ಬಳ್ಳಾರಿ: ಎಸ್ ಎಸ್ ಎಲ್ ಸಿ ಮೂರು ಪರೀಕ್ಷೆಯಲ್ಲಿ ಫೇಲ್ ಆದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಮರು ದಾಖಲಾತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಫೇಲ್ ಎಂದು ಕರೆಯಬಾರದು ಎಂಬ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ಎಸ್ ಎಸ್ಎಲ್ ಸಿ ಮೂರು ಪರೀಕ್ಷೆಯನ್ನು ಆಯೋಜಿಸಲಾಗುತ್ತಿದ್ದು, ಪ್ರಸಕ್ತ ಸಾಲಿಗೆ ನಡೆದ ಎಸ್ಎಸ್ಎಲ್ ಸಿ 2 ಪರೀಕ್ಷೆಯಲ್ಲಿ 84 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಂದು ವೇಳೆ ಮೂರು ಪರೀಕ್ಷೆಯಲ್ಲಿ ಫೇಲ್ ಆದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಮರು ದಾಖಲಾತಿ ನೀಡಲಾಗುವುದು ಎಂದರು.
ಪ್ರಸಕ್ತ ವರ್ಷದಿಂದ ಎಲ್ಲಾ ಶಾಲೆಗಳಲ್ಲಿ ನೀತಿ ವಿಜ್ಞಾನ ವಿಷಯ ಆರಂಭವಾಗಲಿದೆ. ವಾರದಲ್ಲಿ ಎರಡು ತರಗತಿಗಳು ನಡೆಯಲಿದ್ದು, ಈ ವಿಷಯಕ್ಕೆ ಯಾವುದೇ ಪರೀಕ್ಷೆ ಇರುವುದಿಲ್ಲ, ಸರ್ಕಾರಿ ಶಾಲೆಗಳ 50 ಸಾವಿರ ಶಿಕ್ಷಕರಿಗೆ ಅಜೀಮ್ ಪ್ರೇಮ್ ಜೀ ಫೌಂಡೇಶನ್ ನಿಂದ ತರಬೇತಿ ನೀಡಲಾಗುವುದು ಎಂದರು.