ಮೈಸೂರು : ಇಂದು 414ನೇ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣೆ ಶುರುವಾಗಿದ್ದು, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ಅರಮನೆ ಆವರಣದಲ್ಲಿ ಸಿಂಗಾರ ಮಾಡಲಾಗಿದೆ.
ಅರಮನೆ ಆವರಣದ ನೀರಿನ ತೊಟ್ಟಿ ಬಳಿ ಸ್ನಾನ ಮಾಡಿಸಿ ಜಂಬೂ ಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ಸಿಂಗಾರ ಮಾಡಲಾಗುತ್ತಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ.ಹುಣಸೂರು ಮೂಲದ ಒಟ್ಟು 8 ಕಲಾವಿದರಿಂದ ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರ ಮಾಡಲಾಗಿದೆ.
ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರ ಮಾಡಲಾಗಿದೆ. ಆನೆಯ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಿ ಆನೆಗಳಿಗೆ ಚಿತ್ತಾರ ಬಿಡಿಸಲಾಗಿದೆ.
ದಸರಾದ ಪ್ರಮುಖ ಆಕರ್ಷಣೆ ಜಂಬೂ ಜಂಬೂಸವಾರಿಗೆ ಕ್ಷಣಗಣನೆ
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಗಜಪಡೆಯ ಪ್ರಮುಖ ಆಕರ್ಷಕಣೆ ಕ್ಯಾಪ್ಟನ್ ಅಭಿಮನ್ಯು 5ನೇ ಬಾರಿ ಅಂಬಾರಿ ಹೊರಲು ರೆಡಿಯಾಗಿದ್ದಾನೆ. ಚಿನ್ನದ ಅಂಬಾರಿ ಹೊತ್ತು ನಾಡದೇವಿಯನ್ನು ಮೆರೆಸಲಿದ್ದಾನೆ. ಈ ಮೂಲಕ 5ನೇ ಬಾರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅಭಿಮನ್ಯು. ನಿಶಾನೆ ಆನೆಯಾಗಿ ಧನಂಜಯ ಆನೆ ಭಾಗಿ. ಗೋಪಿ ನೌಫತ್ ಆನೆಯಾಗಿ ಭಾಗಿ. ಅಂಬಾರಿ ಹೊರಲಿರುವ ಅಭಿಮನ್ಯು ಆನೆ. ಲಕ್ಷ್ಮಿ, ವರಲಕ್ಷ್ಮಿ ಆನೆ ಕುಮ್ಕಿ ಆನೆಗಳಾಗಿ ಭಾಗಿ. ಉಳಿದ ಆನೆಗಳು ಸಾಲಾನೆಗಳಾಗಿ ಭಾಗಿ. ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು ಒಂಬತ್ತು ಆನೆಗಳು ಭಾಗಿ.
ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ).10 ಗಂಟೆಯಿಂದ ಅರಮನೆಯ ಶ್ವೇತವರಾಹಸ್ವಾಮಿ ದೇವಸ್ಥಾನದಲ್ಲಿ ಜಟ್ಟಿಗಳಿಂದ ಸಿದ್ಧತೆ. 10:45 ರಿಂದ 11 ಗಂಟೆ ಒಳಗೆ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಲಿದೆ. ಜಟ್ಟಿಕಾಳಗ ಮುಗಿದ ಬಳಿಕ, 11:20 ರಿಂದ 11:45 ರ ವರೆಗೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ವಿಜಯಯಾತ್ರೆ ಹೊರಡಲಿದ್ದು, ಬನ್ನಿಪೂಜೆ ಬಳಿಕ ಸ್ವಸ್ಥಾನಕ್ಕೆ ವಾಪಸ್ ಆಗಲಿದೆ. ಬಳಿಕ ಯದುವೀರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.