ರಕ್ತದಾನವು ಒಂದು ಉದಾತ್ತ ಉದ್ದೇಶವಾಗಿದೆ, ಪ್ರತಿ ವರ್ಷ ಲಕ್ಷಾಂತರ ಜೀವಗಳನ್ನು ಉಳಿಸುತ್ತದೆ. ಶಸ್ತ್ರಚಿಕಿತ್ಸೆಗಳು, ಅಪಘಾತಗಳು ಅಥವಾ ನಿರ್ದಿಷ್ಟ ರಕ್ತದ ಘಟಕಗಳ ಅಗತ್ಯವಿರುವ ವೈದ್ಯಕೀಯ ಪರಿಸ್ಥಿತಿಗಳಿಗೆ ಇದು ರಾಜಿ ಮಾಡಿಕೊಳ್ಳಲಾಗುವುದಿಲ್ಲ.
ರಕ್ತದಾನದ ಬಗ್ಗೆ ಇಂದಿಗೂ ಅನೇಕರಲ್ಲಿ ಹಲವಾರು ಅನುಮಾನಗಳಿವೆ, ವಿಶೇಷವಾಗಿ ಮೊದಲ ಬಾರಿಗೆ ರಕ್ತದಾನ ಮಾಡುವವರು ಸ್ವಲ್ಪ ಆತಂಕಕ್ಕೊಳಗಾಗುವುದು ಸಹಜ. ಆದರೆ, ರಕ್ತದಾನ ಪ್ರಕ್ರಿಯೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ರಕ್ತ ನೀಡಿದ ತಕ್ಷಣವೇ ನಮ್ಮ ದೇಹವು ಅದಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ.
ಕೈಲಾಶ್ ದೀಪಕ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಡಾ. ರಜತ್ ಕಾಂತ್ ಜೈನ್. “ನಮ್ಮ ದೇಹವು ಎಷ್ಟು ವೇಗವಾಗಿ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತದೆ ಎಂಬುದಕ್ಕೆ ರಕ್ತದಾನವು ಒಂದು ಅದ್ಭುತ ಉದಾಹರಣೆ” ಎನ್ನುತ್ತಾರೆ ಅವರು. “ಕೆಲವೇ ಗಂಟೆಗಳಲ್ಲಿ ನಿಮ್ಮ ದೇಹವು ಕಳೆದುಕೊಂಡ ದ್ರವ ಮತ್ತು ಜೀವಕೋಶಗಳನ್ನು ಮರುಪೂರಣ ಮಾಡಲು ಪ್ರಾರಂಭಿಸುತ್ತದೆ. ಹೆಚ್ಚಿನ ಆರೋಗ್ಯವಂತ ದಾನಿಗಳು ಒಂದೇ ದಿನದಲ್ಲಿ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ” ಎಂದು ಅವರು ತಿಳಿಸಿದ್ದಾರೆ. ಆರಂಭದಲ್ಲಿ ಕೆಲವು ದಾನಿಗಳಲ್ಲಿ ಸ್ವಲ್ಪ ಸುಸ್ತು ಅಥವಾ ತಲೆಸುತ್ತು ಕಾಣಿಸಿಕೊಳ್ಳಬಹುದು, ಆದರೆ ಸಾಕಷ್ಟು ನೀರು, ಪೌಷ್ಟಿಕ ಆಹಾರ ಮತ್ತು ವಿಶ್ರಾಂತಿಯೊಂದಿಗೆ ಇವು ಶೀಘ್ರವಾಗಿ ವಾಸಿಯಾಗುತ್ತವೆ.
ಮೊದಲ 24 ಗಂಟೆಗಳಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳ ಚೇತರಿಕೆ
ರಕ್ತದ ದ್ರವ ರೂಪವಾದ ಪ್ಲಾಸ್ಮಾ ಅತ್ಯಂತ ವೇಗವಾಗಿ, ಅಂದರೆ ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಮರುಪೂರಣಗೊಳ್ಳುತ್ತದೆ. “ರಕ್ತದ ಪ್ರಮಾಣವನ್ನು ಸರಿದೂಗಿಸಲು ಮತ್ತು ರಕ್ತದೊತ್ತಡವನ್ನು ಕಾಯ್ದುಕೊಳ್ಳಲು ಅಂಗಾಂಶಗಳ ನಡುವಿನ ದ್ರವವು ರಕ್ತನಾಳಗಳಿಗೆ ಸ್ಥಳಾಂತರಗೊಳ್ಳುತ್ತದೆ” ಎಂದು ಡಾ. ಜೈನ್ ವಿವರಿಸುತ್ತಾರೆ. ನಮ್ಮ ಲಿಂಫ್ಯಾಟಿಕ್ ವ್ಯವಸ್ಥೆಯು ಸಂಗ್ರಹವಾಗಿರುವ ದ್ರವ ಮತ್ತು ಪ್ರೋಟೀನ್ಗಳನ್ನು ರಕ್ತಕ್ಕೆ ಮರಳಿ ತರುತ್ತದೆ. ಹಾರ್ಮೋನುಗಳ ಪ್ರಕ್ರಿಯೆಯೂ ಇದಕ್ಕೆ ಸಾಥ್ ನೀಡುತ್ತದೆ: ಮೂತ್ರಪಿಂಡಗಳು ನೀರನ್ನು ಉಳಿಸಿಕೊಳ್ಳುತ್ತವೆ ಮತ್ತು ಮಿದುಳು ಬಾಯಾರಿಕೆಯನ್ನು ಉಂಟುಮಾಡುವ ಮೂಲಕ ನಾವು ಹೆಚ್ಚು ದ್ರವ ಪದಾರ್ಥ ಸೇವಿಸುವಂತೆ ಪ್ರೇರೇಪಿಸುತ್ತದೆ.
