ಬೆಂಗಳೂರು : ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ ಸುರಕ್ಷೆ ಮತ್ತು ವಿಶ್ವಾಸ ನೀಡುವ ಆಶಾಕಿರಣವಾಗಿ “ಆಸರೆ” ಎಂಬ ಸಮುದಾಯ ಪೊಲೀಸ್ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರುವುದು ಮತ್ತು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಪೊಲೀಸರು “ಆಸರೆ” ಎಂಬ ವಿನೂತನ ಉಪಕ್ರಮವನ್ನು ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮತ್ತು ವಯೋವೃದ್ಧ ಹಿರಿಯ ನಾಗರಿಕರಿಗೆ ಅವರ ಜೀವನದಲ್ಲಿ ಒಂಟಿತನದ ಅಸುರಕ್ಷತೆ, ಅಭದ್ರತೆ, ಹಾಗೂ ಕಾಳಜಿ ವಹಿಸುವ ವಿಶ್ವಾಸದ ಕೊರತೆಯನ್ನು ನೀಗಿಸಿ ಅವರಿಗೆ ಈ “ಆಸರೆ” ಎಂಬ ಸಮುದಾಯ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ಸುರಕ್ಷತೆ, ಭದ್ರತೆ, ಯೋಗಕ್ಷೇಮದ ವಿಶ್ವಾಸ ನೀಡುವಂತಹ ಮತ್ತು ಅವರು ಒಂಟಿಯಲ್ಲ ಅವರೊಂದಿಗೆ ಪೊಲೀಸ್ ಇಲಾಖೆ ಮತ್ತು ಘನ ಸರ್ಕಾರವಿದೆ ಎಂಬ ಬಲವಾದ ನಂಬಿಕೆ ಮತ್ತು ವಿಶ್ವಾಸ ಮೂಡಿಸುವಂತಹ ಮಹೋನ್ನತ ಗುರಿಯನ್ನು ಹೊಂದಿರುವ ಉತ್ತಮವಾದ ಸಮುದಾಯ ಪೊಲೀಸ್ ಪರಿಕಲ್ಪನೆಯಾದ “ಆಸರೆ”ಯನ್ನು ಜಾರಿಗೆ ತರಲಾಗಿದೆ.
ದೇಶದ ಇತರ ಭಾಗಗಳಂತೆ ಕರ್ನಾಟಕವೂ ವೇಗವಾಗಿ ಹೆಚ್ಚುತ್ತಿರುವ ಹಿರಿಯ ನಾಗರೀಕರ ಜನಸಂಖ್ಯೆಗೆ ಸಾಕ್ಷಿಯಾಗುತ್ತಿದೆ. ಹಿರಿಯ ನಾಗರಿಕರು, ವಿಶೇಷವಾಗಿ ಒಂಟಿಯಾಗಿರುವವರು ಹೆಚ್ಚಿನ ಸಾಮಾಜಿಕ, ದೈಹಿಕ, ಮಾನಸಿಕ ಮತ್ತು ಸೈಬರ್-ಸಂಬಂಧಿತ ದುರ್ಬಲತೆಗಳನ್ನು ಎದುರಿಸುತ್ತಿದ್ದಾರೆ, ಇದರಿಂದಾಗಿ ಅವರು ಅಪರಾಧ, ನಿರ್ಲಕ್ಷ್ಯ, ನಿಂದನೆ ಮತ್ತು ಪ್ರತ್ಯೇಕತೆಗೆ ಗುರಿಯಾಗುತ್ತಾರೆ. ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ ಒಂಟಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರ ಮತ್ತು ವೃದ್ಧರ ಸಂಖ್ಯೆ ಗಣನೀಯವಾಗಿದ್ದು ಅವರನ್ನು ನೋಡಿಕೊಳ್ಳುವ ಕಾಳಜಿವಹಿಸುವ ಹಾಗೂ ಅವರ ಸುರಕ್ಷತೆಗಾಗಿ ಎಲ್ಲಾ ಕ್ರಮ ಕೈಗೊಳ್ಳುವ ಆಸರೆ ಕೈಗಳು ಇಲ್ಲದೆ ಅನಾಥ ಭಾವದಿಂದ ಯಾರಿಗೂ ಬೇಡವಾದ ಬದುಕು ಸಾಗಿಸುತ್ತಿದ್ದುದ್ದನ್ನು ನಾವು ಕಾಣುತ್ತಿದ್ದೇವೆ.
