ಬೆಂಗಳೂರು: ಇರಾನ್-ಇರಾಕ್ ನಡುವಿನ ಯುದ್ಧದ ಭೀತಿಯಿಂದ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಮತ್ತು ಜನಪ್ರತಿನಿಧಿಗಳನ್ನು ತುರ್ತಾಗಿ ತಾಯ್ನಾಡಿಗೆ ಕರೆತರಲು ಒಬ್ಬರು ಸಚಿವರು ಹಾಗೂ ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಡಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಇಂದು ಸಿಎಂ, ಡಿಸಿಎಂಗೆ ಪತ್ರ ಬರೆದಿರುವಂತ ಅವರು, ಪ್ರಸ್ತುತ ಇರಾನ್ ಮತ್ತು ಇರಾಕ್ ದೇಶಗಳ ನಡುವೆ ಯುದ್ಧೋನ್ಮಾದದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ನೇರ ಪರಿಣಾಮ ಇರಾನ್, ಇರಾಕ್, ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ಅರಬ್ ರಾಷ್ಟ್ರಗಳ ಮೇಲಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಅತ್ಯಂತ ಪ್ರಕ್ಷುಬ್ಧ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಶಾಸಕರಾದ ಎ.ಸಿ.ಶ್ರೀನಿವಾಸ್, ಎಸ್.ಎಲ್.ಬೋಜೇಗೌಡರು, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್ ಸೇರಿದಂತೆ ಹಲವು ಪ್ರಮುಖರು ದುಬೈಗೆ ಭೇಟಿ ನೀಡಿದ್ದು, ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ಪ್ರವಾಸಕ್ಕೆ ತೆರಳಿದ್ದವರು, ಉದ್ಯೋಗ ಅರಸಿ ಹೋದ ಯುವಜನರು ಹಾಗೂ ವ್ಯಾಸಂಗ ಮಾಡುತ್ತಿರುವ ಅಸಂಖ್ಯಾತ ಕನ್ನಡಿಗರು ಈ ಯುದ್ಧ ಭೀತಿಯ ನಡುವೆ ಬೇರೆ ಬೇರೆ ದೇಶ ಗಳಿಂದ ತಾಯ್ನಾಡಿಗೆ ಮರಳಲು . ಇನ್ನು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಹಲವು ಜಪ್ರತಿನಿಧಿಗಳು ವಿದೇಶದಲ್ಲಿ ಅಧ್ಯಯನ ಪ್ರವಾಸಕ್ಕೆ ಹೋಗಿದ್ದಾರೆ. ಅವರನ್ನೂ ಸುರಕ್ಷಿತವಾಗಿ ಕರೆತರುವ ಕೆಲಸ ಆಗಬೇಕಿದೆ ಎಂಬುದಾಗಿ ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಾವು ಕನ್ನಡಿಗರನ್ನು ಯಶಸ್ವಿಯಾಗಿ ರಕ್ಷಿಸಿ ಕರೆತಂದ ರೀತಿಯಲ್ಲೇ, ಈ ಬಾರಿಯೂ ತಕ್ಷಣದ ಕಾರ್ಯಾಚರಣೆಯ ಅಗತ್ಯವಿದೆ. ದೂರವಾಣಿ ಸಂಪರ್ಕಗಳು ವ್ಯತ್ಯಯವಾಗುತ್ತಿರುವುದರಿಂದ ಇಲ್ಲಿರುವ ಕುಟುಂಬಸ್ಥರು, ಪೋಷಕರು ತಮ್ಮವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಹಾಗಾಗಿ, ಸಂಕಷ್ಟದಲ್ಲಿರುವ ನಮ್ಮ ಜನಪ್ರತಿನಿಧಿಗಳು ಹಾಗೂ ಸಮಸ್ತ ಕನ್ನಡಿಗರನ್ನು ಭದ್ರತೆಯೊಂದಿಗೆ ಮರಳಿ ಕರೆತರಲು ರಾಜ್ಯ ಸರ್ಕಾರವು ಈ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.
1. ನೋಡಲ್ ಅಧಿಕಾರಿಗಳ ನೇಮಕ: ಈ ಕಾರ್ಯಾಚರಣೆಯ ಉಸ್ತುವಾರಿಗಾಗಿ ತಕ್ಷಣವೇ ಸಚಿವರೊಬ್ಬರ ಸಹಿತ ರಾಜ್ಯ ಸರ್ಕಾರದ ಹಿರಿಯ ಐಎಎಸ್ (IAS) ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಬೇಕು.
2. ಕೇಂದ್ರದೊಂದಿಗೆ ಸಮನ್ವಯ: ನೇಮಕಗೊಂಡ ಅಧಿಕಾರಿಗಳು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಹಾಗೂ ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ (Embassies) ಸತತ ಸಂಪರ್ಕ ಸಾಧಿಸಿ, ಕನ್ನಡಿಗರನ್ನು ಆದ್ಯತೆಯ ಮೇರೆಗೆ ಏರ್ಲಿಫ್ಟ್ ಮಾಡಲು ತ್ವರಿತ ಕ್ರಮವಹಿಸಬೇಕು.
3. ನಿರಂತರ ಸಂಪರ್ಕ ಮತ್ತು ಭರವಸೆ: ನೇಮಕಗೊಂಡ ಅಧಿಕಾರಿಗಳ ತಂಡವು ಅಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ಸತತ ಸಂಪರ್ಕದಲ್ಲಿರಬೇಕು ಮತ್ತು ಅವರಿಗೆ ಅಗತ್ಯ ಧೈರ್ಯ ಹಾಗೂ ಸುರಕ್ಷತೆಯ ಭರವಸೆ ನೀಡಬೇಕು.
ನಮ್ಮ ರಾಜ್ಯದ ಜನರ ಪ್ರಾಣ ರಕ್ಷಣೆ ಹಾಗೂ ಕುಟುಂಬದವರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರವು ಇದನ್ನು ಅತ್ಯಂತ ಗಂಭೀರ ವಿಚಾರವೆಂದು ಪರಿಗಣಿಸಿ, ಕೂಡಲೇ ಕಾರ್ಯಾನ್ಮುಖರಾಗಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿದ್ದಾರೆ.
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








