ಕೊಡಗು : “ಕಾವೇರಿ ನದಿ ಮಲೀನತೆ ಹಾಗೂ ನದಿ ಪಾತ್ರಗಳ ಒತ್ತುವರಿ ತಡೆಯಲು ತಂಡ ರಚನೆಗೆ ಕ್ರಮವಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೊಡಗಿನ ಭಾಗಮಂಡಲ ಹೆಲಿಪ್ಯಾಡ್ ನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನದಿ ಮಲೀನತೆ ಹಾಗೂ ಒತ್ತುವರಿ ಬಗ್ಗೆ ಕೇಳಿದಾಗ, “ಈ ನೆಲ,ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ನಿಮ್ಮ (ಮಾಧ್ಯಮಗಳ) ಸಲಹೆ ಇದ್ದರೂ ಸ್ವೀಕರಿಸುತ್ತೇವೆ” ಎಂದು ಉತ್ತರಿಸಿದರು.
ನೀರಿನ ಸದ್ಬಳಕೆ ಕುರಿತು ಅರಿವು; ಒಂದು ವಾರಗಳ ಕಾಲ ಅಭಿಯಾನ
“ವಿಶ್ವ ಜಲದಿನದ ಅಂಗವಾಗಿ ಒಂದು ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ” ಎಂದು ತಿಳಿಸಿದರು.
“ಕಳೆದ ವರ್ಷ ಉತ್ತಮ ಮಳೆಯಾದಂತೆ ಈ ವರ್ಷವೂ ಉತ್ತಮವಾಗಿ ಮಳೆಯಾಗಿ ಜನರ ಬದುಕು ಹಸನಾಗಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ” ಎಂದರು.
ಕಾವೇರಿ ಆರತಿಗೆ ಹಣ ಮೀಸಲು
“ನದಿ ತೀರದಲ್ಲಿ ಕಾವೇರಿ ಆರತಿ ಆಯೋಜಿಸಲು ಈಗಾಗಲೇ ಹಣ ಮೀಸಲಿಡಲಾಗಿದೆ. ಎಷ್ಟು ದಿನಗಳಿಗೆ ಒಮ್ಮೆ ಆರತಿ ಮಾಡಬೇಕು ಎನ್ನುವ ತೀರ್ಮಾನವನ್ನು ಮುಂದೆ ತಿಳಿಸಲಾಗುವುದು. ಆರತಿ ವೇಳೆ ಕೊಡಗಿನ ಕಲಾವಿದರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಜರಾಯಿ, ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ” ಎಂದರು.
“ನೀರನ್ನು ದುರ್ಬಳಕೆ ಮಾಡುವುದಿಲ್ಲ, ಸುಖಾಸುಮ್ಮನೆ ಖರ್ಚು ಮಾಡುವುದಿಲ್ಲ ಎಂದು ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ಪ್ರತಿಜ್ಞಾವಿಧಿ ಭೋದಿಸಲಾಗುವುದು. ಇದಕ್ಕೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ಜನರು ಆನ್ ಲೈನ್ ಮೂಲಕವೂ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು. ಎಲ್ಲಾ ಸಾರ್ವಜನಿಕರು, ರಾಜಕಾರಣಿಗಳು ಇದರಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
“ಈ ಹಿಂದೆ ತಲಕಾವೇರಿಗೆ ಬಂದು ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರು, ನಾನು ಹಾಗೂ ಪಕ್ಷದ ಅನೇಕ ನಾಯಕರ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಲಾಯಿತು. ಬೆಂಗಳೂರಿಗೆ ಕಾವೇರಿ ಕುಡಿಯುವ ನೀರಿನ 5 ನೇ ಹಂತವೂ ಈಗ ಕಾರ್ಯರೂಪಕ್ಕೆ ಬಂದಿದೆ. ಇದೆಲ್ಲವೂ ಸಾಧ್ಯವಾಗಿರುವುದು ಕಾವೇರಿ ನದಿಯಿಂದ. ಕೆಆರ್ ಎಸ್ ಬಾಗಿನ ಸಮರ್ಪಣೆ ವೇಳೆ ಕಾವೇರಿ ಆರತಿ ಮಾಡುವುದಾಗಿ ನಾನು ಮಾತು ಕೊಟ್ಟಿದ್ದೆ ಅದಕ್ಕೂ ಸಿದ್ದತೆಗಳು ನಡೆಯುತ್ತಿದೆ” ಎಂದರು.
“ಆಡಳಿತ ಪಕ್ಷಕ್ಕೆ ಇಬ್ಬರು ಶಾಸಕರನ್ನು ಕೊಟ್ಟಿರುವ ಕೊಡಗಿನ ಮಹಾಜನತೆಗೆ ಸಾಷ್ಟಾಂಗ ನಮಸ್ಕಾರಗಳು. ಕೊಡಗಿನಿಂದ ಹರಿಯುವ ಕಾವೇರಿ ನೀರು ಬೆಂಗಳೂರಿನ ಜನರ ಬದುಕಿನಲ್ಲಿ ಸಂತೋಷ ಉಂಟು ಮಾಡಿದೆ. ಕೊಡಗು ಇಡೀ ರಾಜ್ಯಕ್ಕೆ, ತಮಿಳುನಾಡಿಗೆ ಆಶ್ರಯ. ದಕ್ಷಿಣ ಭಾರತದ ಜೀವನದಿ. ಆದ ಕಾರಣ ಮೊದಲ ಪೂಜೆ ತಲಕಾವೇರಿಯಲ್ಲಿ ಸಲ್ಲಬೇಕು. ಆದ್ದರಿಂದ ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ಕಾವೇರಿ ಆರತಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ನಾಳೆ ತಮಿಳುನಾಡಿಗೆ ಪ್ರಯಾಣ
“ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ನಾಳೆ (ಶನಿವಾರ) ಕರೆದಿರುವ ಸಭೆಯಲ್ಲಿ ನಾನು ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಭಾಗವಹಿಸುತ್ತಿದ್ದೇವೆ” ಎಂದು ತಿಳಿಸಿದರು.
ಹನಿಟ್ರ್ಯಾಪ್ ಆಗಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ: ಮಾಡಿದ್ದುಣ್ಣೋ ಮಾರಾಯ- ಡಿಕೆಶಿ
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace