ಬೆಂಗಳೂರು: ಇದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯಗೆ ರಾಜ್ಯಪಾಲರು ನೀಡಿದಂತ ನೋಟಿಸ್ ಕುರಿತಂತೆ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು. ಅದು ಏನು ಎನ್ನುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯ ಸಂಪೂರ್ಣ ಹೈಲೈಟ್ಸ್ ಮುಂದೆ ಓದಿ.
ಕನ್ನಡಿಗರ ಆಶೀರ್ವಾದದೊಂದಿಗೆ ಮತ್ತು ಕಾನೂನ್ಮಾತಕವಾಗಿ ಆಯ್ಕೆವಾಗಿರುವಂತಹ ಬಹುಮತ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಬುಡಮೇಲು ಮಾಡುವ ಕ್ರಮಕ್ಕೆ ಮತ್ತೊಮ್ಮೆ ಕೇಂದ್ರ ಸರ್ಕಾರ ಮುಂದಾಗಿದ್ದು ಈ ಬಾರಿ ರಾಜ್ಯಪಾಲರನ್ನು ಅವರ ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಮಾನ್ಯ ಮುಖ್ಯ ಮಂತ್ರಿಯವರಿಗೆ ನೊಟೀಸು ಕಾನೂನು ಹಾಗೂ ಸಂವಿಧಾನ ಬಾಹಿರವಾಗಿದೆ.
ಟಿ.ಜೆ. ಅಬ್ರಾಹಂ, ಒಬ್ಬ ಅಪರಾಧ ಹಿನ್ನೆಲೆಯುಳ್ಳ ಮತ್ತು ಕಾನೂನನ್ನು ದುರ್ಬಳಕೆಗೆ ಪ್ರಸಿದ್ದವಾಗಿದ್ದು, ಈಗಾಗಲೇ ಮಾನ್ಯ ಸರ್ವೊಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ವೇದಿಕೆಯನ್ನು ದುರ್ಬಳಕೆಗೊಳಿಸಿರುವ ಹಿನ್ನೆಲೆಯಲ್ಲಿ ರೂ.25.00 ಲಕ್ಷ ದಂಡ ವಿಧಿಸಿದೆ. ಈ ಹಿನ್ನೆಲೆಯ ವ್ಯಕ್ತಿಯ ಅರ್ಜಿಯ ಮೇಲೆ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳಿಗೆ ತಾರೀಖು 26.07.2024ರಂದು ತಮ್ಮ ವಿರುದ್ಧ ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಮತ್ತು ಕಲಂ 218 BNSS ಅಡಿಯಲ್ಲಿಅಭಿಯೋಜನಾ ಮಂಜೂರಾತಿ ಏಕೆ ನೀಡಬಾರದು ಎಂದು ಏಳು ದಿನಗಳೊಳಗೆ ಉತ್ತರ ನೀಡಿ ಎಂದು ಕಾರಣ ಕೇಳಿ ನೋಟೀಸ್ ನೀಡಿರುತ್ತಾರೆ.
ಈ ನೋಟೀಸ್ ಸಂಪೂರ್ಣವಾಗಿ ಕಾನೂನು ಮತ್ತು ಸಂವಿಧಾನ ಬಾಹಿರವಲ್ಲದೆ ರಾಜಕೀಯ ಪ್ರೇರಿತವಾಗಿರುತ್ತದೆ. ರಾಜಭವನವನ್ನು ಪಶ್ಚಿಮ ಬಂಗಾಳ, ಕೇರಳ, ದೆಹಲಿ, ತಮಿಳುನಾಡು ಮತ್ತು ಇತರ ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿ ಇರುವ ರಾಜ್ಯಗಳ ಮಾದರಿಯಲ್ಲಿ ಕೇಸರಿಕರಣಗೊಳಿಸಿ ರಾಜ ಭವನಗಳನ್ನು ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಕಚೇರಿಗಳನ್ನಾಗಿ ಬಳಸಿ, ಈಗ ಅದೇ ಪ್ರವೃತ್ತಿಯನ್ನು ಕರ್ನಾಟಕದಲ್ಲೂ ಕೂಡ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಟಿ.