ಬೀದರ್: ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಅಮಾನತುಗೊಂಡಿರುವ ಐ.ಎಫ್.ಎಸ್.ಅಧಿಕಾರಿ ಆರ್.ಗೋಕುಲ್ ತಪ್ಪೊಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದು, ಅವರಿಗೆ ಸಿಸಿಎಫ್ ಹುದ್ದೆಗೆ ಹಿಂಬಡ್ತಿ ನೀಡಿ ಅಮಾನತು ರದ್ದುಪಡಿಸಲು ಶಿಫಾರಸು ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಆರ್. ಗೋಕುಲ್ ಅಮಾನತು ಅಧಿಕೃತಗೊಳಿಸಲು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಒಪ್ಪದೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ ಅಮಾನತು ಮಾಡಿದ 15 ದಿನಗಳ ಒಳಗಾಗಿ ಸವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ ಎಂಬ ತಾಂತ್ರಿಕ ಕಾರಣದ ಮೇಲೆ ಅಮಾನತು ಅಧಿಕೃತಗೊಳಿಸಲು ಈ ಹಂತದಲ್ಲಿ ಪರಿಗಣಿಸಲು ಬರುವುದಿಲ್ಲ ಎಂದು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಹೇಳಿದೆ ಎಂದು ಈಗ ತಿಳಿದುಬಂದಿದೆ ಎಂದರು.
ಸಿಸಿಎಫ್ ಹಿಂಬಡ್ತಿಗೆ ಶಿಫಾರಸು:
ಈ ಮಧ್ಯೆ ಮುಖ್ಯ ಕಾರ್ಯದರ್ಶಿಯವರು ಆರ್. ಗೋಕುಲ್ ಸುಪ್ರೀಂಕೋರ್ಟ್ ನಲ್ಲಿ ಮಧ್ಯಪ್ರವೇಶಿಸಿ ಅರ್ಜಿ ಹಾಕಿರುವ ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದಿರುವ ತಮ್ಮ ತಪ್ಪು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಮಾನತು ರದ್ದುಪಡಿಸುವಂತೆ ಶಿಫಾರಸು ಮಾಡಿದ್ದಾರೆ, ಗೋಕುಲ್ ಮಾಡಿರುವ ಸರಣಿ ತಪ್ಪು-ಒಪ್ಪುಗಳ ಹಿನ್ನೆಲೆಯಲ್ಲಿ ಹಾಲಿ ಎಪಿಸಿಸಿಎಫ್ ಆಗಿರುವ ಅವರಿಗೆ ಸಿಸಿಎಫ್ ಆಗಿ ಹಿಂಬಡ್ತಿ ನೀಡಿ, ಅಮಾನತು ರದ್ದುಪಡಿಸುವ ಬಗ್ಗೆ ಕ್ರಮವಹಿಸುವಂತೆ ತಾವು ಶಿಫಾರಸು ಮಾಡಿರುವುದಾಗಿ ತಿಳಿಸಿದರು.
ಎಚ್ಎಂಟಿ ವಶದಲ್ಲಿರುವ 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿಯಾಗಿದೆ. ಅದನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇನ್ನೂ ಅಲ್ಲಿ 280 ಎಕರೆ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಆದರೆ ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಗೋಕುಲ್ ಸುಪ್ರೀಂಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ. ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
BREAKING: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಆ.11ರಿಂದ ಆರಂಭ
ಸರ್ಕಾರದ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ. ಸಾಲ : ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