ಬೆಂಗಳೂರು: ಫೆಬ್ರುವರಿ 28 ರಿಂದ ಮಾರ್ಚ್ 2ನೇ ತಾರೀಖಿನವರೆಗೆ ರೈತ ಉತ್ಪಾದಕ ಸಂಸ್ಥೆಗಳ ಮೇಳ -2025 ವನ್ನು ತೋಟಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕುರಿತಂತೆ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದಶಕರಾದಂತ ಡಾ.ರಾಘವೇಂದ್ರ ಕೆ ಮೇಸ್ತ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಭಾರತ ಸರ್ಕಾರದ ಕೃಷಿ ಸಚಿವಾಲಯದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯು ರೈತರನ್ನು ಒಟ್ಟುಗೂಡಿಸಿ ಅವರ ಉತ್ಪಾದನೆ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ವೃದ್ಧಿಸಲು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದು ಹೆಚ್ಚು ಸೂಕ್ತವೆಂದು ಪರಿಗಣಿಸಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರವು 2013ರಲ್ಲಿ 1956ರ ಕಂಪನಿ ಕಾಯ್ದೆಗೆ ವಿಭಾಗ IXA ರಲ್ಲಿ ತಿದ್ದುಪಡಿ ತಂದು ಕಂಪನಿ ಕಾಯ್ದೆಯಡಿಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ನೊಂದಾಯಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.
ರೈತ ಉತ್ಪಾದಕರ ಸಂಸ್ಥೆಗಳಿಂದ ರೈತರಿಗಾಗುವ ಲಾಭಗಳನ್ನು ಮನಗಂಡು 2020ರಲ್ಲಿ ಹೊಸ ತಂತ್ರವನ್ನು ರೂಪಿಸಿ ದೇಶದಾದ್ಯಂತ 10,000 ರೈತ ಉತ್ಪಾದಕರ ಸಂಸ್ಥೆಗಳನ್ನು 5 ವರ್ಷದೊಳಗೆ ರಚಿಸಿ ಬಲಪಡಿಸಲು ಯೋಜನೆಯನ್ನು ರೂಪಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ಅಭಿವೃದ್ಧಿಗೆ ಅಗತ್ಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೂ ಸಹ, ರೈತರ ಏಳಿಗೆಗಾಗಿ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸಲು 2018ರಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ನೀತಿಯನ್ನು ರೂಪಿಸಿ ವಿವಿಧ ಅಭಿವೃದ್ಧಿ ಇಲಾಖೆಗಳ ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸುಮಾರು 1,472 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿದ್ದು ಅವು ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರೈತ ಉತ್ಪಾದಕರ ಸಂಸ್ಥೆಯು ಪ್ರಾಥಮಿಕ ಉತ್ಪಾದಕರ ಸಂಸ್ಥೆಯಾಗಿದ್ದು, ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸದಸ್ಯ ರೈತರಿಗೆ ತಾಂತ್ರಿಕ ಸಲಹೆ, ಸಾಮಥ್ಯ ಬಲವರ್ಧನೆ, ಉತ್ತಮ ಗುಣಮಟ್ಟದ ಪರಿಕರಗಳನ್ನು ಪೂರೈಸುವುದು, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮುಖಾಂತರ ನೇರ ಮಾರುಕಟ್ಟೆ ಕಲ್ಪಿಸಿ ಸದಸ್ಯ ರೈತರನ್ನು ಹೆಚ್ಚು ಸಬಲರನ್ನಾಗಿ ಮಾಡುವುದು ಮತ್ತು ರೈತರ ಆರ್ಥಿಕ ಮಟ್ಟವನ್ನು ಬಲಪಡಿಸುವುದಾಗಿದೆ ಎಂದಿದ್ದಾರೆ.
ಈ ರೈತ ಉತ್ಪಾದಕರ ಸಂಸ್ಥೆಗಳಿಗೆ ಬೇಕಾದ ಅಗತ್ಯ ತರಬೇತಿ, ಸಲಹೆ ಹಾಗು ಆರ್ಥಿಕ ನೆರವನ್ನು ಸರ್ಕಾರವು ವಿವಿಧ ಸಂಸ್ಥೆಗಳ ಮುಖಾಂತರ ನೀಡುತ್ತ ಬಂದಿದೆ. ಅವುಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು (ಕರ್ನಾಟಕ ಸರ್ಕಾರ) ಹಾಗೂ ಸಣ್ಣ ರೈತರ ಕೃಷಿ-ವ್ಯಾಪಾರ ಒಕ್ಕೂಟ (ಭಾರತ ಸರ್ಕಾರ) ಇವು ತುಂಬಾ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಇದೇ ದಿಶೆಯಡಿ ಈ ಮೂರು ಸಂಸ್ಥೆಗಳು ಜೊತೆಗೂಡಿ ಫೆಬ್ರುವರಿ 28 ರಿಂದ ಮಾರ್ಚ್ 2ನೇ ತಾರೀಖಿನವರೆಗೂ ಮೂರು ದಿನಗಳ ಎಫ್.ಪಿ.ಒ. ಮೇಳ-2025 ವನ್ನು ಹಮ್ಮಿಕೊಂಡಿದ್ದೇವೆ ಅಂತ ಹೇಳಿದ್ದಾರೆ.
ಈ ವಿನೂತನ ಮೇಳವು ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿ.ಕೆವಿ.ಕೆ.ಯಲ್ಲಿ ಏರ್ಪಡಿಸಲಾಗಿದ್ದು ಸರಿಸುಮಾರು 15,000 ರೈತರು, ಉದ್ಯಮಿಗಳು ಹಾಗೂ ಹಿತಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡಿರುವ 100 ಕ್ಕೂ ಹೆಚ್ಚು ಎಫ್.ಪಿ.ಒ. ಗಳು ತಮ್ಮ ಮಳಿಗೆಗಳನ್ನು ತೆರೆಯಲಿದ್ದು ತಮ್ಮ ಸಂಸ್ಥೆಯ ಉತ್ಪನ್ನಗಳ ವಸ್ತು ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸುಮಾರು 400-500 ಕ್ಕೂ ಹೆಚ್ಚಿನ ಎಫ್.ಪಿ.ಒ. ಗಳ ಸದಸ್ಯರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಳದ ಪ್ರಯೋಜನ ಪಡೆಯಲಿದ್ದಾರೆ. ಉಳಿದಂತೆ ಈ ಮೇಳದಲ್ಲಿ ವಿವಿಧ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದ್ದು ರೈತ ಉತ್ಪಾದಕರ ಸಂಸ್ಥೆಗಳ ಧ್ಯೇಯ, ದೂರದೃಷ್ಟಿ, ಅವಕಾಶಗಳು, ತೊಡಕುಗಳು, ಸಾಮರ್ಥ್ಯ ಬಲವರ್ಧನೆ, ಕಾನೂನು ಅನುಸರಣೆ, ಮಾರಾಟ ಮಾಡುವವರ ಮತ್ತು ಖರೀದಿಸುವವರ ಸಮಾವೇಶ (Buyer-Seller Meet), ಇನ್ನಿತರೆ ವಿಷಯಗಳ ಬಗ್ಗೆ ಚಿಂತನ-ಮಂಥನ ಸಭೆಗಳು, ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಿದೆ ಎಂದಿದ್ದಾರೆ.
ಈ ಮೇಳದ ಉದ್ಘಾಟಣೆಯನ್ನು ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಮಾಡಲಿದ್ದು, ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹಾಗೂ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್. ವಿಶ್ವನಾಥ್ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರೈತ ಉತ್ಪಾದಕರ ಕಂಪನಿಗಳ ಸದಸ್ಯರು, ರೈತ ಬಾಂಧವರು, ರೈತೋದ್ಯಮಿಗಳು, ಆಸಕ್ತ ನಾಗರೀಕರು ಈ ಮೇಳಕ್ಕೆ ಭಾಗವಹಿಸಿ ಪ್ರಯೋಜನ ಪಡೆಯುವುದರೊಂದಿಗೆ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
BREAKING: 2026ರಿಂದ ವರ್ಷಕ್ಕೆ 2 ಬಾರಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ: CBSEಯಿಂದ ಕರಡು ಅಧಿಸೂಚನೆ ಪ್ರಕಟ