ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿ ಕೊಳ್ಳಲಿದ್ದಾರೆ.
ಹೌದು,’ನಿರಂತರ’ ಯೋಜನೆ ಮತ್ತು ಅನುದಾನಿತ ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ. ಈ ಯೋಜನೆಯು ಸುಮಾರು 5 ಕೋಟಿ ರು. ವೆಚ್ಚದ್ದಾಗಿದೆ.
ಶಿಕ್ಷಕರ ಮೊಬೈಲ್ ಆ್ಯಪ್ ಬಳಸಿ ವಿದ್ಯಾರ್ಥಿಗಳ ಫೋಟೋ ಸೆರೆ ಹಿಡಿಯಲಾಗುತ್ತದೆ. ಫೋಟೋ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿ ಖಚಿತಪಡಿಸುವ ವ್ಯವಸ್ಥೆ ಇರಲಿದೆ. ಇದರಿಂದ ನಕಲಿ ಹಾಜರಾತಿ ತಡೆಗೆ ಅನುಕೂಲವಾಗಲಿದೆ. ರಾಜ್ಯದ 52686 ಶಾಲೆಗಳ 52 ಲಕ್ಷ ವಿದ್ಯಾರ್ಥಿಗಳ ಹಾಜರಾತಿಗೆ ಇದನ್ನು ಬಳಕೆ ಮಾಡಲಾಗುತ್ತದೆ.