ಕನಕಪುರ : “ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಕ್ಷೇತ್ರದ 250 ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆ ರೂಪಿಸಲಾಗುತ್ತಿದೆ. ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ನೀರಾವರಿ ಸಚಿವನಾದ ನಾನು ನನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಶಿಂಷಾದಿಂದ ಸಾತನೂರು ಹೋಬಳಿಗೆ ನೀರು ತರಲಾಗುತ್ತಿದೆ. ಅರ್ಕಾವತಿಯಿಂದ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಹೊಸದುರ್ಗ ಭಾಗದ ಕೆರೆಗಳನ್ನು ಕಾವೇರಿ ನದಿ ನೀರಿನಿಂದ ತುಂಬಿಸಲಾಗುವುದು” ಎಂದು ಹೇಳಿದರು.
“ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುವುದು. ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ಕನಕಪುರದಲ್ಲಿ ಇನ್ಫೋಸಿಸ್ ಸಹಾಯದಲ್ಲಿ ತಾಯಿ ಮಗು ಆಸ್ಪತ್ರೆ ತೆರೆಯಲಾಗಿದೆ. ಇಂತಹ ಸರ್ಕಾರಿ ಆಸ್ಪತ್ರೆ ಬೇರೆ ಎಲ್ಲಾದರೂ ಇದೆಯೇ? ನಾವು ಮಾಡುತ್ತಿರುವ ಕೆಲಸ ದೇಶಕ್ಕೆ ಮಾದರಿ. ನಾವು ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪಾರ್ಕ್ ಮಾಡಿದೆವು. ನಂತರ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವುಗಳು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ” ಎಂದು ತಿಳಿಸಿದರು.
“ಆನೆಗಳ ಹಾವಳಿ ತಡೆಯಲು ಸುಮಾರು 50 ಕಿಮೀ ಉದ್ದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮಿಕ್ಕ 50 ಕಿಮೀ ಅನ್ನುಶೀಘ್ರವೇ ಪೂರ್ಣಗೊಳಿಸಿ ರೈತರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಇಬ್ಬರು ರೈತರಂತೆ ಟ್ರಾನ್ಸ್ ಫಾರ್ಮರ್ ನೀಡಿ ವಿದ್ಯುತ್ ಕ್ರಾಂತಿ ಮಾಡಿದ್ದೇವೆ. 25 ಸಾವಿರ ರೈತರಿಗೆ ಇದರಿಂದ ಉಪಯೋಗವಾಗಿದೆ. ಪಕ್ಕದ ಯಾವುದೇ ಕ್ಷೇತ್ರದಲ್ಲಿಯೂ ಈ ಸೌಲಭ್ಯವಿಲ್ಲ. ಹುಣಸನಹಳ್ಳಿ ಸೇರಿದಂತೆ ದೊಡ್ಡಾಲಹಳ್ಳಿಯಲ್ಲಿ ಸೋಲರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಗಲು ಹೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡಲಾಗುವುದು” ಎಂದು ಹೇಳಿದರು.
“ಕ್ಷೇತ್ರದ 60- 70 ಸಾವಿರ ಜನ ಬೆಂಗಳೂರನ್ನು ವಿದ್ಯಾಭ್ಯಾಸ, ಕೆಲಸದ ನಿಮಿತ್ತ ನಗರ ಪ್ರದೇಶ ಸೇರಿದ್ದಾರೆ. ನನ್ನನ್ನು ನಮ್ಮ ತಂದೆ ಬೆಂಗಳೂರು ಸೇರಿಸಿದ್ದರು. ಆದರೆ ನಮ್ಮ ಜನರು ಪಾನಿಪುರಿ, ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಊರಿಗೆ ಒಂದೆರಡು ಜನ ಉದ್ಧಾರವಾಗಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಉತ್ತಮ ಜೀವನ ನೀಡಬೇಕು ಎಂದು ನಾನು ಪಣತೊಟ್ಟಿದ್ದೇನೆ. ಅದಕ್ಕೆ ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಕೋಡಿಹಳ್ಳಿಯಲ್ಲಿ 10 ಎಕರೆ, ದೊಡ್ಡ ಆಲಹಳ್ಳಿಯಲ್ಲಿ ಶಾಲೆಗಾಗಿ ನಮ್ಮ ಸ್ವಂತ ಭೂಮಿಯನ್ನು ನೀಡಿದ್ದೇನೆ” ಎಂದರು.
“ಸುರೇಶ್ ವಿರುದ್ಧ ದೇವೇಗೌಡರು ಅವರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ಆನಂತರ ಕುಮಾರಸ್ವಾಮಿ ಮಗನ ವಿರುದ್ಧ ಸುರೇಶ್ ಅವರನ್ನು ನಿಲ್ಲಿಸಬೇಕು ಎಂದು ಒತ್ತಡ ತರಲಾಯಿತು. ಆನಂತರ ಬೆಳವಣಿಗೆಯಲ್ಲಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದರು. ಅವರು ಜನರ ಆಶೀರ್ವಾದಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 4 ಜನ ಶಾಸಕರು ವಿಧಾನಸಭೆಯಲ್ಲಿದ್ದಾರೆ” ಎಂದರು.
“ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನ ಮೋಸ ಮಾಡಿಲ್ಲ. ನಮಗೆ ಬೆಂಗಳೂರಿನಲ್ಲಿ ಮೋಸ ಆಗಿದೆ. ನಮ್ಮ ಗ್ರಾಮೀಣ ಭಾಗದಲ್ಲಿ ನಮಗೆ ಮೋಸ ಆಗಿಲ್ಲ. ಬೇರೆ ಕಡೆ ವಾಲಿರುವವರಿಗೆ ಬುದ್ಧಿ ಹೇಳಿ. ಚುನಾವಣೆ ಸಮಯದಲ್ಲಿ ಅನೇಕರು ಬಂದು ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ನೀವು ಯಾವುದಕ್ಕೂ ಮಣಿಯಬಾರದು. ನಿಮ್ಮ ಹೆಣ ಹಾಗೂ ಪಲ್ಲಕ್ಕಿ ಹೊರುವವನು ನಾನು. ನನ್ನ ಹೆಣ, ಪಲ್ಲಕ್ಕಿ ಹೊರುವವರು ನೀವು. ನಿಮ್ಮ ಹಾಗೂ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ” ಎಂದು ಹೇಳಿದರು.
“ಚನ್ನಪಟ್ಟಣದಲ್ಲಿ ಒಂಬತ್ತು ಜಿಲ್ಲಾ ಪಂಚಾಯತಿಗಳಿಗೆ ತೆರಳಿ ಜನಸಂಪರ್ಕ ಸಭೆ ಮೂಲಕ ಜನರ ಬಳಿಗೆ ಹೋಗಿ ನೂತನ ಪ್ರಯೋಗ ಮಾಡಲಾಯಿತು. ಸುರೇಶ್ ಅವರನ್ನು ಸೋಲಿಸಲು ಅವರು ಹೇಗೆ ತಂತ್ರ ಮಾಡಿದರೋ ಅದೇ ರೀತಿ ನಾವು ಸಹ ತಂತ್ರ ನಡೆಸಲಾಯಿತು. ಅಲ್ಲಿನ ಜನರಿಂದ 22 ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು. ಸುಮಾರು 500 ಕೋಟಿಗೂ ಹೆಚ್ಚು ಅನುದಾನ ನೀಡಲಾಯಿತು. 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಯಿತು. ನೂರಾರು ಎಕರೆ ಜಮೀನು ಗುರುತಿಸಿ ಬಡವರಿಗೆ ನಿವೇಶನ ಹಂಚಲಾಯಿತು” ಎಂದರು.
