ಬೆಂಗಳೂರು: ನಿನ್ನೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ 11 ವರ್ಷದ ಬಾಲಕ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು. ಆದರೇ ವಾಸ್ತವವಾಗಿ ಬೈಕ್ ಸವಾರನೇ ಆಯತಪ್ಪಿ ಬಿದ್ದ ಪರಿಣಾಮ, ಹಿಂಬಾಗದಲ್ಲಿ ಕುಳಿತಿದ್ದಂತ 11 ವರ್ಷದ ಬಾಲಕ ಬಿಎಂಟಿಸಿ ಬಸ್ಸಿನ ಹಿಂಬಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಈ ಭಯಾನಕ ವೀಡಿಯೋವನ್ನು ಬಿಎಂಟಿಸಿ ಬಿಡುಗಡೆ ಮಾಡಿದ್ದು, ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದೆ.
ದಿನಾಂಕ: —24/08/2025 ರ ಸಂಜೆ 17:45 ಕ್ಕೆ ಘಟಕ–52 (ಹುತ್ತನಹಳ್ಳಿ)ಗೆ ಸೇರಿದ ಬಸ್ ಸಂಖ್ಯೆ KA–57–F–6496 ಕೆ.ಆರ್. ಮಾರುಕಟ್ಟೆ, ಜಾಮಿ ಮಸೀದಿ ಸಮೀಪದಲ್ಲಿ ಅಪಘಾತಕ್ಕೆ ಒಳಗಾಗಿರುತ್ತದೆ
ಈ ಸಂದರ್ಭದಲ್ಲಿ, ಚಾಲಕ ಸಂತೋಷ್ (ಬಿಲ್ಲೆ ಸಂಖ್ಯೆ: 17790) ಹಾಗೂ ನಿರ್ವಾಹಕ ಭಾಸ್ಕರ್ (ಬಿಲ್ಲೆ ಸಂಖ್ಯೆ: 12671) ಕರ್ತವ್ಯ ನಿರ್ವಹಿಸುತ್ತಿದ್ದರು.
ಸದರಿ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕುಶವಾಗಿ ವೀಕ್ಷಿಸಿದಾಗ ಈ ಕೆಳಕಂಡ ಮಾಹಿತಿಯು ಲಭ್ಯವಾಗಿರುತ್ತದೆ.
ಬಸ್ನ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನದ ಸವಾರರು (ಮೂರು ಜನ ಸವಾರರು ಒಂದೇ ಸ್ಕೂಟರಿನಲ್ಲಿ ಚಲಿಸುತ್ತಿದ್ದು, ಮಧ್ಯದಲ್ಲಿ 11 ವರ್ಷದ ಬಾಲಕ ಕುಳಿತಿದ್ದನು) ಬಸ್ಸಿನ ಎಡ ಭಾಗದಲ್ಲಿ ಓವರ್ ಟೇಕ್ ಮಾಡಲು ಹೋದಾಗ ಮುಂದೆ ಇದ್ದ ಟೂ ವೀಲರ್ ಗಮನಿಸಿ ಬ್ರೇಕ್ ಹಿಡಿದು ಸ್ಕಿಡ್ ಆಗಿ ಬಸ್ಸಿನ ಎಡಬಾಗದ ಹಿಂದಿನ ಚಕ್ರಕ್ಕೆ ಸ್ವತಹ ತಾವೇ ಕೆಳಗೆ ಬಿದ್ದಿರುತ್ತಾರೆ. ಬಸ್ ಎಡಬಾಗದ ಹಿಂಬದಿಯ ಚಕ್ರಕ್ಕೆ ಬಾಲಕ ಸಿಲುಕಿ ತೀವ್ರ ಗಾಯಗೊಂಡಿರುತ್ತಾರೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿ, ಚಿಕಿತ್ಸೆ ಫಲಕಾರಿಯಾಗದೆ 11 ವರ್ಷದ ಬಾಲಕ ಮೃತಪಟ್ಟಿದ್ದಾರೆ. ಸದರಿ ಘಟನೆಯಲ್ಲಿ ಸಂಸ್ಥೆಯ ಚಾಲಕರ ತಪ್ಪು ಕಂಡು ಬಂದಿರುವುದಿಲ್ಲ ಎಂಬುದಾಗಿ ತಿಳಿಸಿದೆ.
ವಾಹನವನ್ನು ಪ್ರಸ್ತುತ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಇರುತ್ತದೆ. ಈ ಘಟನೆಯ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಉತ್ತರ ವಲಯದ ವಿಭಾಗ ನಿಯಂತ್ರಣ ಅಧಿಕಾರಿಗಳು, ಹಾಗೂ ಅಪಘಾತ ಶಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಈ ದುರ್ಘಟನೆಯ ಕುರಿತು ಬೆ.ಮ.ಸಾ.ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಅಪಘಾತ ನಿಯಂತ್ರಣಕ್ಕೆ ಬೆ.ಮ.ಸಾ.ಸಂಸ್ಥೆಯು ಕೈಗೊಂಡಿರುವ ಕ್ರಮಗಳು
✓ಪ್ರತಿದಿನ ಚಾಲಕ ನಿರ್ವಾಹಕರ ಕರ್ತವ್ಯದ ಪ್ರಾರಂಭದ ವೇಳೆಯಲ್ಲಿಯೇ ಸಂಬಂಧಪಟ್ಟ ಘಟಕದ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲಕ ನಿರ್ವಾಹಕರಿಗೆ ಸುರಕ್ಷತಾ ಚಾಲನೆ ಹಾಗೂ ಅಪಘಾತದಿಂದ ಆಗುವ ದುಷ್ಪರಿಣಾಮಗಳು ಬಗ್ಗೆ ವಿವರವಾಗಿ ಮನದಟ್ಟು ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.
✓ಚಾಲಕರಿಗೆ ನಿಯಮಿತವಾಗಿ ರೆಸಿಡೆನ್ಶಿಯಲ್ ತರಬೇತಿ ಶಿಬಿರಗಳು ನಡೆಸಲಾಗುತ್ತಿದೆ.
✓ಅಪಘಾತ ಪ್ರವೃತ್ತಿಯಲ್ಲಿರುವ ಸಿಬ್ಬಂದಿಗಳಿಗೆ ವೈಯಕ್ತಿಕ ಕೌನ್ಸೆಲಿಂಗ್ ನೀಡಲಾಗುತ್ತಿದೆ.
✓ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
✓ನಿಯಮ ಉಲ್ಲಂಘನೆ ಮಾಡಿದ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
✓ಅಪಘಾತಗಳ ಮೂಲ ಕಾರಣಗಳನ್ನು ತಿಳಿದುಕೊಳ್ಳಲು ವಿಶ್ಲೇಷಣೆ ಮತ್ತು ತನಿಖೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಬೆ.ಮ.ಸಾ.ಸಂಸ್ಥೆಯು ಸಂಸ್ಥೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷಿತ ಮತ್ತು ಅಪಘಾತ ರಹಿತ ಸೇವೆ ಒದಗಿಸುವತ್ತ ಹೆಚ್ಚಿನ ಒತ್ತು ನೀಡಲಿದೆ.