ಬೆಂಗಳೂರು : ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1) ರ ಸುತ್ತೋಲೆಯಲ್ಲಿ ಭಾರತ ಸರ್ಕಾರದ ದಿನಾಂಕ: 20-11-1990ರ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂ ನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಲು ಕ್ರಮಾಂಕ (2) ರಂತೆ ಸಂಬಂಧಿಸಿದ ಎಲ್ಲಾ ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರಿಗಳಿಗೆ ತಿಳಿಸಲಾಗಿತ್ತು.
ಮೇಲೆ ಓದಲಾದ ಕ್ರಮಾಂಕ (3) ರಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ ಪರಿಶಿಷ್ಟ ಜಾತಿಯವರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ಮತ್ತೊಮ್ಮೆ ಪತ್ರ ಮುಖೇನ ತಿಳಿಸಿರುತ್ತಾರೆ. ಮುಂದುವರೆದು, ಮೇಲೆ ಓದಲಾದ ಕ್ರಮಾಂಕ (5) ರಂತೆ ಭಾರತ ಸಂವಿಧಾನದ ತಿದ್ದುಪಡಿ ಮಾಡಿ ಅಧಿಸೂಚಿಸಲಾಗಿದೆ. ಈ ಬಗ್ಗೆ, ಈಗಾಗಲೇ ಸುತ್ತೋಲೆ ಹೊರಡಸಿದರೂ ಸಹ ಮತ್ತೆ ಹಲವಾರು ಸಂಘ-ಸಂಸ್ಥೆಗಳು ಮನವಿಗಳನ್ನು ಸಲ್ಲಿಸಿ, ಸೃಷ್ಟಿಕರಣ ಮತ್ತು ಸೂಕ್ತ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದಲ್ಲಿ ಅಂತಹವರಿಗೆ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990 (ತಿದ್ದುಪಡಿ) ಅಧಿನಿಯಮ 2024 ಮತ್ತು ನಿಯಮಗಳು, 1992 ರಂತೆ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದೆ.
ಮುಂದುವರೆದು, ಜಾತಿ ಪ್ರಮಾಣ ಪತ್ರ ನೀಡುವ ಸಂಬಂಧಪಟ್ಟ ಪ್ರಾಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸುವುದು. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವ ಅರ್ಜಿಗಳಲ್ಲಿ ಧರ್ಮದ ಕಾಲಂ ನಲ್ಲಿ ಬೌದ್ಧ (Buddhism) ಎಂದು ನಮೂದಿಸಲು ಅವಕಾಶ ಕಲ್ಪಿಸುವುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳು/ಖಾಸಗಿ ಶಾಲೆಗಳು/ಇತರೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿನ ದಾಖಲೆಗಳಲ್ಲಿ ಅರ್ಜಿದಾರರು/ಪೋಷಕರು ಇಚ್ಛಿಸಿದಲ್ಲಿ ಧರ್ಮದ ಕಾಲಂ ನಲ್ಲಿಯೂ ಸಹ ಬೌದ್ಧ (Buddhism) ಎಂದು ನಮೂದಿಸಲು ಅವಕಾಶ ನೀಡುವುದು. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು ನಿಗಮ ಮಂಡಳಿಗಳು/ಇತರೆ ಸಂಸ್ಥೆಗಳು ಸದರಿ ಆದೇಶದಂತೆ ಕ್ರಮವಹಿಸುವುದು.