ಜೆ. ಅಬ್ರಾಹಂ ದಿ: 18.7.2024ರಂದು ಲೋಕಾಯುಕ್ತ ಪೊಲೀಸರಿಗೆ ಒಂದು ದೂರನ್ನು ನೀಡಿರುತ್ತಾರೆ. ಈ ದೂರಿನಲ್ಲಿ MUDA ಸಂಸ್ಥೆಯು ಮಾನ್ಯ ಮುಖ್ಯಮಂತ್ರಿಗಳಾದಂತಹ ಶ್ರೀ ಸಿದ್ದರಾಮಯ್ಯ ರವರ ಧರ್ಮಪತ್ನಿ ಪಾರ್ವತಿ ಅವರಿಗೆ ತಾವು ಕಳೆದು ಕೊಂಡಿರುವಂತಹ ಭೂ ಮಾಲಿಕತ್ವಕ್ಕೆ ಪರಿಹಾರದ ರೂಪದಲ್ಲಿ ನೀಡಿರುವಂತಹ ನಿವೇಶನಗಳು, ಒಬ್ಬ ಸಾರ್ವಜನಿಕ ಸೇವಕ ಅನೈತಿಕವಾದ ಲಾಭವನ್ನು ಪಡೆದ ಅಪರಾಧವಾಗಿರುತ್ತದೆ ಮತ್ತು ಭ್ರಷ್ಟಾಚಾರ ಕಾಯ್ದೆ ಮತ್ತು BNSS ಹಲವಾರು ಅಪರಾಧಗಳಾಗಿರುತ್ತದೆಯೆಂದು ಆರೋಪಿಸಿರುತ್ತಾರೆ. ಕೇವಲ ಒಂದೇ ವಾರದಲ್ಲಿ
ದಿ: 26.07.2024 ರಂದು ಗೌರವಾನ್ವಿತ ರಾಜ್ಯಪಾಲರಿಗೂ ಒಂದು ಅರ್ಜಿಯನ್ನು ಸಲ್ಲಿಸಿ ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಮತ್ತು ಕಲಂ 218 BNSS ಅಡಿಯಲ್ಲಿಅಭಿಯೋಜನಾ ನೀಡಲು ಕೋರಿರುತ್ತಾರೆ. ಈ ಅರ್ಜಿಯನ್ನು ದಿ:26.07.2024ರಂದು ಬೆಳಿಗ್ಗೆ 11.30 ಗಂಟೆಗೆ ನೀಡಿದ್ದು, ನಂತರ ಅರ್ಜಿಗೆ ಸೇರ್ಪಡೆ ಅರ್ಜಿಯನ್ನು ಕೂಡ ನೀಡಿರುತ್ತಾರೆ.
ಇದೇ MUDA ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 05.07.2024ರಂದು ಸ್ವಯಂಪ್ರೇರಿತವಾಗಿ ಗೌರವಾನ್ವಿತ ರಾಜ್ಯಪಾಲರು ಮಾಧ್ಯಮದ ಮೂಲಕ ಮತ್ತು ಸಾರ್ವಜನಿಕ ವಲಯದಲ್ಲಿ MUDA ಸಂಸ್ಥೆಯ ಬಗ್ಗೆ ವ್ಯಾಪಕ ಭ್ರಷ್ಟಾಚಾರದ ಚರ್ಚೆ ಕೇಳಿ ಬಂದಿರುತ್ತದೆ ಆದ್ದರಿಂದ ತಮ್ಮ ವರದಿಯನ್ನು ಸಲ್ಲಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿರುತ್ತಾರೆ. ಹಾಗೆಯೇ ದಿ: 15.07.2024ರಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆಯಿಂದ ಸ್ವೀಕೃತವಾಗಿರುವಂತಹ ಅರ್ಜಿ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲು ಮತ್ತು ಸ್ವೀಕೃತವಾಗಿರುವಂತಹ ಅರ್ಜಿಯ ಬಗ್ಗೆ ಕ್ರಮ ಜರುಗಿಸಲು ಪತ್ರವನ್ನು ಬರೆದಿರುತ್ತಾರೆ.
ಈ ಪತ್ರಗಳ ಹಿನ್ನೆಲೆಯಲ್ಲಿ, ಮುಖ್ಯ ಕಾರ್ಯದರ್ಶಿಗಳು ತಮ್ಮ ಸುದೀರ್ಘವಾದ ವರದಿಯನ್ನು 26.07.2024ರಂದು ಲಿಖಿತವಾಗಿ ಮಾನ್ಯ ರಾಜ್ಯಪಾಲರಿಗೆ ಖುದ್ದಾಗಿ ರಾಜಭವನಕ್ಕೆ ತೆರಳಿ ಸಂಜೆ 6.30 ಗಂಟೆಯಲ್ಲಿ ನೀಡಿ, ಸಂಜೆ 6.30 ರಿಂದ 7.30 ರವರೆಗೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಹಾಗೂ ಪ್ರಸ್ತಾಪಿಸಿದಂತಹ ವಿಷಯಗಳ ಬಗ್ಗೆ ಸಂಪೂರ್ಣವಾದಂತಹ ವಿವರಣೆಯನ್ನು ನೀಡಿರುತ್ತಾರೆ.
