ಬೆಂಗಳೂರು: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಾಗರ ತಾಲ್ಲೂಕಿನ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದಂತ ಡಾ.ಪ್ರತಿಮಾ.ಡಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದಂತ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರು ವರದಿಯನ್ನು ಸಲ್ಲಿಸಿ ದಿನಾಂಕ: 06.11.2025ರ ದಿನಪತ್ರಿಕೆಯಲ್ಲಿ ಅಪ್ರಾಪ್ತಯ ಗರ್ಭಪಾತ: ಸರಕಾರಿ ವೈದ್ಯ ಸೇರಿ 09 ಜನರ ವಿರುದ್ಧ ಪ್ರಕರಣ ಎಂದು ಪ್ರಕಟವಾಗಿರುವ ಪತ್ರಿಕಾ ವರದಿಯಲ್ಲಿ ಡಾ|| ಪ್ರತಿಮಾ ಡಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂ, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ: 17.10.2025ರಂದು ಅಪ್ರಾಪ್ತಯ ಗರ್ಭಪಾತವನ್ನು ಸಾಗರ ಖಾಸಗಿ ಆಸ್ಪತ್ರೆಯಾದ ಸಾಯಿ ಬೃಂದಾವನ ಆಸ್ಪತ್ರೆಯಲ್ಲಿ ಮಾಡಿರುತ್ತಾರೆ ಎಂದು ಪೋಲಿಸ್ ಇನ್ಸಪೆಕ್ಟರ್, ಸಾಗರ ಪೇಟೆ ಪೋಲಿಸ್ ಠಾಣೆ ಇವರು ಪ್ರಥಮ ವರ್ತಮಾನ ವರದಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 64(2)(m) ಹಾಗೂ ಪೋ ಕಾಯ್ದೆ 2012ರ ಸೆಕ್ಷನ್ 6ರಡಿ(FIR) ದಾಖಲಿಸಿರುತ್ತಾರೆ ಎಂದು ತಿಳಿಸಿರುತ್ತಾರೆ. ಸದರಿ ವೈದ್ಯರು ಅಪ್ರಾಪ್ತ ಬಾಲಕಿಯು ಗರ್ಭಿಣಿಯಾಗಿರುವುದು ತಿಳಿದಿದ್ದರೂ ಪೋಕ್ಸ್,2012ರ ಕಾಯ್ದೆಯಡಿ ಪೊಲೀಸರಿಗೆ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗಿರುತ್ತಾರೆ ಎಂದಿದ್ದಾರೆ.
ಸದರಿ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಾಗರ ಇವರು ಜಂಟಿಯಾಗಿ ನಡೆಸಿರುವ ಪರಿಶೀಲನಾ ವರದಿಯಲ್ಲಿ ಅಪ್ರಾಪ್ತ ಬಾಲಕಿಯು ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂನಲ್ಲಿ ಡಾ||ಪ್ರತಿಮಾ.ಡಿ ಇವರು ತಮ್ಮ ಒ.ಪಿ.ಡಿ ವಹಿಯಲ್ಲಿ ಹಾಗೂ ಪ್ರಯೋಗಶಾಲಾ ದಾಖಲಾತಿ ವಹಿಯಲ್ಲಿ ದಾಖಲಿಸಿರುವುದನ್ನು ವರದಿಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಪೋಲೀಸ್ ಇನ್ಸೆಕ್ಟರ್ ಸಾಗರಪೇಟೆ ಪೋಲಿಸ್ ಠಾಣೆ ಇವರು ಕೋರಲಾದಂತೆ ತಜ್ಞ ವೈದ್ಯರ ತನಿಖಾ ತಂಡವನ್ನು ರಚಿಸಲಾಗಿ ಸಾಗರದ ಚಾಂದಿನಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಹಾಗೂ ದಿನಾಂಕ: 12.10.2025ರಂದು ಸ್ಕ್ಯಾನಿಂಗ್ ಮಾಡಿರುವ ವಿವರ ಮತ್ತು ದಾಖಲೆಗಳನ್ನು ಪರಿಶೀಲಿಸಿ ತನಿಖಾ ತಂಡ ವರದಿಯನ್ನು ನೀಡಿರುತ್ತಾರೆ. ಈ ಎಲ್ಲಾ ತನಿಖಾ ವರದಿ ಹಾಗೂ ತನಿಖಾ ತಂಡ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ ಸದರಿ ಪ್ರಕರಣದಲ್ಲಿ ಡಾ||ಪ್ರತಿಮಾ ಡಿ ಇವರು ಅಪ್ರಾಪ್ತಯ ಗರ್ಭಪಾತವನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಶಿವಮೊಗ್ಗ ಇವರು ವರದಿಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಮೇಲ್ಕಂಡ ವರದಿಯಲ್ಲಿನ ಅಂಶಗಳನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(3) ರನ್ವಯ ಕೂಲಂಕುಶವಾಗಿ ಪರಿಶೀಲಿಸಿ, ಡಾ||ಪ್ರತಿಮಾ ಡಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ಅಪ್ರಾಪ್ತಯ ಗರ್ಭಪಾತ ಮಾಡಿರುವುದು ವೈದ್ಯ ವೃತ್ತಿಗೆ ಹಾಗೂ ನೈತಿಕತೆಗೆ ಕುಂದು ತರುವಂತದ್ದಾಗಿದ್ದು, ವೈದ್ಯರ ವಿರುದ್ಧದ ಕರ್ತವ್ಯಲೋಪ, ಕರ್ತವ್ಯ ನಿರ್ಲಕ್ಷ್ಯತ ತನ ಮತ್ತು ಬೇಜಬ್ದಾರಿತನದ ಗಂಭೀರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುತ್ತವೆ ಎಂದಿದ್ದಾರೆ.
ಆದುದರಿಂದ ನ್ಯಾಯ ಸಮ್ಮತ ಪಕ್ಷಪಾತ ರಹಿತ ವಿಚಾರಣೆ ನಡೆಸಲು ಹಾಗೂ ದಾಖಲೆಗಳನ್ನು ತಿದ್ದುವ, ನಾಶಪಡಿಸುವ ಅಥವಾ ಸಾಕ್ಷಿದಾರರನ್ನು ಪ್ರಭಾವಿತಗೊಳಿಸುವುದನ್ನು ತಡೆಯುವ ಉದ್ದೇಶದಿಂದ ಡಾ||ಪ್ರತಿಮಾ ಡಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಇವರನ್ನು ತಕ್ಷಣದಿಂದ ಅಮಾನತ್ತುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಕಂಡುಬಂದಿದೆ. ಆದ್ದರಿಂದ ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ) ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗುರುದತ್ತ ಹೆಗಡೆ., ಭಾ.ಆ.ಸೇ, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ನಾನು ಡಾ. ಪ್ರತಿಮಾ ಡಿ, ಪ್ರಸೂತಿ ಮತ್ತುಪ್ರೀರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂ, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧದ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯತನ ಆರೋಪದ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿರುತ್ತೇನೆ ಎಂದು ತಿಳಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ, ಸದರಿ ವೈದ್ಯರ ಲೀನ್ ಅನ್ನು ಸಾರ್ವಜನಿಕ ಆಸ್ಪತ್ರೆ, ಸಿರಿಗುಪ್ಪ ಬಳ್ಳಾರಿ ಇಲ್ಲಿ ಖಾಲಿಯಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆಗೆ ಸ್ಥಳಾಂತರಿಸಿದೆ ಹಾಗೂ ಸದರಿ ವೈದ್ಯರು ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೇ, ಕೇಂದ್ರಸ್ಥಾನ ಬಿಡತಕ್ಕದ್ದಲ್ಲವೆಂದು ಆದೇಶಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು









