ಶಿವಮೊಗ್ಗ: ತಮ್ಮ ಖಾಸಗಿ ಜಮೀನಿನಲ್ಲಿದ್ದಂತ ಕಾಡು ಜಾತಿ, ಅಕೇಶಿಯಾ ಸೇರಿದಂತೆ ಇತರೆ ಮರಗಳನ್ನು ಕಡಿತಲೆ ಮಾಡಿದ್ದ ಕಾರಣದಿಂದ ಸಾಗರ ಎಸಿಎಫ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರೊಬ್ಬರು ಸಾಗರ ಡಿಎಫ್ಓಗೆ ದೂರು ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿಎಫ್ಓ ಕಚೇರಿ ಮುಂದೆ ದೊಂಬೆ ಗ್ರಾಮದ ನಿವಾಸಿಯಾದಂತ ವಿನಾಯಕ.ಕೆ ಎಂಬುವರು ದಂಪತಿ ಸಹಿತ ಪ್ರತಿಭಟನೆ ನಡೆಸಿದರು. ಅಲ್ಲದೇ ಸಾಗರದ ಎಸಿಎಫ್ ರವಿ ಅವರು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರೋದಕ್ಕೆ ಆಕ್ರೋಶವನ್ನು ಹೊರ ಹಾಕಿದರು.
ಎಸಿಎಫ್ ರವಿ ವಿರುದ್ಧ ಸಾಗರ ಡಿಎಫ್ಓಗೆ ರೈತ ದಂಪತಿಗಳು ದೂರು
ಈ ವೇಳೆ ಮಾತನಾಡಿದಂತ ಅವರು, ದೊಂಬೆ ಗ್ರಾಮದ ಸರ್ವೆ ನಂ.35ರಲ್ಲಿ 16 ಎಕರೆ ಸ್ವಂತ ಜಾಗವಿದೆ. ಅದರಲ್ಲಿ ಕೃಷಿ ಚಟುವಟಿಕೆ ಮಾಡುವ ಕಾರಣ ಜೆಸಿಬಿ ಹಾಗೂ ಕೆಲಸಗಾರರ ಸಹಾಯದಿಂದ ಸ್ವಚ್ಛಗೊಳಿಸುವಂತ ಕಾರ್ಯ ನಡೆಸಲಾಗುತ್ತಿತ್ತು. ಇಲ್ಲಿದೆ ಪರಿಶೀಲನೆಗಾಗಿ ಬಂದಂತ ಸಾಗರ ಎಸಿಎಫ್ ರವಿ ಅವರು, ಏ ಬಟ್ಟಾ ನೀನು ಯಾವುದೇ ಪರವಾನಗೆ ಪಡೆಯದೇ ಜಾಗದಲ್ಲಿ ಅಮೂಲ್ಯವಾದಂತ ಕಾಡು ಮರಗಳನ್ನು ಕಡಿತಲೆ ಮಾಡಿದ್ದೀಯ. ಆ ಮೂಲಕ ಅರಣ್ಯ ನಾಶ ಮಾಡಿದ್ದೀಯ ಎಂಬುದಾಗಿ ದೂರು ಬಂದಿದೆ. ಇಲ್ಲಿ ಸುತ್ತಮುತ್ತಲು ಎಲ್ಲ ಭಟ್ಟರುಗಳದ್ದೇ ಜಾಗ. ಇಡೀ ಊರನ್ನೇ ಭಟ್ಟರ ಹೆಸರಿಗೆ ಬರೆಸಿಕೊಳ್ಳಿ ಎಂಬಿತ್ಯಾದಿಯಾಗಿ ನನ್ನ ಜಾತಿಯ ಹೆಸರಿನಲ್ಲಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನಗೆ ಸಮಜಾಯಿಸಿ ನೀಡೋದಕ್ಕೂ ಅವಕಾಶ ನೀಡಲಿಲ್ಲ. ಇದರಿಂದ ನನಗೂ, ನನ್ನ ಪತ್ನಿ ಶೈಲಾಗೂ ನೋವುಂಟಾಗಿದೆ ಅಂತ ತಿಳಿಸಿದ್ದಾರೆ.
