ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲು ವಾಸದಲ್ಲಿ ಬರೋಬ್ಬರಿ 15 ಕೆಜಿ ತೂಕ ಇಳಿಕೆಯಾಗಿದೆ ಎಂದು ಬಹಿರಂಗವಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ 2 ತಿಂಗಳು 6 ದಿನ ಕಳೆದಿದ್ದ ನಟ ದರ್ಶನ್ 15 ಕೆಜಿ ತೂಕ ಕಳೆದುಕೊಂಡಿದ್ದಾರೆ. ರಾಜಾತಿಥ್ಯ ಪಡೆದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ದರ್ಶನ್ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಮುನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರ ದೇಹಸ್ಥಿತಿ ಹಾಗೂ ಆರೋಗ್ಯದ ಕುರಿತು ವೈದ್ಯರು ಪರಿಶೀಲಿಸಿದ್ದಾರೆ.
ವೈದ್ಯರ ಪರಿಶೀಲನೆ ವೇಳೆ 107 ಕೆ.ಜಿ ಇದ್ದ ದರ್ಶನ್ 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ರಕ್ತದೊತ್ತಡವು ಸಾಮಾನ್ಯವಾಗಿದೆ. ಬೆನ್ನುಹುರಿ ಸೇರಿದಂತೆ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ದೈಹಿಕವಾಗಿ ಸಧೃಡವಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ಕಂಡುಬಂದಿದೆ.