ಧಾರವಾಡ : ಹುಬ್ಬಳ್ಳಿಯ ಅಕ್ಷಯಪಾರ್ಕನ ಪ್ರತೀಕ್ ಗುಡಿಸಾಗರ ವಿಧ್ಯಾರ್ಥಿಯಾಗಿದ್ದು, ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಮುಖಾಂತರ ರೆಡ್ ಮಿ ನೋಟ್-13 ಪ್ರೋ + ಮೊಬೈಲನ್ನು ರೂ.24,999 ಗಳಿಗೆ ಬುಕ್ ಮಾಡಿದ್ದರು. ಎದುರುದಾರರು ಬುಕ್ ಮಾಡಿದ ಮೊಬೈಲ್ ಬದಲಾಗಿ ಬೇರೆ ಇನ್ನೊಬ್ಬರು ಬುಕ್ ಮಾಡಿದ ಕಡಿಮೆ ಮೊತ್ತದ ಸ್ಯಾಮಸಂಗ್ ಗ್ಯಾಲಕ್ಷಿ ಮೊಬೈಲನ್ನು ಕೊಟ್ಟಿರುತ್ತಾರೆ. ಇದರಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:22/11/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಸದಸ್ಯರು, ದೂರುದಾರರ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ರೂ.24,999 ಪಾವತಿಸಿ ಆನ್ಲೈನ್ ಮುಖಾಂತರ ಎದುರುದಾರರ ಬಳಿ ರೆಡ್ ಮಿ ನೋಟ್ ಮೊಬೈಲ್ ಖರೀದಿಸಿರುವುದು ಆಯೋಗದ ಗಮನಕ್ಕೆ ಕಂಡುಬಂದಿರುತ್ತದೆ. ಎದುರುದಾರರು ಡೆಲಿವರಿಕೊಟ್ಟಂತಹ ಮೊಬೈಲ್ ಬೇರೆ ಇರುವುದನ್ನು ಗಮನಿಸಿದ ಆಯೋಗ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವರೆಂದು ಅಭಿಪ್ರಾಯಪಟ್ಟು ಆದೇಶವಾದ 15 ದಿನಗಳ ಒಳಗಾಗಿ ದೂರುದಾರರು ಬುಕ್ ಮಾಡಿದ ಮೊಬೈಲನ್ನು ಕೊಡುವಂತೆ ಹಾಗೂ ತಪ್ಪಿದ್ದಲ್ಲಿ ಅದರ ಹಣ ರೂ.24,999 ಗಳನ್ನು ಶೇ. 10 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಎದುರುದಾರರಿಗೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರರಾದ ಅಮೆಜಾನ್ ಪ್ರೈ.ಲಿ. ಗೆ ಆಯೋಗ ಆದೇಶಿಸಿದೆ.