ಬೆಂಗಳೂರು : ಕೃಷಿ ಇಲಾಖೆ ವತಿಯಿಂದ ನೀರಿನ ಮಿತಿ ಬಳಕೆಯಿಂದ ಅಧಿಕ ಇಳುವರಿ ಪಡೆಯಲು ಹಾಗೂ ಜಿಲ್ಲೆಯಲ್ಲಿ ಲಘು ನೀರಾವರಿ ಪದ್ಧತಿಯನ್ನು ಜನಪ್ರಿಯಗೊಳಿಸಲು ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಸೂಕ್ಷ್ಮ ನೀರಾವರಿ (ಹನಿ ನೀರಾವರಿ ಮತ್ತು ತುಂತುರು ನೀರಾವರಿ) ಘಟಕಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ರಿಯಾಯಿತಿಯಲ್ಲಿ ಸೌಲಭ್ಯ ಒದಗಿಸಲಾಗುತ್ತಿದ್ದು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೌಲಭ್ಯ ಪಡೆಯಲು ಷರತ್ತುಗಳು
ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲಾ ವರ್ಗದ ರೈತರಿಗೆ 5.0 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ಮೊದಲ ಎರಡು ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಷ್ಟು ಸಹಾಯಧನ ಮತ್ತು ಎರಡು ಹೆಕ್ಟೇರ್ ಗಿಂತ ಮೇಲ್ಪಟ್ಟು 5.0 ಹೆಕ್ಟೇರ್ ವರೆಗೆ ಶೇ.45 ರಷ್ಟು ಸಹಾಯಧನವನ್ನು ಸಾಮಾನ್ಯ ವರ್ಗದ ರೈತರಿಗೆ ಮತ್ತು ಶೇ.55 ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ನೀಡಲು ಅವಕಾಶವಿದೆ.
ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಘಟಕಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಹಾಯಧನ ದೊರೆಯುತ್ತದೆ.
ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದಡಿ ಪಡೆಯಲು ಸಾಮಾನ್ಯ ವರ್ಗದ ರೈತರಿಗೆ ಒಮ್ಮೆ ಮಾತ್ರ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ಏಳು ವರ್ಷಗಳಿಗೊಮ್ಮೆ ಮಾತ್ರ ಅವಕಾಶವಿರುತ್ತದೆ. ಏಳು ವರ್ಷಗಳ ಹಿಂದೆ, ಸೂಕ್ಷ್ಮನೀರಾವರಿ ಸವಲತ್ತು ಪಡೆದ ಪರಿಶಿಷ್ಟ ಜಾತಿ ರೈತರಿಗೆ ಮತ್ತೊಮ್ಮೆ ಸವಲತ್ತು ಪಡೆಯಲು ರೈತರಿಗೆ ಆದ್ಯತೆ ಮೇಲೆ ನೀಡಲಾಗುವುದು.
ರೈತರು ಸಹಾಯಧನದಡಿ ಸವಲತ್ತನ್ನು ಪಡೆಯಲು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ-ಪಹಣಿ/ಹಿಡುವಳಿ ಪತ್ರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಜಾತಿ ಪ್ರಮಾಣ ಪತ್ರ. ಮೊಬೈಲ್ ಸಂಖ್ಯೆ, ಚೆಕ್ಕುಬಂದಿ, ನೀರಿನ ಲಭ್ಯತೆ ಪ್ರಮಾಣ ಪತ್ರ ಆಧಾರ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲ ಎಂಬ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ.ಕೋಡ್ ಸಂಖ್ಯೆ, 100/- ರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸುವುದು.
ಸೂಕ್ಷ್ಮ ನೀರಾವರಿ ಘಟಕಗಳನ್ನು ಕೃಷಿಗೆ ಮಾತ್ರ ಉಪಯೋಗಿಸಲಾಗುವುದು ಎಂದು ರೈತರು ಘೋಷಣಾ ಪತ್ರ ನೀಡಬೇಕು. ರೈತರು ಕಡ್ಡಾಯವಾಗಿ FID ಹೊಂದಿರತಕ್ಕದ್ದು.
ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕಗಳನ್ನು ಪಡೆಯಲು ಹೆಚ್ಚಿನ ವಿವರಗಳಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.