ನಾನು ಕಾನೂನು ಪ್ರಕಾರ ನನ್ನ ಹಕ್ಕಿನ ಜಾಗದಲ್ಲಿ ಕೆಲ ಸೌದೆ ಮರಗಳನ್ನು ಹಾಗೂ ಹೈಬ್ರಿಡ್ ಅಕೇಶಿಯಾ, ನೀಲಗಿರಿ ಮರಗಳನ್ನು ಕಡಿತಲೆ ಮಾಡಿದ್ದೇನೆ. ಅದನ್ನು ಬಿಟ್ಟು ನನ್ನ ಜಮೀನಿನಲ್ಲಿ ಯಾವುದೇ ಬೆಲೆ ಬಾಳುವ ಮರಗಳು ಇರೋದಿಲ್ಲ. ಇಂದು ಎಸಿಎಫ್ ರವಿ ಅವರ ವರ್ತನೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದೇನೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಗರ ಡಿಎಫ್ಓಗೆ ದೂರು ನೀಡಿರುವುದಾಗಿ ಹೇಳಿದರು.
ರೈತರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲವೆಂದ ಸಾಮಾಜಿಕ ಕಾರ್ಯಕರ್ತ ಧರ್ಮೇಂದ್ರ ಶಿರವಾಳ
ಈ ಪ್ರತಿಭಟನೆ ವೇಳೆ ಮಾತನಾಡಿದಂತ ಸಾಮಾಜಿಕ ಕಾರ್ಯಕರ್ತ ಧರ್ಮೇಂದ್ರ ಬಿ ಶಿರವಾಳ ಅವರು, ಸಾಗರ ಎಸಿಎಫ್ ರವಿ ಅವರು ವಿನಾಕಾರಣ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ರೈತ ವಿನಾಯಕ ಅವರು ತಪ್ಪಿ ಮಾಡಿದ್ದರೇ ಕಾನೂನಿನ ಕ್ರಮ ವಹಿಸಬಹುದಾಗಿತ್ತು. ಅದನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರೋದು ಸರಿಯಾದದ್ದಲ್ಲ. ಹೀಗೆ ರೈತರಿಗೆ ತೊಂದರೆ ಕೊಟ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನನಗೆ ರೈತ ದಂಪತಿಗಳಿಗೆ ಎಸಿಎಫ್ ರವಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರ ಬಗ್ಗೆ ಗಮನಕ್ಕೆ ಬಂದ ತಕ್ಷಣ ಇಲ್ಲಿಗೆ ಬಂದಿದ್ದೇನೆ. ಎಸಿಎಫ್ ರವಿ ಕೇಳಿದ್ರೆ ಅವರು ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ನಾನು ಎದುರಿಸೋದಕ್ಕೆ ಸಿದ್ಧ ಅಂತ ಹೇಳಿದರು. ಒಬ್ಬ ಅಧಿಕಾರಿಯಾಗಿ ಹೀಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಎಸಿಎಫ್ ಕಳ್ಳಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಧರ್ಮೇಂದ್ರ ಶಿರವಾಳ, ತನಿಖೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹ
ಸಾಗರ ಎಸಿಎಫ್ ರವಿ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗೆ ನೀಡಿದಂತ ಕ್ವಾಟ್ರಾಸ್ ನಲ್ಲಿಯೇ ತಾವು ಕೆಲಸ ಮಾಡುವಂತ ಸ್ಥಳದಲ್ಲಿ ವಾಸವಿರಬೇಕು. ಆ ನಿಯಮವನ್ನೇ ಪಾಲಿಸುತ್ತಿಲ್ಲ. ಈ ಹಿಂದೆ ಗಂಧದ ಗೋಡೌನ್ ನಲ್ಲಿ ಮರ್ಡರ್ ಕೂಡ ಆಗಿತ್ತು. ಅದರಿಂದ ಆದರೂ ಎಚ್ಚರಿಕೆಯನ್ನು ವಹಿಸಿ ಇಲ್ಲೇ ಸರ್ಕಾರಿ ಕ್ವಾಟ್ರಾಸ್ ನಲ್ಲಿ ಇರಬೇಕಿದ್ದಂತ ಅವರು ಆ ಕೆಲಸ ಮಾಡಿಲ್ಲ. ಆ ಬಗ್ಗೆಯೂ ಸಂಬಂಧಿಸಿದಂತ ಅಧಿಕಾರಿಗಳು ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಾಗರದಲ್ಲಿ ಎಸಿಎಫ್ ರವಿ ಬಂದಾಗಿನಿಂದ ಆಫೀಸ್ ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಕೆಲಸ ಮಾಡೋದನ್ನು ಬಿಟ್ಟು ಯಾವಾಗ್ಲೂ ಹೊರಗೆ ಓಡಾಡುತ್ತಾರೆ. ಸಾಗರದ ಎಸಿಎಫ್ ಕಚೇರಿಯಲ್ಲಿ ಇರೋದೇ ಕಡಿಮೆ. ಯಾರೇ ಕೇಳಿದರೂ ಅಲ್ಲಿದ್ದೇನೆ, ಇಲ್ಲಿದ್ದೇನೆ ಅಂತ ಬರೀ ಸುಳ್ಳು ಹೇಳಿಕೊಂಡು ಹೊರಗಡೆ ಕಾಲಹರಣ ಮಾಡುತ್ತಿದ್ದಾರೆ. ಹೀಗಾದ್ರೆ ಅರಣ್ಯ ಇಲಾಖೆಯ ಜನರ ಕೆಲಸಗಳು ಆಗೋದು ಹೇಗೆ? ಈ ನಿಟ್ಟಿನಲ್ಲಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಮೇಲಿನ ಹಂತದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಾಗರ ಎಸಿಎಫ್ ರವಿ ಹೇಳಿದ್ದೇನು?
