ರಸ್ತೆ ಅಪಘಾತಗಳು ಸಂಭವಿಸಬಾರದು, ಇದಕ್ಕಾಗಿ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಕಸ್ಮಿಕ ಅಪಘಾತಗಳಿಂದ ಜೀವಹಾನಿ ಜೊತೆಗೆ ಜೀವನಪೂರ್ತಿ ಗಾಯಾಳುಗಳಾಗಿ ಕಾಲ ಕಳೆಯಬೇಕಾಗುತ್ತದೆ. ಆದರೆ ಕ್ಷಣ ಮಾತ್ರದ ಅಪಘಾತಗಳನ್ನು ತಪ್ಪಿಸಲು ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ.
ಅನೇಕ ರಸ್ತೆ ಅಪಘಾತಗಳು ಕುಟುಂಬದ ಆಸರೆಯೇ ಇಲ್ಲದಂತಹ ಸ್ಥಿತಿಗಳಿಗೆ ತಳ್ಳುತ್ತವೆ. ಎಲ್ಲರ ಜೀವಗಳು ಅಮೂಲ್ಯವಾದದ್ದು ಬೇರೊಬ್ಬರ ಜೀವ ಉಳಿಸಲು ವಾಹನ ಸಾವರ ಸೇರಿದಂತೆ ಪಾದಚಾರಿಗಳು ಸಹ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ದಾವಣಗೆರೆ ನಗರದ ಅನೇಕ ವೃತ್ತ, ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸಿಗ್ನಲ್ ಜಂಪ್ ಮಾಡುವುದು, ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸುವುದು ಸರ್ವೆ ಸಾಮಾನ್ಯವಾಗಿದೆ. ಜೊತೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ದ್ವಿ ಚಕ್ರದಲ್ಲಿ ನೊಂದಣಿ ಸಂಖ್ಯೆಯ ಫಲಕವನ್ನು ತೆಗೆದಿಟ್ಟು ವಾಹನ ಚಾಲನೆ ಮಾಡುವುದು, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ಇರುವುದನ್ನು ಗಮನಿಸಲಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳು ವಾಹನವನ್ನು ಚಾಲನೆ ಮಾಡುವುದು ಕಂಡು ಬಂದಿರುತ್ತದೆ.
ಅಪ್ರಾಪ್ತರಿಂದ ವಾಹನ ಚಾಲನೆ; ದಾವಣಗೆರೆ ನಗರದಲ್ಲಿ ಆಗಸ್ಟ್ 8 ರಂದು ವಿವಿಧ ರಸ್ತೆಗಳಲ್ಲಿ ಅಪ್ರಾಪ್ತರು ತ್ರಿಬಲ್ ರೈಡಿಂಗ್ನನಲ್ಲಿ ವಾಹನ ಚಾಲನೆ ಮಾಡುವುದನ್ನು ಜಿಲ್ಲಾಧಿಕಾರಿಗಳು ಗಮನಿಸಿ ಸ್ಥಳದಲ್ಲಿಯೇ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲು ಸಂಚಾರಿ ಪೊಲೀಸ್ ಠಾಣೆಗೆ ಸೂಚನೆ ನೀಡಿದರು. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿದಲ್ಲಿ ವಾಹನ ನೀಡಿದ ಮಾಲಿಕರಿಗೆ ರೂ.25000 ಗಳ ವರೆಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬಹುದು. ವಾಹನ ಮಾಲಿಕರೆ ತಮ್ಮ ಮಕ್ಕಳಿಗೆ ವಾಹನ ನೀಡುವುದಕ್ಕಿಂತ ಮೊದಲು ಯೋಚಿಸಿ.
ವಿರುದ್ದ ದಿಕ್ಕಿನಲ್ಲಿನ ಸಾಗುವ ಸವಾರರು; ವಿವಿಧ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸಲಾಗಿದ್ದರೂ ಕೆಲವರು ಸಿಗ್ನಲ್ ಜಂಪ್ ಮಾಡುವುದು ಮತ್ತು ಸಿಗ್ನಲ್ನಗಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಆದರೆ ಸಿಗ್ನಲ್ ಬಿದ್ದತಕ್ಷಣ ಸಂಚರಿಸುವ ವಾಹನ ಸವಾರರು ಹೆಚ್ಚಿನ ವೇಗದಲ್ಲಿಯೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಸಂಚರಿಸಿದಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಬರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿದಲ್ಲಿ ಅಂತಹ ಸವಾರರಿಗೆ ಭಾರಿ ದಂಡ ಹಾಕಲಾಗುತ್ತದೆ ಎಂದು ಅನೇಕ ವಾಹನ ಸವಾರರನ್ನು ನಿಲ್ಲಿಸಿ ಜಿಲ್ಲಾಧಿಕಾರಿ ಅವರು ಶುಕ್ರವಾರ ವಿವಿಧ ವೃತ್ತಗಳಲ್ಲಿ ಮನವರಿಕೆ ಮಾಡಿಕೊಟ್ಟರು.