ಮೈಸೂರು: ಇಂದು ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ 79ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು.
ಇಂದು ಮೈಸೂರು ರೈಲ್ವೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಸಮಾರಂಭ ನಡೆಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ಎಂ) ಮುದಿತ್ ಮಿತ್ತಲ್ ಅವರು ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ತಮ್ಮ ಭಾಷಣದಲ್ಲಿ, ಮುದಿತ್ ಮಿತ್ತಲ್ ಅವರು ಕಳೆದ ಆರು-ಏಳು ತಿಂಗಳಲ್ಲಿ ಮೈಸೂರು ವಿಭಾಗ ಸಾಧಿಸಿರುವ ಪ್ರಮುಖ ಕಾರ್ಯಗಳನ್ನು ಉಲ್ಲೇಖಿಸಿದರು. ಅವುಗಳಲ್ಲಿ ಅರಸೀಕೆರೆ–ಹೊನ್ನಾವಳ್ಳಿ ನಡುವೆ 10 ದಿನಗಳ ಟ್ರಾಫಿಕ್ ಸಸ್ಪೆನ್ಶನ್ ಲೈನ್ (ಟಿಎಸ್ಎಲ್) ಮೂಲಕ ಕಾಲುವೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇದು ಮೈಸೂರು ವಿಭಾಗಕ್ಕೆ ಮೊದಲ ಬಾರಿಗೆ ನಡೆದಿದೆ, ದಾವಣಗೆರೆ, ಬಾಲೇನಹಳ್ಳಿ ಮತ್ತು ಚಿಕ್ಕಜಜೂರಿನಲ್ಲಿ ಒಟ್ಟು 160 ಕಿಲೋವಾಟ್ ಸಾಮರ್ಥ್ಯದ ಸೌರ ಪ್ಯಾನೆಲ್ಗಳನ್ನು ಅಳವಡಿಸುವ ಮೂಲಕ ₹29 ಲಕ್ಷ ಉಳಿತಾಯ ಸಾಧಿಸಿರುವುದು ಹಾಗೂ ಸಕಲೇಶಪುರ–ದೋಣಿಗಲ್ ಮತ್ತು ಶಿರಿಬಾಗಿಲು–ಸುಬ್ರಹ್ಮಣ್ಯ ರೋಡ್ ವಿಭಾಗಗಳಲ್ಲಿ ವಿದ್ಯುತ್ಕರಣ ಕಾಮಗಾರಿ ಪೂರ್ಣಗೊಳಿಸಿರುವುದು ಸೇರಿದೆ. ಚಿಕ್ಕಜಜೂರು–ರಾಯದುರ್ಗ ವಿಭಾಗವು ಮೈಸೂರು ವಿಭಾಗದ ಮೊದಲ 25 ಟನ್ ಆಕ್ಸಲ್ ಲೋಡ್ ಮಾರ್ಗವಾಗಲಿದೆ. ಸುರಕ್ಷತೆ ಮತ್ತು ಭದ್ರತಾ ಕ್ಷೇತ್ರದಲ್ಲಿ, ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) 69 ಮಕ್ಕಳನ್ನು ರಕ್ಷಿಸಿದೆ ಎಂದರು.
ಡಿಆರ್ಎಂ ಅವರು ಪ್ರಯಾಣಿಕ ಸೇವೆಗಳು ಮತ್ತು ಕಾರ್ಯಾಚರಣಾ ಸುಧಾರಣೆಗಳ ಬಗ್ಗೆ ವಿವರಿಸಿ, ಪಾರ್ಕಿಂಗ್ಗಾಗಿ ಇ-ಹರಾಜು, ಊಟೋಪಚಾರ ಮತ್ತು ಪೇ-ಆಂಡ್-ಯೂಸ್ ಶೌಚಾಲಯ ಒಪ್ಪಂದಗಳು ಹಾಗೂ ಪಾರ್ಸೆಲ್ ನಿರ್ವಹಣಾ ವ್ಯವಸ್ಥೆಗಳನ್ನು ಪರಿಚಯಿಸಿರುವುದಾಗಿ ಹೇಳಿದರು. ಪ್ರಯಾಣಿಕರ ಅನುಕೂಲತೆಗಾಗಿ “ಮಾರ್ಗದರ್ಶಕ” ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಮಾರ್ಗದರ್ಶನ ಮೊಬೈಲ್ ಆಪ್ ಅನ್ನು ಪ್ರಾರಂಭಿಸಿದ್ದು, 11 ಹೊಸ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (ATVM) ಅಳವಡಿಸಲಾಗಿದೆ. 2,600 ಮೆಟ್ರಿಕ್ ಟನ್ ತ್ಯಾಜ್ಯವನ್ನು ಮಾರಾಟ ಮಾಡುವ ಮೂಲಕ ₹16 ಕೋಟಿ ಆದಾಯ ಗಳಿಸಲಾಗಿದೆ. ಪರಿಸರ ಸಂರಕ್ಷಣೆಯ ಭಾಗವಾಗಿ ಡಿಆರ್ಎಂ ಕಚೇರಿಯನ್ನು ಪ್ಲಾಸ್ಟಿಕ್-ಮುಕ್ತ ವಲಯವನ್ನಾಗಿ ಘೋಷಿಸಲಾಗಿದೆ. ಕ್ರೀಡೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ ಮೈಸೂರು ವಿಭಾಗವು ನೈಋತ್ಯ ರೈಲ್ವೆ ಮಹಿಳಾ ಬಾಸ್ಕೆಟ್ಬಾಲ್ ತಂಡಕ್ಕೆ ಆತಿಥ್ಯ ನೀಡಿದ್ದು, ‘ಆಪರೇಶನ್ ಸಿಂದುರ’ಗೆ ಬೆಂಬಲ ನೀಡಿದೆ.
ಮಿತ್ತಲ್ ಅವರು ಮೈಸೂರು ವಿಭಾಗದ ಸಿಬ್ಬಂದಿಗಳ ನಿಷ್ಠೆ ಮತ್ತು ಏಕತೆ ಮನೋಭಾವವನ್ನು ಶ್ಲಾಘಿಸಿ, “ಸುರಕ್ಷತೆ ಪ್ರಥಮ” ಎಂಬ ಧ್ಯೇಯವಾಕ್ಯವನ್ನು ಪುನರುಚ್ಚರಿಸಿದರು ಮತ್ತು ಸ್ಥಿರತೆ, ಕಾರ್ಯಕ್ಷಮತೆ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳತ್ತ ವಿಭಾಗದ ಬದ್ಧತೆಯನ್ನು ಹೀಗೆಯೇ ಮುಂದುವರಿಸುವುದಾಗಿ ಹೇಳಿದರು. ಕಾರ್ಯಕ್ರಮವು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಮುಕ್ತಾಯಗೊಂಡಿತು, ಸ್ವಾತಂತ್ರ್ಯ, ಏಕತೆ ಮತ್ತು ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸಿತು.
ಈ ಸಮಾರಂಭದಲ್ಲಿ ಎಡಿಆರ್ ಎಂ ಶಮಾಸ್ ಹಮೀದ್, ಎಲ್ಲಾ ಶಾಖಾ ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಹಿಳಾ ಕಲ್ಯಾಣ ಸಂಘದ ಸದಸ್ಯರು ಭಾಗವಹಿಸಿದ್ದರು. ಇದು ಮೈಸೂರು ರೈಲ್ವೆ ಕುಟುಂಬದ ಏಕತೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸಿತು.