಿಗೆ ನ್ಯಾಯ ಕೊಡಿಸಬೇಕಾದ ಜನಪ್ರತಿನಿಧಿಗಳು ಇವರನ್ನು ಪದೇ ಪದೇ ಕೋರ್ಟ್ಗೆ ಅಲೆಯುವಂತೆ ಮಾಡುತ್ತಿದ್ದಾರೆ. ರೈತರೇ ಕೋರ್ಟ್ಗೆ ಹೋಗಿ ನ್ಯಾಯ ಪಡೆದುಕೊಳ್ಳುವುದಾದರೆ, ಈ ಜನಪ್ರತಿನಿಧಿಗಳ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.
ಶಿವನಾಗ ಪಾರ್ಥ ಅವಧೂತ ಸ್ವಾಮೀಜಿಯವರು ಸರ್ಕಾರದ ಮೌನವನ್ನು ಕಟುವಾಗಿ ಟೀಕಿಸಿದರು. “ಅನ್ನದಾತೋ ಸುಖೀಭವ” ಎನ್ನುವ ಘೋಷಣೆ ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಇಲ್ಲಿನ ರೈತರು ಹೊಸದಾಗಿ ಯಾರದ್ದೋ ಜಾಗವನ್ನು ಕೇಳುತ್ತಿಲ್ಲ, ಅವರು ದಶಕಗಳಿಂದ ಉಳುವ ಭೂಮಿಯ ಹಕ್ಕನ್ನು ಕೇಳುತ್ತಿದ್ದಾರೆ ಅಷ್ಟೇ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು?
ರೈತ ಹೋರಾಟ ಸಮಿತಿಯು ಸರ್ಕಾರದ ಮುಂದೆ ಇಟ್ಟಿರುವ ಎಂಟು ಬೇಡಿಕೆಗಳು ಕೇವಲ ಮನವಿಗಳಲ್ಲ, ಅವು ಕಳೆದ 60-70 ವರ್ಷಗಳ ಸಂಕಷ್ಟದ ಪ್ರತಿಫಲಗಳಾಗಿವೆ:
1. ಮದನ್ ಗೋಪಾಲ್ ವರದಿ ಮತ್ತು ಸುಪ್ರೀಂಕೋರ್ಟ್ ಆದೇಶದ ಪಾಲನೆ
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಸುಮಾರು ಒಂದು ವರ್ಷ ಕಾಲ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಿದೆ. ಸುಪ್ರೀಂಕೋರ್ಟ್ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಈ ಸಮಸ್ಯೆ ಬಗೆಹರಿಸಬೇಕೆಂದು ಆದೇಶಿಸಿದೆ. ಆದರೆ ಜಿಲ್ಲಾಡಳಿತ ಈವರೆಗೂ ಜಂಟಿ ಸರ್ವೆ ನಡೆಸಲು ಮುಂದಾಗಿಲ್ಲ. ಸಂತ್ರಸ್ತರು ಅನುಭವದಲ್ಲಿರುವ ಜಮೀನುಗಳನ್ನು ಕಂದಾಯ ಇಲಾಖೆಗೆ ವರ್ಗಾಯಿಸುವುದು ಮೊದಲ ಆದ್ಯತೆಯಾಗಬೇಕಿದೆ.
2. ಎಲ್ಲಾ ಅಣೆಕಟ್ಟು ಸಂತ್ರಸ್ತರಿಗೆ ಸಮಾನ ನ್ಯಾಯ
ಕೇವಲ ಶರಾವತಿ ಮಾತ್ರವಲ್ಲದೆ, ಗಾಜನೂರಿನ ತುಂಗಾ ಅಣೆಕಟ್ಟು, ಭದ್ರಾ, ಅಂಬ್ಲಿಗೊಳ, ಚಕ್ರಾ, ವರಾಹಿ ಮತ್ತು ಸಾವೆಹಲ್ಲು ಯೋಜನೆಗಳಿಂದ ಸ್ಥಳಾಂತರಗೊಂಡ ಸಾವಿರಾರು ಕುಟುಂಬಗಳು ಇಂದಿಗೂ ಹಕ್ಕುಪತ್ರವಿಲ್ಲದೆ ಬದುಕುತ್ತಿವೆ. ಈ ಎಲ್ಲಾ ಸಂತ್ರಸ್ತರಿಗೂ ಏಕರೂಪದ ಪರಿಹಾರದ ಸೂತ್ರವನ್ನು ಅಳವಡಿಸಬೇಕು ಎನ್ನುವುದು ಹೋರಾಟಗಾರರ ಒತ್ತಾಯ.