ಆದರೂ ಕೂಡ ಅದೇ ದಿನ 26.07.2024ರಂದು ಮಾನ್ಯ ರಾಜ್ಯಪಾಲರ ಕಛೇರಿಯಿಂದ ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಾದಂತಹ ಪ್ರಭುಶಂಕರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯಮಂತ್ರಿಗಳಿಗೆ ಮಾನ್ಯ ರಾಜ್ಯಪಾಲರಿಂದ ಕಾರಣ ಕೇಳಿ ನೋಟೀಸ್ ನೀಡಬೇಕು ಎಂದು ತಿಳಿಸಿರುತ್ತಾರೆ. ಸಮಯ ತಡವಾಗಿರುವುದರಿಂದ ಮರು ದಿನ ನೀಡಿ ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಕ್ಕಾಗಿ, ಮರುದಿನ ಅಂದರೆ ದಿ:27.07.2024 ರಂದು ಮಧ್ಯಾಹ್ನ 2.00ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಈ ನೋಟೀಸ್ನ್ನು ರಾಜಭವನದ ಸಿಬ್ಬಂದಿಗಳು ತಲುಪಿಸಿರುತ್ತಾರೆ.
ಮಾನ್ಯ ರಾಜ್ಯಪಾಲರ ಎಂದೂ ಕಾಣದ ತರಾತುರಿಯ ಆಶ್ಚರ್ಯದ ಕ್ರಮ ಈ ಪ್ರಕರಣದಲ್ಲಿ ಎದ್ದು ಗೋಚರಿಸುತ್ತಿದೆ. ದಿ: 26.07.2024 ರಂದು ಮುಖ್ಯ ಕಾರ್ಯದರ್ಶಿಯವರು ನೀಡಿರುವ ವಿವರಣೆ ಮತ್ತು ಲಿಖಿತ ಉತ್ತರವನ್ನು ಯಾವುದೇ ಪರಾಮರ್ಶೆ ಮಾಡದೇ, ಟಿ.ಜೆ. ಅಬ್ರಾಹಂ ರವರು ನೀಡಿರುವ ಅದೇ ದಿನದ ಅರ್ಜಿಯನ್ನು ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ, ಸ್ವೀಕರಿಸಿದಂತಹ ಅರ್ಜಿ ಹಾಗೂ ದಾಖಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಳ್ಳದೆ ಮಾನ್ಯ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವುದು ಕೇವಲ ರಾಜಕೀಯ ಉದ್ದೇಶಕ್ಕೋಸ್ಕರ ನೀಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದಲ್ಲದೇ ತಮ್ಮ ನೋಟೀಸ್ನಲ್ಲಿ ಮೇಲ್ನೋಟಕ್ಕೆ ಅಪರಾಧಗಳು ಆಗಿರುವಂತಹ ಸಾಧ್ಯತೆಗಳು ಎದ್ದು ಕಾಣುತ್ತದೆ ಎಂದು ತೀರ್ಪನ್ನು ಮಾನ್ಯ ರಾಜ್ಯಪಾಲರು ನೀಡಿದ್ದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ.
ಮುಖ್ಯವಾಗಿ 15.07.2024ರ ರಾಜ್ಯಪಾಲರ ಪತ್ರ ಮತ್ತು ಸಲಹೆಯಂತೆ ರಾಜ್ಯ ಸರ್ಕಾರವು ತಡವಿಲ್ಲದೆ ನಿವೃತ್ತ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಪಿ.ಎನ್. ದೇಸಾಯಿ ರವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿದ್ದು, 23.07.2024 ರಂದು ಸುಧೀರ್ಘವಾದಂತಹ terms of reference ಅನ್ನು ಕೂಡ ಸಮಿತಿಗೆ ವಹಿಸಿರುತ್ತದೆ. ಈ ಎಲ್ಲಾ ಮಾಹಿತಿ ಮಾನ್ಯ ರಾಜ್ಯಪಾಲರ ಗಮನಕ್ಕೆ ಇದ್ದರೂ ಕೂಡ, ಈ ವಿಷಯಗಳನ್ನು ಪರಿಗಣಿಸದೆ ಮಾನ್ಯ ಮುಖ್ಯ ಮಂತ್ರಿಗಳಿಗೆ ನೋಟೀಸನ್ನು ಜಾರಿ ಮಾಡಿರುವುದು ರಾಜ ಭವನವು ಕೇಸರಿಕರಣಕ್ಕೆ ಮುಂದಾಗಿದೆ.