ಇದು ಸಮಾಜದಲ್ಲಿ ಅನೇಕ ಕಾರಣಗಳಿಂದಾಗಿ ಒಂಟಿಯಾಗಿ ವಾಸಿಸುತ್ತಿರುವ ಹಿರಿಯ ನಾಗರೀಕರು ಅದರಲ್ಲೂ ಒಂಟಿ ಮಹಿಳೆಯರ ಮಾನ, ಸ್ವತ್ತು ಹಾಗೂ ಜೀವಗಳಿಗೆ ಅನೇಕ ಸಂದರ್ಭಗಳಲ್ಲಿ ಅಪರಾಧಿಗಳ ಮತ್ತು ಅಕ್ರಮ ಎಸಗುವವರಿಗೆ ಗುರಿಯಾಗಿ ತೊಂದರೆಗೀಡಾದ ಪ್ರಕರಣಗಳನ್ನು ನಾವು ದಿನವಿಡಿ ನೋಡುತ್ತೇವೆ. ಇಂತಹ ಅನಾಥ ಭಾವ ಒಂಟಿತನದ ಖಿನ್ನತೆಯಲ್ಲಿ ಅಪರಾಧಗಳಿಗೆ ಸುಲಭವಾಗಿ ಬಲಿಯಾಗುವ ಮತ್ತು ತೊಂದರೆಗೆ ಸಿಲುಕಿಕೊಳ್ಳುವ ಇವರುಗಳನ್ನು ಹಾಗೂ ಅವರ ಮಾನ, ಪ್ರಾಣ ಹಾಗೂ ಸ್ವತ್ತುಗಳನ್ನು ಸಂರಕ್ಷಿಸುವ ಹಾಗೂ ಸುರಕ್ಷತೆಗೆ ಕುರಿತಂತೆ ಸರ್ಕಾರವು ಕಟಿಬದ್ಧವಾಗಿದೆ ಮತ್ತು ಎಲ್ಲಾ ಸಂದರ್ಭದಲ್ಲೂ ಅವರೊಂದಿಗೆ ಸರ್ಕಾರವಿದೆ ఎంబ ಮನೋಸ್ಥೆರ್ಯ ತುಂಬುವ ಒಂದು ಯೋಜನೆಯಾಗಿದೆ.
ಈ ವಾಸ್ತವವನ್ನು ಗುರುತಿಸಿ, ರಾಜ್ಯ ಪೊಲೀಸ್ ಇಲಾಖೆಯು “ಆಸರೆ” ಅನ್ನು ಮಾನವೀಯ, ಪೂರ್ವಭಾವಿ ಮತ್ತು ನಾಗರಿಕ-ಕೇಂದ್ರಿತ ಪೊಲೀಸ್ ಮಾದರಿಯಾಗಿ ಪರಿಕಲ್ಪಿಸಲಾಗಿದೆ. ರಚನಾತ್ಮಕ ಪೊಲೀಸ್ ಸಂಪರ್ಕ, ಸಮುದಾಯ ಭಾಗವಹಿಸುವಿಕೆ ಮತ್ತು ಸಾಂಸ್ಥಿಕ ಸಮನ್ವಯದ ಮೂಲಕ ಹಿರಿಯ ನಾಗರಿಕರಲ್ಲಿ ಸುರಕ್ಷತೆಯ ಮನೋಭಾವವನ್ನು ಉಂಟುಮಾಡುವುದಲ್ಲದೆ ಅವರುಗಳಿಗೆ ತಮ್ಮೊಂದಿಗೆ ಸಹಕಾರ ನೀಡಲು ಕರ್ನಾಟಕ ರಾಜ್ಯ ಪೊಲೀಸರು ಇರುತ್ತಾರೆ ಎಂಬ ಭಾವನೆಯನ್ನು ಮೂಡಿಸುತ್ತದೆ.