ನಮ್ಮ ಗುರುತು ಉಳಿಸಿಕೊಳ್ಳಲು ಜಿಲ್ಲೆಗೆ ಮರುನಾಮಕರಣ
“ನಾನು ನನ್ನ ಹುಟ್ಟಿದ ಊರು, ತಂದೆಯ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಅದೇ ರೀತಿ ಕುಮಾರಸ್ವಾಮಿ ಅವರು ರಾಮನಗರ ಕುಮಾರಸ್ವಾಮಿ ಎಂದು ಬದಲಾವಣೆ ಮಾಡಿಕೊಳ್ಳ ಸಾಧ್ಯವೇ? ಕುಮಾರಸ್ವಾಮಿ ನಮ್ಮ ಹೆಸರು ಬದಲಾವಣೆ ಮಾಡಿದ್ದರು. ನಾನು ಅದನ್ನು ಸರಿ ಮಾಡಿದ್ದೇನೆ. ಈ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೋದಾಗ ಬಿಡುವುದಿಲ್ಲ ಎಂದರು. ಶಿವಕುಮಾರ್ ಸ್ವಾಮೀಜಿ ಅವರು, ಕೆಂಗಲ್ ಹನುಮಂತಯ್ಯ ಅವರು ಈ ನೆಲದವರು. ಅವರು ರಾಜಕಾರಣ ಮಾಡಲು ಅಲ್ಲಿಂದ ಇಲ್ಲಿಗೆ ಬಂದು ಮಾಡುತ್ತಿದ್ದಾರೆ. ರಾಮಕೃಷ್ಣ ಹೆಗಡೆಯವರು ಕನಕಪುರದಲ್ಲಿಯೇ ಚುನಾವಣೆಗೆ ನಿಂತಿದ್ದರು” ಎಂದರು.
“ನಮಗೆ ಪೆನ್ನು ಪೇಪರ್ ಸಿಕ್ಕ ಕಾರಣಕ್ಕೆ ಯಾವುದೇ ಕಾರಣಕ್ಕು ನಮ್ಮ ಮೂಲ ಹೆಸರನ್ನು ಬಿಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದೇವೆ. ಮಾಡಲು ಬಿಡುವುದಿಲ್ಲ ಎಂದರು. ನಾನು ಮಾಡಿಯೇ ತೀರುತ್ತೇನೆ ಎಂದು ಮರುನಾಮಕರಣ ಮಾಡಿದ್ದೇನೆ. ನಾನು ನಿಮ್ಮ ಜೇಬಿಗೆ ಹಣ ಹಾಕಲು ಆಗದಿದ್ದರು ನಿಮ್ಮ ಆಸ್ತಿ ಮೌಲ್ಯ ಹೆಚ್ಚಿಸಿದ್ದೇವೆ” ಎಂದರು.
“ನಾನು ಆರಂಭದಲ್ಲಿ ಇಲ್ಲಿನ ಶಾಸಕನಾದಾಗ ಒಮ್ಮೆ ಕಾರ್ಖಾನೆ ಸ್ಥಾಪನೆಗೆ ಒಬ್ಬರನ್ನು ಕರೆದುಕೊಂಡು ಬಂದೆ ಅವರು ಇಲ್ಲಿನ ರಸ್ತೆ ನೋಡಿ ಬರುವುದಿಲ್ಲ ಎಂದರು. ಅಂದೇ ತೀರ್ಮಾನ ಮಾಡಿ ರಸ್ತೆ ಅಗಲೀಕರಣ ಮಾಡಲಾಯಿತು. ಇದರಿಂದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಕೋಡಿಹಳ್ಳಿ, ಸಾತನೂರು ಸೇರಿದಂತೆ ಅನೇಕ ಕಡೆ ರಸ್ತೆ ಅಗಲೀಕರಣ ಮಾಡಿದ್ದೇನೆ” ಎಂದರು.
