ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ 2026-27ನೇ ಸಾಲಿನ ಆಯವ್ಯಯದಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸುವಂತೆ ಕೋರಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು, ಆರೋಗ್ಯ, ಕೃಷಿ, ತಂತ್ರಜ್ಞಾನ ಮತ್ತು ಆಡಳಿತ ಸುಧಾರಣೆಗೆ ಪೂರಕವಾದ 13 ಅಂಶಗಳನ್ನೊಳಗೊಂಡ ಸಮಗ್ರ ಪ್ರಸ್ತಾವನೆಯನ್ನು ಮಂಡಿಸಿದರು. ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಘಟಕ ಸ್ಥಾಪನೆ, ಹಾಲು ಉತ್ಪಾದಕರ ಪ್ರೋತ್ಸಾಹ ಧನ ಹೆಚ್ಚಳ, ಎಐ (AI) ತಂತ್ರಜ್ಞಾನದ ಅಳವಡಿಕೆ ಹಾಗೂ ರೈತರ ಸಾಲದ ಮಿತಿ ಹೆಚ್ಚಳದಂತಹ ಜನಪರ ಬೇಡಿಕೆಗಳನ್ನು ಬಜೆಟ್ನಲ್ಲಿ ಸೇರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಶಾಸಕ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮನವಿಯಲ್ಲೇನಿದೆ
2026-27ನೇ ಸಾಲಿನ ಆಯವ್ಯಯದಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಅಳವಡಿಸಿ ಘೋಷಣೆ ಮಾಡುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ.
(1) ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಘಟಕ ಸ್ಥಾಪನೆ: ಬೆಂಗಳೂರಿನ ಹೊರವಲಯದ ಕೆಂಪೇಗೌಡ ಬಡಾವಣೆಯಲ್ಲಿನ ಸುಮಾರು 20 ಎಕರೆ ಪ್ರದೇಶದಲ್ಲಿ ನೂತನ ಘಟಕ ಸ್ಥಾಪಿಸಿ, ಹೆಚ್ಚುತ್ತಿರುವ ರೋಗಿಗಳ ಒತ್ತಡ ಕಡಿಮೆ ಮಾಡಲು ಅನುದಾನ ಮೀಸಲಿಡುವುದು.
(2) ಮೈಸೂರು ರೇಷ್ಮೆ ಸೀರೆಯ ನೂತನ ಉತ್ಪಾದನಾ ಘಟಕ ಸ್ಥಾಪನೆ (KSIC): ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ 5000 ಸೀರೆಗಳ ಉತ್ಪಾದನೆಗೆ ಅನುಕೂಲವಾಗುವಂತೆ ನೂತನ ಘಟಕ ಪ್ರಾರಂಭಿಸುವುದು.
(3) ನೂತನ ಜಲ ಆಯೋಗ ರಚನೆ: ಜಲಾಶಯಗಳ ನಿರ್ವಹಣೆ, ಮಳೆ ನೀರು ಸಂಗ್ರಹ ಹಾಗೂ ಕೃಷಿ-ಕೈಗಾರಿಕೆಗಳಿಗೆ ಸಮರ್ಪಕ ನೀರು ಪೂರೈಸಲು ವೈಜ್ಞಾನಿಕ ಸಲಹೆ ನೀಡಲು ‘ಜಲ ಆಯೋಗ’ ರಚಿಸುವುದು.
(4) ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ: ಹಾಲು ಉತ್ಪಾದಕರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನವನ್ನು 7 ರೂ.ಗಳಿಗೆ ಹೆಚ್ಚಿಸುವುದು.
(5) ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ: ಪ್ರಸ್ತುತ ಇರುವ 2.00 ಕೋಟಿ ರೂ.ಗಳ ನಿಧಿಯನ್ನು 4.00 ಕೋಟಿ ರೂ.ಗಳಿಗೆ ಏರಿಸುವುದು.