ಪ್ಲಾಸ್ಮಾ ವೇಗವಾಗಿ ಚೇತರಿಸಿಕೊಂಡರೂ, ಕೆಂಪು ರಕ್ತಕಣಗಳು (Red Blood Cells) ಮರು ಉತ್ಪತ್ತಿಯಾಗಲು ಕೆಲವು ವಾರಗಳೇ ಬೇಕಾಗುತ್ತವೆ. ಆದರೆ ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತಕಣಗಳು ವೇಗವಾಗಿ ಪ್ರತಿಕ್ರಿಯಿಸುತ್ತವೆ. ಮೂಳೆ ಮಜ್ಜೆಯು ತಕ್ಷಣವೇ ಹೊಸ ಜೀವಕೋಶಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. “ಇದೇ ಕಾರಣಕ್ಕೆ ರಕ್ತದಾನಿಗಳು ರಕ್ತ ನೀಡಿದ ಸ್ವಲ್ಪ ಸಮಯದ ನಂತರವೇ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರಿಸಬಹುದು” ಎನ್ನುತ್ತಾರೆ ಡಾ. ಜೈನ್.
ತಾತ್ಕಾಲಿಕ ಸುಸ್ತು ಮತ್ತು ತಲೆಸುತ್ತು
ಕೆಲವು ದಾನಿಗಳಿಗೆ ಲಘುವಾದ ತಲೆಸುತ್ತು ಕಾಣಿಸಿಕೊಳ್ಳಬಹುದು. ಇದು ರಕ್ತದ ಪ್ರಮಾಣದಲ್ಲಿನ ತಾತ್ಕಾಲಿಕ ಇಳಿಕೆ ಮತ್ತು ‘ವಾಸೊವಾಗಲ್’ (vasovagal) ಪ್ರತಿಫಲನಗಳಿಂದಾಗಿ ಸಂಭವಿಸುತ್ತದೆ. ಅಂದರೆ, ವಾಗಸ್ ನರವು ಹೃದಯ ಬಡಿತವನ್ನು ನಿಧಾನಗೊಳಿಸಿ ರಕ್ತನಾಳಗಳನ್ನು ಹಿಗ್ಗಿಸಬಹುದು, ಇದರಿಂದ ಮಿದುಳಿಗೆ ರಕ್ತದ ಹರಿವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಯುವಕರು, ಮೊದಲ ಬಾರಿ ರಕ್ತ ನೀಡುವವರು ಅಥವಾ ಕಡಿಮೆ ತೂಕ ಇರುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ನಿರ್ಜಲೀಕರಣ (Dehydration), ಉಪಹಾರ ಸೇವಿಸದಿರುವುದು, ನಿದ್ರೆಯ ಕೊರತೆ ಅಥವಾ ಕಡಿಮೆ ರಕ್ತದೊತ್ತಡ ಕೂಡ ಇದಕ್ಕೆ ಕಾರಣವಾಗಬಹುದು. ನೀರು ಕುಡಿಯುವುದು, ಲಘು ಆಹಾರ ಸೇವನೆ ಮತ್ತು ವಿಶ್ರಾಂತಿ ಪಡೆಯುವ ಮೂಲಕ ಇದನ್ನು ಸುಲಭವಾಗಿ ತಡೆಯಬಹುದು.
ದೇಹದ ಸಮನ್ವಯದ ಪ್ರತಿಕ್ರಿಯೆ
ರಕ್ತದಾನ ಮಾಡಿದ ಮೊದಲ 24 ಗಂಟೆಗಳಲ್ಲಿ ದೇಹವು ಒಂದು ಸಂಕೀರ್ಣವಾದ ಚೇತರಿಕೆ ಪ್ರಕ್ರಿಯೆಯನ್ನು ನಡೆಸುತ್ತದೆ: ಪ್ಲಾಸ್ಮಾ ಪ್ರಮಾಣವು ಮೊದಲಿನಂತಾಗುತ್ತದೆ, ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತಕಣಗಳು ಸಹಜ ಸ್ಥಿತಿಗೆ ಮರಳಲು ಆರಂಭಿಸುತ್ತವೆ. ಮುಂದಿನ ದಿನಗಳಲ್ಲಿ ಕಬ್ಬಿಣಾಂಶಯುಕ್ತ ಆಹಾರದ ಸಹಾಯದಿಂದ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ. ಹೃದಯ, ಮೂತ್ರಪಿಂಡಗಳು, ಯಕೃತ್ತು (Liver), ಮೂಳೆ ಮಜ್ಜೆ ಮತ್ತು ನರಮಂಡಲಗಳ ಈ ಸಂಘಟಿತ ಪ್ರಯತ್ನವು ದಾನಿಗಳು ಸುರಕ್ಷಿತವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ರೋಗಿಗಳ ಜೀವ ಉಳಿಸಲು ಸಹಾಯ ಮಾಡುತ್ತದೆ.