ಡಿಸಿಎಂ ಆಗಿ ಅಲ್ಲ, ನಿಮ್ಮ ಮನೆ ಮಗನಾಗಿ ಬಂದಿರುವೆ
“ನಾನು ಯಾವುದೇ ಅಧಿಕಾರ ಹೊತ್ತಕೊಂಡು ಇಲ್ಲಿಗೆ ಬಂದಿಲ್ಲ. ನಾನು ನಿಮ್ಮೆಲ್ಲರ ಮನೆಮಗನಾಗಿ ಇಲ್ಲಿಗೆ ಬಂದಿದ್ದೇನೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದ ಕಾರಣಕ್ಕೆ ಮುಂದಿನ ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿಮಗೆ ಮಾತುಕೊಟ್ಟ ಕಾರಣಕ್ಕೆ ನಿಮ್ಮ ಸಮಸ್ಯೆಗಳನ್ನು ಆಲಿಸಿಕೊಳ್ಳಲು ಬಂದಿದ್ದೇನೆ” ಎಂದರು.
“ಇ ಖಾತಾ ಮಾಡಿಸಲು ನಾವು ತೀರ್ಮಾನ ಮಾಡಿದ್ದೇವೆ. ನೀವು ಯಾರಿಗೂ ಲಂಚ ನೀಡದೇ ಖಾತಾ ಪಡೆಯಬೇಕು. ಅದಕ್ಕಾಗಿ ಇ ಖಾತಾ ತಂದಿದ್ದೇವೆ. ಇದು ದೇಶಕ್ಕೆ ಮಾದರಿ ಕೆಲಸ. ಈಗಾಗಲೇ ಪೋಡಿ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದೇವೆ. 175 ಉಪ ಗ್ರಾಮ ಮಾಡುತ್ತಿದ್ದೇವೆ. ಇಲ್ಲಿ ಸಾಕಷ್ಟು ಜನರಿಗೆ ಬಗರ್ ಹುಕುಂ ಜಮೀನು ನೀಡಲಾಗಿದೆ. ಇನ್ನಷ್ಟು ಜನರಿಗೆ ನೀಡಲು ಸುರೇಶ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಭೂಮಿ ತಂತ್ರಾಂಶದ ಮೂಲಕ 5 ರೂಪಾಯಿಗೆ ಪಹಣಿ ನೀಡಲಾಯಿತು. ಈಗ ಉಚಿತವಾಗಿ ಮನೆ ಬಾಗಿಲಿಗೆ ದಾಖಲೆಗಳನ್ನು ತಪುಪಿಸುವ ಕೆಲಸ ಮಾಡಲಾಗುತ್ತಿದೆ. ಜಮೀನು ಮಂಜೂರು ಮಾಡಿ ನೀಡಲಾಗಿದೆ. ಮರುಸರ್ವೆ ಸಹ ಇಡೀ ರಾಜ್ಯದಲ್ಲಿ ಉಯ್ಯಂಬಳ್ಳಿ ಹೋಬಳಿಯಲ್ಲಿಯೇ ಮೊದಲು ಮಾಡಲಾಗುತ್ತಿದೆ. ಸುಮಾರು 1,300 ಜನರಿಗೆ ನೂತನ ಪೋಡಿ ನೀಡಲಾಗಿದೆ. ದಾಖಲೆಗಳಲ್ಲಿ ಇಲ್ಲದ 175 ಉಪಗ್ರಮಗಳನ್ನು ಮಾಡಲಾಗಿದೆ. ನಮ್ಮ ಆಸ್ತಿ ನಮ್ಮ ಹಕ್ಕು ಎಂದು ನಿಮ್ಮ ಆಸ್ತಿ ರಕ್ಷಣೆ ಮಾಡಲಾಗಿದೆ” ಎಂದರು.
“ಇಕ್ಬಾಲ್ ಹುಸೇನ್ ಶಾಸಕರಾದ ಬಳಿಕ ರಾಮನಗರದಲ್ಲಿ 1 ಸಾವಿರ ಕೋಟಿ ಅನುದಾನ ನೀಡಿ ರಾಮನಗರ ಪಟ್ಟಣ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ನಮ್ಮ ಯೋಜನೆಗಳನ್ನು ನೋಡಿ ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಟೀಕೆ ಮಾಡುತ್ತಿರುವ ಬಿಜೆಪಿ ಹಾಗೂ ದಳದವರಿಗೆ ಗ್ಯಾರಂಟಿ ಬಿಡಲು ಹೇಳಿ” ಎಂದು ಸವಾಲು ಹಾಕಿದರು.