3. ಕೆಪಿಸಿ ಬಳಕೆಯಾಗದ ಭೂಮಿಯ ಮರುಹಂಚಿಕೆ
ಕರ್ನಾಟಕ ಪವರ್ ಕಾರ್ಪೊರೇಷನ್ (KPC) ವಿದ್ಯುತ್ ಯೋಜನೆಗಾಗಿ 65 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡ ಸಾವಿರಾರು ಎಕರೆ ಭೂಮಿ ಇಂದಿಗೂ ಬಳಕೆಯಾಗದೆ ಹಾಗೆಯೇ ಉಳಿದಿದೆ. ಭೂಸ್ವಾಧೀನ ಕಾಯ್ದೆಯ ಪ್ರಕಾರ, ಉದ್ದೇಶಿತ ಯೋಜನೆಗೆ ಭೂಮಿ ಬಳಕೆಯಾಗದಿದ್ದರೆ ಅದನ್ನು ಮೂಲ ಮಾಲೀಕರಿಗೆ ಅಥವಾ ಭೂಹೀನ ರೈತರಿಗೆ ಮಂಜೂರು ಮಾಡಬೇಕು. ಆದರೆ ಸರ್ಕಾರ ಇಲ್ಲಿಯೂ ಮೌನವಹಿಸಿದೆ.
4. ಅರಣ್ಯ ಹಕ್ಕು ಕಾಯ್ದೆಯ ವೈಫಲ್ಯ ಮತ್ತು ಅರ್ಜಿಗಳ ವಜಾ
2006ರ ಅರಣ್ಯ ಹಕ್ಕು ಕಾಯ್ದೆಯು ಇಡೀ ದೇಶದಲ್ಲಿ ಜಾರಿಯಲ್ಲಿದ್ದರೂ ಕರ್ನಾಟಕದಲ್ಲಿ ಮಾತ್ರ ಅದರ ಅನುಷ್ಠಾನ ಅತ್ಯಂತ ಕಳಪೆಯಾಗಿದೆ. ಸುಮಾರು 3 ಲಕ್ಷ ರೈತರ ಅರ್ಜಿಗಳನ್ನು ಯಾವುದೇ ಸರಿಯಾದ ವಿಚಾರಣೆ ನಡೆಸದೆ ವಜಾ ಮಾಡಲಾಗಿದೆ. 75 ವರ್ಷಗಳ ದಾಖಲೆ ಕೇಳುವ ನಿಯಮವು ಪ್ರಾಯೋಗಿಕವಾಗಿ ಅಸಾಧ್ಯ. ಆದ್ದರಿಂದ ಇದನ್ನು 25 ವರ್ಷಕ್ಕೆ ಇಳಿಸುವ ತಿದ್ದುಪಡಿ ತರಬೇಕು ಮತ್ತು ಪಂಚಾಯಿತಿ ಸದಸ್ಯರನ್ನು ಒಳಗೊಂಡ ಸಮಿತಿಗಳ ಮೂಲಕ ಪಾರದರ್ಶಕವಾಗಿ ಅರ್ಜಿಗಳ ಮರುಪರಿಶೀಲನೆ ನಡೆಸಬೇಕು.
5. ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಎಂಬ ಭೂತ
ಸೊಪ್ಪಿನಬೆಟ್ಟ, ಕಾನು ಮತ್ತು ಕಾಡಿ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿರುವುದು ರೈತರಿಗೆ ದೊಡ್ಡ ಹೊರೆಯಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ಸ್ವರೂಪವಿಲ್ಲದ ಕಡೆಗಳಲ್ಲಿ ಜನವಸತಿ ಮತ್ತು ಕೃಷಿ ಭೂಮಿಯನ್ನು ಈ ಪಟ್ಟಿಯಿಂದ ಕೈಬಿಡಲು ಅವಕಾಶವಿದೆ. ಆದರೆ ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ವಸ್ತುನಿಷ್ಠ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ.
6. ಕೇಂದ್ರ ಬಿಡುಗಡೆ ಮಾಡಿದ 43,000 ಎಕರೆ ಭೂಮಿಯ ಹಂಚಿಕೆ
1970ಕ್ಕಿಂತ ಮೊದಲು ಸಾಗುವಳಿ ಮಾಡುತ್ತಿದ್ದ ರೈತರಿಗಾಗಿ ಕೇಂದ್ರ ಸರ್ಕಾರ 1996ರಲ್ಲಿ 43,000 ಎಕರೆ ಭೂಮಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆದರೆ 30 ವರ್ಷ ಕಳೆದರೂ ಈ ಭೂಮಿ ಅರ್ಹ ರೈತರ ಕೈಸೇರಿಲ್ಲ. ಈ ಆಡಳಿತಾತ್ಮಕ ವಿಳಂಬವು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.
