ಬೆಂಗಳೂರು : ಯುವನಿಧಿ ಯೋಜನೆಯಡಿ ಈ ವರ್ಷದ ಮಾ.10ರವರೆಗೆ 2,62,207 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಜನವರಿ ಅಂತ್ಯಕ್ಕೆ 1,74,170 ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರನಗದುವರ್ಗಾವಣೆ ಮೂಲಕ ಪಾವತಿಸಲಾಗಿದೆ. ಉಳಿದ ಅರ್ಜಿಗಳ ಭೌತಿಕ ಪರಿಶೀ ಲನೆಯ ನಂತರ ಭತ್ಯೆ ನೀಡಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಬಿಜೆಪಿಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪದವಿ ಹಾಗೂ ಡಿಪ್ಲೊಮಾಪಡೆದತಕ್ಷಣಯೋಜನೆಗೆನೋಂದಣಿ ಮಾಡಿಕೊಳ್ಳ ಬಹುದು. ಎಲ್ಲವೂ ಆನ್ಲೈನ್ ಮೂಲಕ ಪರಿಶೀಲನೆಗೆ ಒಳ ಪಡುತ್ತದೆ. ನೋಂದಣಿಯಾದ ಆರು ತಿಂಗಳವರೆಗೆ ಯಾವುದೇ ಉದ್ಯೋಗ ದೊರೆಯದಿದ್ದಾಗ ಮಾತ್ರ ಅವರು ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಈ ರೀತಿ ಅರ್ಜಿ ಹಾಕಿದವರ ಸಂಖ್ಯೆ 49,727 ಇದೆ ಎಂದರು.
ಕೆಲವು ತಾಂತ್ರಿಕ ಕಾರಣಗಳಿಂದ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ನೆರವು ವಿಳಂಬವಾಗಿರಬಹುದು. ಹಾಗೆಂದು ಇದನ್ನು ಸ್ಥಗಿತ ಮಾಡುತ್ತೇವೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಅನುದಾನದ ಕೊರತೆಯೂ ಇಲ್ಲ. ನಿಯಮಗಳ ಅನುಸಾರವಾಗಿ ನೀಡಬೇಕು ಎಂದು ಸ್ಪಷ್ಟಪಡಿಸಿದರು.
ಯುವನಿಧಿಗೆ ಇಂತಿಷ್ಟೇ ಎಂದು ಟಾರ್ಗೆಟ್ ಮಾಡಿಕೊಂಡಿಲ್ಲ, ಇದು ಅನ್ ಲಿಮಿಟೆಡ್, ತಿಂಗಳಿನಿಂದ ತಿಂಗಳು, ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮುಂದಿನ ವರ್ಷ 5 ಲಕ್ಷವಾಗಬಹುದು. ನಂತರ 10 ಲಕ್ಷ ತಲುಪುವ ಸಾಧ್ಯತೆಯೂ ಇದೆ. ಪ್ರತಿ ವರ್ಷ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿ ಬರುತ್ತಾರೆ ಸಚಿವರು ತಿಳಿಸಿದರು.
ಪದವಿ ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬೇಕಾದರೆ ಮೊದಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಇಲಾಖೆಗೆ ಸೇವಾ ಸಿಂಧು ಪೋರ್ಟಲ್ ಸೃಜನೆ ಮಾಡಿದೆ. ಇಲ್ಲಿವರೆಗೆ 1,74,181 ವಿದ್ಯಾರ್ಥಿಗಳು ಇದರ ನೆರವು ಪಡೆದಿದ್ದಾರೆ ಎಂದು ಡಾ. ಪಾಟೀಲ್ ವಿವರಿಸಿದರು.
ಹೆಸರು ನೋಂದಣಿ ಮಾಡಿದ ಮೇಲೆ ಅಭ್ಯರ್ಥಿಗಳು 181 ದಿನ ಕಾಯಬೇಕಾಗುತ್ತದೆ. ಈ ಕೆಟಗಿರಿಯಲ್ಲಿ 49 ಸಾವಿರ ಜನರಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕೆ ಸೇರಿದರೆ ಇದರ ನೆರವು ಸಿಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ತಕ್ಷಣವೇ ಅರ್ಹರಿಗೆ ಇದು ಅನ್ವಯವಾಗುತ್ತದೆ. ಹೆಸರು ನೋಂದಾಯಿಸಿಕೊಂಡು ಪೋರ್ಟಲ್ ನಲ್ಲಿ ಅರ್ಜಿ ಹಾಕಿದರೆ ನೋಂದಣಿಯಾಗುತ್ತದೆ. ಇದಕ್ಕೆ ಯಾರ ಸಹಾಯವೂ ಬೇಕಾಗಿಲ್ಲ, ಇಲಾಖೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಯುವಕರಿಗೆ ಮಾಹಿತಿ ಕೊಡಲು ಅಗತ್ಯವಾದ ವ್ಯವಸ್ಥೆ ಮಾಡಿದ್ದೇವೆ. ಕೆಲವು ಸಣ್ಣಪುಟ್ಟ ತಾಂತ್ರಿಕ ತೊಂದರೆಗಳು ಎದುರಾಗಬಹುದು ವಿದ್ಯಾರ್ಥಿಗಳು ಗಾಬರಿಪಡದೆ ಸರ್ಕಾರ ಸವಲತ್ತು ಪಡೆಯಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.