“ಯಾವುದೇ ಪುರುಷರ ಹೆಸರಿಗೆ ನಿವೇಶನ ಮಂಜೂರು ಮಾಡದೆ ಮಹಿಳೆಯರ ಹೆಸರಿಗೆ ನೋಂದಣಿ ಮಾಡಬೇಕು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಸೂಚನೆ ನೀಡಿದರು. ಗಂಡಸರು ಮಾರಿಕೊಂಡು ಹೋಗಿಬಿಡುತ್ತಾರೆ. ಇಲ್ಲದಿದ್ದರೆ ಜಂಟಿಖಾತೆ ಮಾಡಿ” ಎಂದರು.
“ಗ್ರೇಟರ್ ಬೆಂಗಳೂರು ಮಾಡಲಾಗುತ್ತಿದೆ. ಇಂತಹ ಬದಲಾವಣೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನೀವು ಶಕ್ತಿಕೊಟ್ಟ ಶಕ್ತಿಯಿಂದಾಗಿ ನಾವು ಜನರ ಜೀವನ ಬದಲಾವಣೆ ಮಾಡುತ್ತಿದ್ದೇವೆ. ತನ್ನ ಜೀವನದಲ್ಲಿ ಒಂದೇ ಒಂದು ರೂಪಾಯಿ ಪಡೆಯದೇ ಕೆಲಸ ಮಾಡುವ ಅಧಿಕಾರಿಗಳನ್ನು ಇಲ್ಲಿಗೆ ಹಾಕಿದ್ದೇನೆ. ಜನರಿಗೆ ಹಾಗೂ ಯಾರಿಗೂ ತೊಂದರೆ ಕೊಡದ ಅಧಿಕಾರಿಗಳು ಇದ್ದಾರೆ. ನಮಗೆ ಯಾವುದೇ ತೊಂದರೆ ಇಲ್ಲ. ದೇವರು ನಮಗೆ ಕೊಟ್ಟಿದ್ದಾನೆ” ಎಂದರು.
“ಮುಂದಿನ ದಿನಗಳಲ್ಲಿ ಜನಸಂಪರ್ಕ ಸಭೆಗಳನ್ನು ನಿರಂತರವಾಗಿ ಮಾಡಲಾಗುವುದು. ಕೆಲಸಗಳಿಗೆ ಗುದ್ದಲಿಪೂಜೆ ಮಾಡಲಾಗುವುದು. ರಾಮನಗರ ರಸ್ತೆಯನ್ನೂ ಅಗಲೀಕರಣ ಮಾಡಲಾಗುವುದು” ಎಂದು ಹೇಳಿದರು.
“ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ನನ್ನ ಭೇಟಿ ಸಾಧ್ಯವಾಗದೆ ನನ್ನನ್ನು ಬೈದುಕೊಳ್ಳುತ್ತಾ ವಾಪಸ್ ಬರುತ್ತಾ ಇದ್ದೀರಿ. ಆದ ಕಾರಣಕ್ಕೆ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಬಂದಿದ್ದೇನೆ. ನಿಮ್ಮ ಹೆಣ, ಪಲ್ಲಕ್ಕಿ ಹೊರುವವನು ನಾನೇ, ನನ್ನ ಹೆಣ ಪಲ್ಲಕ್ಕಿ ಹೊರುವವರು ನೀವೇ” ಎಂದರು.
ಅನಾರೋಗ್ಯದ ಮಧ್ಯೆಯೂ ಜನರ ಅಹವಾಲು ಸ್ವೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗದೆ ಸತ್ಯಕ್ಕೆ ಕಿಟಕಿಗಳಾಗಬೇಕಿದೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್