ಬೆಂಗಳೂರು : ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಕಂಗಲಾಗಿದ್ದು, ಹಲವು ಕಡೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಸಿಗದೇ ಇರುವುದರಿಂದ ಕೃಷಿ ಕೆಲಸ ಬಿಟ್ಟು ಅಂಗಡಿಗಳಿಗೆ ಗೊಬ್ಬರ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ.
ಕೊಪ್ಪಳದ ಗಂಜ್ ವೃತ್ತದಲ್ಲಿ ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಪ್ಪ ಬಡಿಗಿ ಎಂಬ ರೈತ ನೆಲದಲ್ಲಿದ್ದ ಮಣ್ಣು ತಿಂದು ಆಕ್ರೋಶ ಹೊರ ಹಾಕಿದ್ದಾರೆ. ಬೆಳೆ ಬೆಳೆಯಲು ಗೊಬ್ಬರ ಸಿಗುತ್ತಿಲ್ಲ, ನಾವೇನು ಹೊಟ್ಟೆಗೆ ಮಣ್ಣು ತಿನ್ನೋದಾ ಎಂದು ಕಿಡಿಕಾರಿದ್ದಾರೆ. ಗೊಬ್ಬರ ಕೊಳ್ಳಲು ಅಂಗಡಿಗೆ ಬಂದರೆ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದಾರೆ, ನಾವೇನು ಮಾಡೋದು..ಹೊಲಕ್ಕೆ ಏನು ಹಾಕೋದು ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೀಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಕಾದು ಗೊಬ್ಬರ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದಲೇ ರೈತರು ಸರದಿಯಲ್ಲಿ ನಿಂತಿದ್ದರು.
ಯೂರಿಯಾ ಗೊಬ್ಬರ ಕೊರತೆ : ಜೆಪಿ ನಡ್ಡಾಗೆ CM ಸಿದ್ದರಾಮಯ್ಯ ಪತ್ರ
ಕರ್ನಾಟಕದ ರೈತರು ತೀವ್ರ ಯೂರಿಯಾ ಕೊರತೆಯನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ ನಿಂದ ಜುಲೈ ವರೆಗೆ ನಮ್ಮ ಬೇಡಿಕೆಯಾದ 6.8 ಲಕ್ಷ ಮೆಟ್ರಿಕ್ ಟನ್ ಗೆ ಬದಲಾಗಿ, ಕೇಂದ್ರ ಸರ್ಕಾರ ಕೇವಲ 5.1 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಆರಂಭಿಕ ಮಾನ್ಸೂನ್ ಮತ್ತು ವಿಸ್ತೃತ ಬೆಳೆ ವ್ಯಾಪ್ತಿಯು ಬೇಡಿಕೆಯನ್ನು ಹೆಚ್ಚಿಸಿದೆ, ರೈತರಲ್ಲಿ ಅಶಾಂತಿ ಸೃಷ್ಟಿಸಿದೆ. ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡಲು 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯನ್ನು ತಕ್ಷಣವೇ ತ್ವರಿತಗೊಳಿಸುವಂತೆ ಜೆಪಿ ನಡ್ಡಾಗೆ ಸಿಎಂ ಪತ್ರ ಬರೆದಿದ್ದಾರೆ.
Karnataka's farmers are facing a severe shortage of Urea.
Against our requirement of 6.8 lakh MT from April to July, only 5.1 lakh MT has been supplied by the Union Govt. Early monsoons and expanded crop coverage have spiked demand, creating unrest among farmers.
I have urged… pic.twitter.com/7HqpOIfFM9
— Siddaramaiah (@siddaramaiah) July 25, 2025
ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಬಿತ್ತನೆಯಿಂದ `ರಸಗೊಬ್ಬರ’ ಕೊರತೆ : ಸಚಿವ ಚಲುವರಾಯಸ್ವಾಮಿ
ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹಲವೆಡೆ ರಸಗೊಬ್ಬರ ಕೊರತೆ ಉಂಟಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅನುಮತಿ ಪಡೆದು ಜಿಲ್ಲಾ ಸಚಿವರಿಗೆ ಮಾಹಿತಿ ನೀಡಿದ್ದೇವೆ. ರಸಗೊಬ್ಬರ ಕುರಿತು ಡಿಸಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ರಸಗೊಬ್ಬರ ಕೊರತೆ ಉಂಟಾಗಿದೆ.
ಕೇಂದ್ರದಿಂದ 87 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿ ಇದೆ. ಕಳೆದ ವರ್ಷ ಹೆಚ್ಚುವರಿಯಾಗಿ 3 ಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದೆ. ಯೂರಿಯಾ, ನ್ಯಾನೋ ಯೂರಿಯಾದಲ್ಲಿ ಯಾವುದೇ ವ್ಯತ್ಯಸವಿಲ್ಲ. ರೈತರು ಮುಂದೆ ಸಿಗಲ್ಲ ಎಂಬ ಕಾರಣಕ್ಕೆ ಸ್ಟಾಕ್ ಮಾಡಿಕೊಳ್ಳಬಾರದು ಎಂದರು. ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೀಗಾಗಿ ಗೊಬ್ಬರ ಸ್ಪಲ್ಪ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.