ಮೈಸೂರು : ಮೈಸೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಹಾಯ ಮಾಡಲು ಮುಂದೆ ಬಂದವರು ಅಪಘಾತವಾಗಿ ಬಿದ್ದವನಿಂದಲೇ ಸಾವಿರಾರು ರೂ. ದೋಚಿರುವ ಘಟನೆ ನಡೆದಿದೆ.
ಮೈಸೂರು ತಾಲೂಕಿನ ಕಡಕೊಳದ ಬಳಿ ನಡೆದ ಅಪಘಾತವೊಂದು ನಡೆದಿದ್ದು, ಮಾನವೀಯತೆಯ ಮುಖವಾಡದ ಹಿಂದಿನ ಕರಾಳ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ. ಡಿಸೆಂಬರ್ 19ರ ಮಧ್ಯರಾತ್ರಿ, ಕಡಕೋಳದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿದ ಗಣೇಶ್ ಎಂಬ ಯುವಕ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಈತನ ಸಹಾಯಕ್ಕೆಂದು ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನು ಬಂದಿದ್ದರು. ಗಣೇಶ್ನನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಆತನ ಮೊಬೈಲ್ ವಶಪಡಿಸಿಕೊಂಡ ಪಾಪಿಗಳು, ಆತನ ಅಸಹಾಯಕತೆಯನ್ನೂ ಲೆಕ್ಕಿಸದೆ ಆತನ ಖಾತೆಯಿಂದ ಬರೋಬ್ಬರಿ 80 ಸಾವಿರ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಗಾಯಗೊಂಡ ಸ್ಥಿತಿಯಲ್ಲಿದ್ದ ಗಣೇಶ್ನ ಮೊಬೈಲ್ ತೆಗೆದುಕೊಂಡ ಪಾಪಿಗಳು, ಆತನ ಫಿಂಗರ್ಪ್ರಿಂಟ್ ಬಳಸಿ ಯುಪಿಐ ಮೂಲಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಹಣ ವರ್ಗಾವಣೆ ಮುಗಿದ ಕೂಡಲೇ ಗಣೇಶ್ನನ್ನು ಆಸ್ಪತ್ರೆಗೂ ಸೇರಿಸದೆ ಅಸಹಯಕ ಸ್ಥಿತಿಯಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಗಣೇಶ್ನ ಸಹೋದರ ಅಂಕನಾಯಕ ಸ್ಥಳಕ್ಕೆ ಆಗಮಿಸಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಘಟನೆಯ ಕುರಿತು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತ್ವರಿತವಾಗಿ ಹಣ ವರ್ಗಾವಣೆ ಮಾಹಿತಿಗಳನ್ನು ಸಂಗ್ರಹಿಸಿ, ರಮೇಶ್ ಮತ್ತು ಮನು ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂ. ನಗದು ಹಾಗೂ ಎರಡು ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಪತ್ತೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಉಪಾಧೀಕ್ಷಕರಾದ ಆರ್.ಶ್ರೀಕಾಂತ್, ಪೊಲೀಸ್ ನಿರೀಕ್ಷಕರಾದ.ಸುನೀಲ್.ಎಸ್.ಪಿ, ಪೊಲೀಸ್ ಉಪ ನಿರೀಕ್ಷಕರಾದ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ.ಎಸ್, ಸಿಹೆಚ್ಸಿ 220, ರಂಗಸ್ವಾಮಿ.ಹೆಚ್.ವಿ, ಸಿಹೆಚ್ಸಿ 101,ಬಸವರಾಜು, ಸಿಪಿಸಿ-159 ರವರುಗಳ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.