(6) ಎಐ ತಂತ್ರಜ್ಞಾನದ (AI Technology) ವಿಷಯಗಳ ಅಳವಡಿಕೆ: ಉದ್ಯೋಗ ಮಾರುಕಟ್ಟೆಯ ಬದಲಾವಣೆಗೆ ತಕ್ಕಂತೆ ಪ್ರತಿ ಜಿಲ್ಲೆಯಲ್ಲಿ ಉದ್ಯೋಗಾಧಾರಿತ ಎಐ ಕೌಶಲ ಡಿಪ್ಲೊಮಾ ಕೋರ್ಸ್. (Job & Skill upgraded AI diploma) ಕೋರ್ಸ್ ಆರಂಭಿಸುವುದು.
(7) ಮೈಸೂರಿನಲ್ಲಿ ಕಾನೂನು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ: ಹಳೇ ಮೈಸೂರು ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಲ್ಲಿರುವ ಕಾನೂನು ವಿವಿಯ ಪ್ರಾದೇಶಿಕ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸುವುದು.
(8) ಇ-ವಾಹನಗಳ ಖರೀದಿ: ಪರಿಸರ ಮಾಲಿನ್ಯ ತಡೆಗೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಇನ್ಮುಂದೆ ಕೇವಲ ಎಲೆಕ್ಟ್ರಾನಿಕ್ ವಾಹನಗಳನ್ನೇ ಖರೀದಿ ಮಾಡುವುದು.
(9) ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಪ್ರತ್ಯೇಕ ಸಚಿವಾಲಯ: ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಮನ್ವಯಕ್ಕಾಗಿ ಐ.ಎ.ಎಸ್. ಅಧಿಕಾರಿ ನೇತೃತ್ವದ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದು.
(10) ವಸತಿ ಯೋಜನೆಗೆ ಅನುದಾನ ಹೆಚ್ಚಳ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 1000 ಮನೆಗಳನ್ನು ನೀಡುವುದು ಹಾಗೂ ಸಾಮಗ್ರಿಗಳ ಬೆಲೆ ಏರಿಕೆ ಹಿನ್ನೆಲೆ ಘಟಕ ವೆಚ್ಚ ಹೆಚ್ಚಿಸುವುದು.
(11) ಸ್ಥಳೀಯ ಸಂಸ್ಥೆಗಳ ಸದಸ್ಯರ ಭತ್ಯೆ ಹೆಚ್ಚಳ: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಗೌರವಧನ ಮತ್ತು ಸಭಾ ಭತ್ಯೆ ಹೆಚ್ಚಿಸುವುದು.
(12) ರೈತರ ಸಾಲದ ಮೊತ್ತ ಹೆಚ್ಚಳ: ಶೂನ್ಯ ಬಡ್ಡಿದರದ ಸಾಲದ ಒಟ್ಟು ಅನುದಾನವನ್ನು 28,000 ಕೋಟಿ ರೂ.ಗಳಿಂದ 30,000 ಕೋಟಿ ರೂ.ಗಳಿಗೆ ಹೆಚ್ಚಿಸುವುದು.
(13) ಬಾಕಿ ಉಳಿದ ರೈತರ ಸಾಲ ಮನ್ನಾ: ತಾಂತ್ರಿಕ ಕಾರಣದಿಂದ ಸಾಲ ಮನ್ನಾದಿಂದ ವಂಚಿತರಾದ 50,000 ರೈತರಿಗಾಗಿ 232 ಕೋಟಿ ರೂ. ಬಿಡುಗಡೆ ಮಾಡಿ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸುವುದು.
BREAKING : ಮೇ 5ರಿಂದ ಸುಪ್ರೀಂ ಕೋರ್ಟ್’ನಲ್ಲಿ ‘CAA’ ಪ್ರಶ್ನಿಸಿ ಸಲ್ಲಿಸಲಾದ 243 ಅರ್ಜಿಗಳ ವಿಚಾರಣೆ ಆರಂಭ!