ಮಾನ್ಯ ರಾಜ್ಯಪಾಲರ ಮುಂದೆ ಹಲವು ವರ್ಷಗಳಿಂದ ಇತ್ಯರ್ಥಗೊಳ್ಳದಂತಹ ಬಿಜೆಪಿ ನಾಯಕರ ಅಭಿಯೋಜನಾ ಅರ್ಜಿಗಳು ಕಲಂ 17A, 19 ಭ್ರಷ್ಠಾಚಾರ ನಿಗ್ರಹ ಕಾಯ್ದೆ1988 ಅಡಿ ಬಾಕಿ ಇದ್ದರೂ ಕೂಡ ಅವುಗಳನ್ನು ಇತ್ಯರ್ಥಗೊಳಿಸದೆ, ಕೆಲವೇ ಗಂಟೆಗಳಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಮೇಲೆ ವಿಚಾರ ಕೇಳಿ ನೊಟೀಸು ಜಾರಿಗೊಳಿಸಿರುವುದು ಮಾನ್ಯ ರಾಜ್ಯಪಾಲರ ಉನ್ನತ ಸಂವಿಧಾನ ಹುದ್ದೆಯ ದುರ್ಬಳಕೆ.
ಈ ಹಿಂದೆ ED ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ವಿಫಲವಾಗಿದ್ದು, ಈಗ ರಾಜ್ಯಪಾಲರನ್ನು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ತರಾತುರಿಯ ನಡೆ ಸಂವಿಧಾನಿಕ ತತ್ವಗಳನ್ನು ಗಾಳಿಗೆ ತೂರಿ ಕಾನೂನಿನ ವಿರುದ್ದವಿದ್ದು, ಕನ್ನಡಿಗರ ಆಶೀರ್ವಾದವನ್ನು ಅವಮಾನ ಮಾಡುತ್ತಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಕನ್ನಡಿಗರ ಅಸ್ಮಿತೆಯನ್ನು ಕಡೆಗಣಿಸುವ ಸತತ ಪ್ರಯತ್ನ ಮಾಡುತ್ತಿದ್ದು, ಮಾನ್ಯ ರಾಜ್ಯಪಾಲರ ಈ ನಡೆಯೂ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯಪಾಲರ ಈ ಅಸಂವಿಧಾನಿಕ ನಡೆ ಮತ್ತು ರಾಜ ಭವನವನ್ನು ಕೇಸರಿಕರಣಗೊಳಿಸುವ ಕೇಂದ್ರ ಸರ್ಕಾರದ ಈ ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತೇವೆ.
ಕನ್ನಡಿಗರ ಆಶೀರ್ವಾದದಿಂದ ಆಯ್ಕೆಯಾದಂತಹ ಈ ಸರ್ಕಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಆಶಯದಂತೆ ನಾವು ನಮ್ಮ ಜನರ ಹಿತಾಸಕ್ತಿ ಹಾಗೂ ಈ ಸರ್ಕಾರದ ಅಸ್ತಿತ್ವನ್ನು ಕಾಪಾಡಲು ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಮಾಡಲಿಕ್ಕೆ ಸಿದ್ದರಿದ್ದೇವೆ ಎಂಬುದಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಸಿಎಂಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ: ಸಂಪುಟ ಸಭೆಯಲ್ಲಿ ನಿರ್ಣಯ: DKS
‘HSRP’ ನಂಬರ್ ಪ್ಲೇಟ್ ಬುಕಿಂಗ್ ವೇಳೆ ಇರಲಿ ಎಚ್ಚರ : ಸೈಬರ್ ವಂಚಕರಿಂದ 95 ಸಾವಿರ ರೂ. ಕಳೆದುಕೊಂಡ ವ್ಯಕ್ತಿ!