ಇನ್ನೂ ಕನ್ನಡ ನ್ಯೂಸ್ ನೌ ಜೊತೆಗೆ ಈ ಕುರಿತಾಗಿ ಪ್ರತಿಕ್ರಿಯಿಸಿದಂತ ಸಾಗರ ಎಸಿಎಫ್ ರವಿ ಅವರು, ದೊಂಬೆ ಗ್ರಾಮದ ವಿನಾಯಕ ಅವರ ಜಮೀನಿನಲ್ಲಿ ಅಕ್ರಮವಾಗಿ ಅನುಮತಿ ಇಲ್ಲದೇ ಮರ ಕಡಿತಲೆ ಮಾಡಿದ್ದು ಗಮನಕ್ಕೆ ಬಂದಿತ್ತು. ಹೀಗಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಅವರ ಜಮೀನಿನಲ್ಲಿ ಅಕೇಶಿಯಾ, ಕಾಡು ಜಾತಿಯ ಮರಗಳು ಸೇರಿದಂತೆ ಇತರೆ ಅಮೂಲ್ಯ ಮರಗಳನ್ನು ಕಡಿತಲೆ ಮಾಡಿ, ಸುಟ್ಟು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಜಾತಿ ನಿಂದನೆ ಮಾಡಿಲ್ಲ. ಅವಾಚ್ಯ ಶಬ್ದಗಳಿಂದಲೂ ನಿಂದನೆ ಮಾಡಿಲ್ಲ. ಕಾನೂನು ಪ್ರಕಾರವಾಗಿಯೇ ನಡೆದುಕೊಂಡಿದ್ದೇನೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ದೊಂಬೆ ಗ್ರಾಮದ ಸರ್ವೆ ನಂಬರ್ 35ರಲ್ಲಿ ವಿನಾಯಕ ಅಕ್ರಮವಾಗಿ ಮರ ಕಡಿತಲೆ ಮಾಡಿದ್ದರೂ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮವನ್ನು ಅಲ್ಲಿನ ಡಿಆರ್ ಎಫ್ ಓ ನರೇಂದ್ರ ಹಾಗೂ ಗಾರ್ಡ್ ಶಿಲ್ಪ ಮಾಡಬೇಕಿತ್ತು. ಅದನ್ನು ಮಾಡದೇ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್ ನೀಡಿ ಸಮಜಾಯಿಸಿ ಕೇಳಲಾಗಿದೆ. ಅವರ ಪ್ರತ್ಯುತ್ತರದ ನಂತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ: ಜೂನ್ 14ಕ್ಕೆ ಭಾರತ-ಪಾಕ್ ಹೈವೋಲ್ಟೇಜ್ ಫೈಟ್!
BREAKING: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ: ಜೂನ್ 14ಕ್ಕೆ ಭಾರತ-ಪಾಕ್ ಹೈವೋಲ್ಟೇಜ್ ಫೈಟ್!
BREAKING: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ: ಜೂನ್ 14ಕ್ಕೆ ಭಾರತ-ಪಾಕ್ ಹೈವೋಲ್ಟೇಜ್ ಫೈಟ್!








