ಬೆಂಗಳೂರು: ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ನೇಮಕ ಮಾಡುವ ಸಂದರ್ಭದಲ್ಲಿ ಒಳ ಮೀಸಲಾತಿ ಪರಿಗಣನೆಗೆ ಎಲ್ಲಾ ಸಮುದಾಯದ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗ ಮಾತನಾಡಿದ ಅವರು, ರಾಜ್ಯಪಾಲರು ಒಳ ಮೀಸಲಾತಿಗೆ ಅಂಕಿತ ಹಾಕಿ ಆದೇಶ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರ ಭರ್ತಿ ಮಾಡಬೇಕಿರುವ ನೇಮಕಾತಿಗೆ ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟನೆ ಬೇಕಿದೆ. ಮನಸ್ಸು ಮಾಡಿದರೆ ಸಾಧ್ಯತೆ ಇದೆ. ಆದರೆ, ಅವರು ಗೊಂದಲಕ್ಕೆ ಸಿಲುಕಿದ್ದಾರೆ. ನೇಮಕಾತಿಯ ಮೊದಲು ಎಲ್ಲಾ ಸಮುದಾಯದ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಆಗಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಕಾನೂನು ಮಾಡಿದ್ದಾರೆ. ಹಾಗಾಗಿ ಎಲ್ಲ ಸಮುದಾಯದವರೂ ಒಳ ಮೀಸಲಾತಿ ಕೊಡಿ ಅಂತ ಹೇಳಿದ್ದಾರೆ. ಸಮಸ್ಯೆ ಸರಳೀಕರಣ ಮಾಡಬೇಕು. ಕಾನೂನು ತಜ್ಞರ ಸಲಹೆ ಪಡೆದು ಮಾಡಬೇಕು. ಸಂವಿಧಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಅಂತ ಅಂಬೇಡ್ಕರ್ ಹೇಳಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಮಿಟಿ ಮುಂದೆ ಸಮುದಾಯಗಳು ಹೋಗಿವೆ. ಅದನ್ನ ನೋಡಿ ಕ್ರಮ ಆಗಬೇಕು ಎಂದು ಹೇಳಿದರು.
ಗುಪ್ತಚರ ಇಲಾಖೆ ದುರ್ಬಳಕೆ ಆಗುತ್ತಿದಿಯಾ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುಪ್ತಚರ ಇಲಾಖೆ ಸಿಎಂ ಬಳಿ ಇರುತ್ತದೆ. ರಾಜಕೀಯ ಅಸ್ಥಿರತೆ ಇದ್ದಾಗ ಸಿಎಂ ಯಾವ ರೀತಿ ಬಳಕೆ ಮಾಡುತ್ತಾರೆ. ತಮ್ಮದೇ ಪಕ್ಷದ ಶಾಸಕರ ಮೇಲೆ ಗುಪ್ತಚರ ಮಾಡುತ್ತಾರೋ. ಅಥವಾ ನೇರವಾಗಿ ಸಂಪರ್ಕ ಮಾಡುರೋ ಅನ್ನುವುದರ ಮೇಲೆ ನಿರ್ಧಾರ ಆಗಲಿದೆ ಎಂದು ಹೇಳಿದರು.