ಈ ಉಪಕ್ರಮವು ಭಾರತದ ಸಂವಿಧಾನದ ವಿಧಿ/ಕಲಂ 21 ರ ಅಡಿಯಲ್ಲಿ ಸಾಂವಿಧಾನಿಕ ಆದೇಶದಿಂದ ಬಲವನ್ನು ಪಡೆಯುತ್ತದೆ. ಸಂವಿಧಾನದ ವಿಧಿಯಲ್ಲಿ ತಿಳಿಸಿರುವಂತೆ ಭಾರತದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಇದೆ. ಇದಕ್ಕೆ ಹಿರಿಯ ನಾಗರಿಕರು ಸಹ ಸಂಪೂರ್ಣ ಅರ್ಹರಾಗಿರುತ್ತಾರೆ. ಈ “ಆಸರೆ” ಎಂಬ ಪರಿಕಲ್ಪನೆಯಿಂದ ಪೊಲೀಸ್ ಇಲಾಖೆಯು ಕಾನೂನನ್ನು ಜಾರಿಗೊಳಿಸುವುದು ಮಾತ್ರವಲ್ಲದೆ, ಹಿರಿಯರೊಂದಿಗೆ ನೆರೆಹೊರೆಯ ಜಾಗರೂಕತೆಯನ್ನು ಬಲಪಡಿಸುವ ಮೂಲಕ, ತ್ವರಿತ ಪೊಲೀಸ್ ಪ್ರತಿಕ್ರಿಯೆಯನ್ನು ಸುಗಮಗೊಳಿಸುವುದು ಮತ್ತು ಕುಟುಂಬಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸುವ ಮೂಲಕ ಕಾನೂನುಬದ್ಧ ಸಹಾನುಭೂತಿಯನ್ನು ಹಿರಿಯ ನಾಗರಿಕರಿಗೆ ಒದಗಿಸಲು ಬದ್ಧವಾಗಿದೆ.
ಪೊಲೀಸ್ ಠಾಣೆಗಳ ಪಾತ್ರ ಮತ್ತು ಜವಾಬ್ದಾರಿಗಳು:
ಪ್ರತಿಯೊಂದು ಪೊಲೀಸ್ ಠಾಣೆಯು ಕೆಳಗೆ ವಿವರಿಸಿದಂತೆ “ಆಸರೆ” ಎಂಬ ಪರಿಕಲ್ಪನೆಯನ್ನು ತಕ್ಷಣವೇ ಜಾರಿಗೊಳಿಸಬೇಕು:
ಎ. ಗುರುತಿಸುವಿಕೆ ಮತ್ತು ನೋಂದಣಿ:
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರತಿ ಬೀಟ್ನಲ್ಲಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿರುವ ಎಲ್ಲಾ ಮನೆಗಳನ್ನು ಗುರುತಿಸುವುದು.
ಹಿರಿಯ ನಾಗರಿಕರ ನೋಂದಣಿಯನ್ನು ಈ ಕೆಳಕಂಡ ಹಂತಗಳಲ್ಲಿ ನಿರ್ವಹಿಸುವುದು;
ಬೀಟ್ ಮಟ್ಟದಲ್ಲಿ ಹಾಗೂ
ಪೊಲೀಸ್ ಠಾಣೆ ಮಟ್ಟದಲ್ಲಿ,
ಪೂರ್ಣ ವಿಳಾಸ, ಸಂಪರ್ಕ ವಿವರಗಳು, ಹತ್ತಿರದ ಸಂಬಂಧಿಗಳು ಮತ್ತು ಇತರೆ ಸಂಬಂಧಿತರ, ಸ್ನೇಹಿತರ ವಿವರಗಳನ್ನು ದಾಖಲಿಸುವುದು.
ನೋಂದಣಿ ರಿಜಿಸ್ಟರ್ಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಶೀಲಿಸುವುದು ಮತ್ತು ಉಪ-ವಿಭಾಗೀಯ ಪೊಲೀಸ್ ಅಧಿಕಾರಿಗೆ (ಎಸ್ಡಿಪಿಓ) ವರದಿಯನ್ನು ಸಲ್ಲಿಸುವುದು.









