ಥಾಣೆ: ಭಾರತೀಯ ಮಹಾಕಾವ್ಯಗಳ ವಿದ್ವಾಂಸ ಮತ್ತು ಲೇಖಕ ದಾಜಿ ಪನ್ಶಿಕರ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಮಹಾರಾಷ್ಟ್ರದ ಥಾಣೆಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು.
ಪನ್ಶಿಕರ್ ತಮ್ಮ ಜೀವನದ ಐದು ದಶಕಗಳನ್ನು ಹಿಂದೂ ಧರ್ಮಗ್ರಂಥಗಳ ಪ್ರಸಾರ ಮತ್ತು ವ್ಯಾಖ್ಯಾನಕ್ಕಾಗಿ ಮೀಸಲಿಟ್ಟರು. ಅವರು ಭಾರತೀಯ ಮಹಾಕಾವ್ಯಗಳು, “ರಾಮಾಯಣ”, “ಮಹಾಭಾರತ” ಮತ್ತು ಸಂತ-ಕವಿಗಳ ಸಾಹಿತ್ಯದ ವಿದ್ವಾಂಸರಾಗಿದ್ದರು ಅವರು ಭಾರತ ಮತ್ತು ವಿದೇಶಗಳಲ್ಲಿ 2,500 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದರು. ಸತತ 16 ವರ್ಷಗಳ ಕಾಲ ಅವರು ಮರಾಠಿ ದಿನಪತ್ರಿಕೆ “ಸಾಮ್ನಾ”ದಲ್ಲಿ ನಿಯಮಿತ ಅಂಕಣಕಾರರಾಗಿದ್ದರು.
ಅವರ ಕೆಲವು ಗಮನಾರ್ಹ ಪುಸ್ತಕಗಳಲ್ಲಿ “ಮಹಾಭಾರತ: ಏಕ್ ಸುಡಚಾ ಪ್ರವಾಸ್”, “ಕರ್ಣ: ಖರಾ ಕೊನ್ ತೋಟಾ?”, “ಕಥಾಮೃತ”, “ಕನಿಕನೀತಿ” ಮತ್ತು “ಅಪರಿಚಿತ ರಾಮಾಯಣ” (ಐದು ಭಾಗಗಳಲ್ಲಿ) ಸೇರಿವೆ.
ತಮ್ಮ ಹಿರಿಯ ಸಹೋದರ ಮತ್ತು ಪ್ರಸಿದ್ಧ ನಟ ಪ್ರಭಾಕರ್ ಪನ್ಶಿಕರ್ ಸ್ಥಾಪಿಸಿದ ‘ನಾಟ್ಯಸಂಪದ ನಾಟ್ಯ ಸಂಸ್ಥೆ’ಯ ವ್ಯವಸ್ಥಾಪಕರಾಗಿ, ಅವರು ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳ ದಿಗ್ಗಜರೊಂದಿಗೆ ನಿಕಟವಾಗಿ ಕೆಲಸ ಮಾಡಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 9.30 ಕ್ಕೆ ಥಾಣೆ ಪಶ್ಚಿಮದ ಜವಾಹರ್ ಬಾಗ್ ಚಿತಾಗಾರದಲ್ಲಿ ನಡೆಯಲಿದೆ