ಬೆಂಗಳೂರು: 1975ರಲ್ಲಿ ಮತಗಳ್ಳತನ ಮಾಡಿ ಸಿಕ್ಕಿಬಿದ್ದ ಇಂದಿರಾಗಾಂಧಿಯವರು ತನ್ನ ಅಧಿಕಾರ ಉಳಿಸಿಕೊಳ್ಳಲು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು. ಯಾವ ಕೋರ್ಟುಗಳೂ ಪ್ರಶ್ನೆ ಮಾಡದಂತೆ ನೋಡಿಕೊಂಡಿದ್ದರು. ನ್ಯಾಯಾಲಯಗಳೇ ತಟಸ್ಥವಾಗಿ ಇರುವಂತೆ ಮಾಡಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಸಂವಿಧಾನ ಸಮರ್ಪಣ ದಿವಸದ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಥ ಅನಾಹುತಗಳನ್ನು ಮಾಡಿದ ಕಾಂಗ್ರೆಸ್ ಪಕ್ಷವು ಮತಗಳ್ಳತನದ ಮಾತನಾಡುತ್ತಿದೆ. ನಾವು ಸಂವಿಧಾನದ ವಿರೋಧಿಗಳು ಎನ್ನುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮೊದಲು ಸಂವಿಧಾನದ ಕೊಲೆ ಮಾಡುತ್ತದೆ. ತನಿಖೆ ಮಾಡಿದಾಗ ಕಾಂಗ್ರೆಸ್ಸೇ ಬಂಧನಕ್ಕೆ ಒಳಗಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.
ಮತಗಳ್ಳತನದ ಮಾತನಾಡುತ್ತಾರೆ; ಕೋರ್ಟಿಗೆ ಹೋಗುವುದಿಲ್ಲ. ಯಾಕೆಂದರೆ ರಾಹುಲ್ ಗಾಂಧಿ ಬಂಧನಕ್ಕೆ ಒಳಗಾಗುತ್ತಾರೆ ಎಂಬುದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಇಂಥ ಕಳ್ಳ ಕಾಂಗ್ರೆಸ್ ಕೈಯಲ್ಲಿ ದೇಶ ಬದುಕುತ್ತಿದೆಯಲ್ಲವೇ? ಬೇಕೇ ಇದು ಎಂದು ಕೇಳಿದರು.
ಕಾಂಗ್ರೆಸ್ಸಿಗೆ ಯಾವುದೇ ನೈತಿಕತೆ ಉಳಿದಿಲ್ಲ; ಸಂವಿಧಾನ ದಿನಾಚರಣೆ ಅವರದಲ್ಲ. ಮೋದಿಯವರ ನಾಯಕತ್ವದಲ್ಲಿ ಸಂವಿಧಾನ ದಿನಾಚರಣೆ ಈ ದೇಶಕ್ಕೆ ಬಂದಿದೆ ಎಂದು ನಾವು ಎದೆತಟ್ಟಿ ಹೇಳಬೇಕು ಎಂದು ಮನವಿ ಮಾಡಿದರು. ಅದು ಕಾಂಗ್ರೆಸ್ಸಿನ ಕೊಡುಗೆ ಅಲ್ಲ ಎಂದು ತಿಳಿಸಿದರು. ನಾವು ಸಂವಿಧಾನದ ಪರ, ನಾವು ಬಾಬಾ ಸಾಹೇಬ ಡಾ. ಅಂಬೇಡ್ಕರರ ಪರ, ನಾವು ಮೀಸಲಾತಿ- ದಲಿತರ ಎಂದು ಎದೆತಟ್ಟಿ ಹೇಳಬಹುದು; ಕಾಂಗ್ರೆಸ್ ಹೇಳುತ್ತಿದ್ದು ಅದು ಆತ್ಮವಂಚನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ದಲಿತರ ಪರ ಅಲ್ಲ..
ಇವತ್ತಿಗೂ ಕಾಂಗ್ರೆಸ್ ಪಕ್ಷ ದಲಿತರ ಪರ ಅಲ್ಲ; ಎರಡ್ಮೂರು ದಲಿತ ಕುಟುಂಬಗಳನ್ನು ಗುತ್ತಿಗೆ ತೆಗೆದುಕೊಂಡಿದೆ. ಅವರಿಗೆ ದಲಿತ ಪ್ರೇಮವೂ ಇಲ್ಲ. ಕಾಂಗ್ರೆಸ್ಸಿಗೆ ದಲಿತ ಪ್ರೀತಿಯೂ ಇಲ್ಲ. ದಲಿತರು ಎಲ್ಲಿ ಬೇಕಾದರೂ ಹಾಳಾಗಲಿ; ನಮ್ಮ ಕುಟುಂಬ ಸರಿ ಇದ್ದರೆ ಸಾಕು ಎಂಬ ಯೋಚನೆ ಆ ಮೂರು ಕುಟುಂಬಗಳದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಖರ್ಗೆಯವರ ಕುಟುಂಬ, ಮಹದೇವಪ್ಪನವರ ಮತ್ತು ಕೆ.ಎಚ್.ಮುನಿಯಪ್ಪನವರ ಕುಟುಂಬ- ಇವು. ಏನು ಬಂದರೂ ನನ್ನ ಮನೆಗೇ ಬರಬೇಕೆಂಬ ಕುಟುಂಬಗಳವು. ಇವರೆಲ್ಲ ತಗ್ಗು ಪ್ರದೇಶದಲ್ಲಿ ಮನೆ ಮಾಡಿ ಕುಳಿತಿದ್ದಾರೆ. ನೀರು ಅಲ್ಲಿಗೇ ಹೋಗುತ್ತದೆ ಎಂದು ವ್ಯಂಗ್ಯವಾಡಿದರು. ಸಂವಿಧಾನಕ್ಕೆ ಅಪಚಾರ ಮಾಡಿದವರು ಸಂವಿಧಾನ ಹಿಡಿದುಕೊಂಡು ಈ ಸಂವಿಧಾನವನ್ನು ನಾವು ಕಾಪಾಡಬೇಕು; ನಮ್ಮನ್ನು ಬಿಟ್ಟರೆ ಯಾರಿಂದಲೂ ಆಗಲ್ಲ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಇವರಿಂದ ಇದು ಆಗುತ್ತದೆಯೇ ಎಂದು ಕೇಳಿದರು.
ದಲಿತ ಸಮುದಾಯಗಳಿಗೆ ಮತದಾನದ ಹಕ್ಕು ಇರಲಿಲ್ಲ; ಕೇವಲ ಜಮೀನ್ದಾರರಿಗೆ ಇತ್ತು. ಬಾಬಾ ಸಾಹೇಬ ಡಾ. ಅಂಬೇಡ್ಕರರ ಹೋರಾಟದ ಫಲವಾಗಿ ನಮ್ಮೆಲ್ಲರಿಗೂ ಮತದಾನದ ಹಕ್ಕು ಬಂದಿದೆ ಎಂದು ಅವರು ವಿವರಿಸಿದರು. ದಲಿತರಿಗೆ ಮೀಸಲಾತಿ ಕೊಟ್ಟಿದ್ದರಿಂದ ಈ ದೇಶವು ಅಭಿವೃದ್ಧಿ ಆಗುವುದಿಲ್ಲ ಎಂದು ಮೊದಲ ಪ್ರಧಾನಿ ನೆಹರೂ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮೀಸಲಾತಿ ವಿರೋಧಿಗಳು ಯಾರು? ಕಾಂಗ್ರೆಸ್; ಹೇಳುವುದು ಬಿಜೆಪಿ ಮೇಲೆ; ನಾಚಿಕೆ ಆಗಬೇಕಲ್ಲವೇ ನಿಮಗೆ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನವಿರೋಧಿಗಳು ಎನ್ನುತ್ತಾರೆ. ಬಾಬಾಸಾಹೇಬರ ಪಂಚ ಕ್ಷೇತ್ರಗಳನ್ನು ರಾಷ್ಟ್ರೀಯ ಸ್ಮಾರಕ ಮಾಡಿದ್ದು ನರೇಂದ್ರ ಮೋದಿಜೀ ಅವರ ಬಿಜೆಪಿ ಸರಕಾರ ಎಂದರು.
ಅಂಬೇಡ್ಕರರು ದೆಹಲಿ ನಿವಾಸದಲ್ಲಿ ತೀರಿಕೊಂಡಾಗ ಬಾಂಬೆಗೆ ಓಡಿಸಿದವರು ಕಾಂಗ್ರೆಸ್ಸಿನವರು. ಅನಾಥ ಶವದಂತೆ ಸಮುದ್ರ ತೀರದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರಣ. ಆದರೆ, ಬಿಜೆಪಿ ವಿರುದ್ಧ ಹೇಳುತ್ತಾರೆ ಎಂದು ಟೀಕಿಸಿದರು.
ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಮುಖಂಡ ಮುನಿಕೃಷ್ಣ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮತ್ತು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.








