ಹುಬ್ಬಳ್ಳಿ : ಹುಬ್ಬಳ್ಳಿಯ ನಂದಾಗೋಕುಲ ಬಡಾವಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾಗಿದ್ದು, ಕಳೆದ 3 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.
ಹುಬ್ಬಳ್ಳಿಯ ನಂದಾಗೋಕುಲ ಬಡಾವಣೆಯಲ್ಲಿ ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜಯಶ್ರೀ (31) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಯಶ್ರೀ ಮೇ. 21 ರಂದು ಶಿವಾನಂದ್ ಜೊತೆಗೆ ಮದುವೆಯಾಗಿತ್ತು. ಶಿವಾನಂದ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಜಯಶ್ರೀ ಪೋಷಕರು ಗಂಭೀರಆರೋಪ ಮಾಡಿದ್ದಾರೆ.
ಮದುವೆ ಬಳಿಕ ಶಿವಾನಂದ ಪ್ರೀತಿಸಿದ್ದ ಯುವತಿ, ಜಯಶ್ರೀಗೆ ತಮ್ಮ ಪ್ರೇಮದ ವಿಚಾರ ಹೇಳಿದ್ದಳಂತೆ. ಅಲ್ಲದೇ 13 ವರ್ಷದ ಪ್ರೀತಿಯನ್ನು ಮುಚ್ಚಿಟ್ಟು ನಿನ್ನನ್ನು ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಳಂತೆ. ಇದರಿಂದ ಜಯಶ್ರೀ ಹಾಗೂ ಶಿವಾನಂದ ದಂಪತಿ ನಡುವೆ ಜಗಲವಾಗಿದೆ. ಆದಾಗ್ಯೂ ಪತಿ ಜೊತೆಯೇ ಇರಲು ಜಯಶ್ರೀ ಮುಂದಾಗಿದ್ದಳು.
ಇದೇ ವಿಚಾರವಾಗಿ ನಿನ್ನೆ ರಾತ್ರಿ ಕೂಡ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಈಗ ಜಯಶ್ರೀ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮದುವೆ ಬಳಿಕ ಶಿವಾನಂದ ಜಯಶ್ರಿಗೆ ಮಾನಸಿಕವಾಗಿ ಕಿರುಕುಳ, ಹಿಂಸೆ ನೀಡುತ್ತಿದ್ದ. ಈಗ ತಮ್ಮ ಮಗಳನ್ನು ಕೊಲೆಗೈದು ನೇಣು ಬಿಗಿದಿದ್ದಾಗಿ ಜಯಶ್ರೀ ಪೋಷಕರು ದೂರಿದ್ದಾರೆ. ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.