ಕಲಬುರಗಿ : ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದ್ರೆ 5 ಲಕ್ಷ ರೂ. ನಗದು ಘೋಷಣೆ ಮಾಡಿದ್ದ ಆರೋಪ ಸಂಬಂಧ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲಾಗಿದೆ.
ಇತ್ತೀಚಿಗೆ ಕೊಪ್ಪಳದಲ್ಲಿ ಹತ್ಯೆಯಾದ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಜೊತೆ ಭೇಟಿ ನೀಡಿ ಯತ್ನಾಳ್ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿರುವುದು ಮುಸ್ಲಿಂ ಪರ ಸರ್ಕಾರವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಹಿಂದ ಸರ್ಕಾರ ಎಂದೆನ್ನುತ್ತಿದೆ. ಆದರೆ ರಾಜ್ಯದಲ್ಲಿ ಅಹಿಂದ ಅಲ್ಲ, ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸಿಎಂ ಸಿದ್ದರಾಮಯ್ಯ ಸರಕಾರವನ್ನ ಅಧಿವೇಶನದಲ್ಲಿ ನಾವು ತರಾಟೆ ತೆಗೆದುಕೊಳ್ಳಲಿದ್ದೇವೆ. ಯಾರೂ ಮುಸ್ಲಿಂ ಯುವತಿಯರನ್ನು ಪ್ರೀತಿ ಮಾಡಬಾರದಾ ? ಅವರನ್ನು ಮದುವೆ ಆಗಬಾರದೆಂದು ಏಲ್ಲಿದೆ ? ಇನ್ಮುಂದೆ ನಾವು ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವೆವು ಎನ್ನುವ ಅಭಿಯಾನ ಆರಂಭಿಸಲಿದ್ದೇವೆ ಎಂದು ಹೇಳೀಕೆ ನೀಡಿದ್ದರು.