7. ಶರಾವತಿ ಮತ್ತು ಸಿಂಗಳೀಕ ಅಭಯಾರಣ್ಯದ ವಿವಾದ
ಕರೂರು, ಭಾರಂಗಿ ಮತ್ತು ಆವಿನಹಳ್ಳಿ ಹೋಬಳಿಗಳ ಜನವಸತಿ ಪ್ರದೇಶಗಳನ್ನು ನಿಯಮಬಾಹಿರವಾಗಿ ಶರಾವತಿ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಯಾವುದೇ ಗ್ರಾಮ ಪಂಚಾಯಿತಿ ಅಥವಾ ಜನರ ಅಭಿಪ್ರಾಯ ಪಡೆಯದೆ ಇಂತಹ ನಿರ್ಧಾರ ತಳೆಯಲಾಗಿದೆ. ಇದರಿಂದಾಗಿ ರೈತರಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಿರಂತರ ಕಿರುಕುಳ ಉಂಟಾಗುತ್ತಿದೆ.
8. ಅರಣ್ಯ ವ್ಯವಸ್ಥಾಪನಾ ಸಮಿತಿಗಳ ದೌರ್ಜನ್ಯ
ಇತ್ತೀಚಿನ ದಿನಗಳಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ರೈತರು ಈಗಾಗಲೇ ಹಕ್ಕುಪತ್ರ ಪಡೆದಿರುವ ಜಮೀನುಗಳು ಮತ್ತು ಮನೆಗಳನ್ನು ಅರಣ್ಯ ಪ್ರದೇಶವೆಂದು ಗುರುತಿಸುತ್ತಿದ್ದಾರೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಇಂತಹ ಕ್ರಮಗಳನ್ನು ತಡೆಯಬೇಕು.
ಶಿವಮೊಗ್ಗದ ಡಿಸಿ ಕಚೇರಿ, ವಿಧಾನಸೌಧಕ್ಕೆ ಬೀಗ ಹಾಕುವ ಎಚ್ಚರಿಕೆ
ಸಿಗಂಧೂರು ಸೇತುವೆಯ ಮೇಲಿನ ಈ ಪ್ರತಿಭಟನೆಯು ಕೇವಲ ಸಾಂಕೇತಿಕವಲ್ಲ, ಇದು ಮಲೆನಾಡಿನ ಜನರ ತಾಳ್ಮೆ ಕೆಟ್ಟಿರುವುದರ ಸಂಕೇತವಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ತುರ್ತು ಸಭೆ ಕರೆದು ಶಾಶ್ವತ ಪರಿಹಾರ ಘೋಷಿಸಬೇಕು. ಒಂದು ವೇಳೆ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಸಚಿವರ ಕಚೇರಿಗಳಿಗೆ ಮುತ್ತಿಗೆ ಹಾಕುವುದು ಮಾತ್ರವಲ್ಲದೆ, ವಿಧಾನಸೌಧಕ್ಕೆ ಬೀಗ ಹಾಕುವ ಮೂಲಕ ರಾಜ್ಯಾದ್ಯಂತ ಚಳುವಳಿ ನಡೆಸುವುದಾಗಿ ರೈತ ಹೋರಾಟ ಸಮಿತಿ ಗಂಭೀರ ಎಚ್ಚರಿಕೆ ನೀಡಿದೆ.
ಮಲೆನಾಡಿನ ರೈತರು ಕೇಳುತ್ತಿರುವುದು ಭಿಕ್ಷೆಯಲ್ಲ, ಅವರ ಹಕ್ಕು. ರಾಜ್ಯಕ್ಕೆ ಬೆಳಕು ನೀಡಿದವರ ಬದುಕಿನಲ್ಲಿ ಕತ್ತಲೆ ಆವರಿಸಲು ಬಿಡಬಾರದು. ಸರ್ಕಾರವು ಕಡತಗಳ ವಿಲೇವಾರಿಯಲ್ಲಿ ವೇಗ ಹೆಚ್ಚಿಸಿ, ರಾಜಕೀಯ ಭಿನ್ನಾಭಿಪ್ರಾಯ ಮರೆತು ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂಬುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಂತ ವಿವಿಧ ಮುಖಂಡರು ಆಗ್ರಹಿಸಿದರು.








