ಬೆಂಗಳೂರು: ಮೈಸೂರು ‘ಮುಡಾ’ ಹಗರಣವನ್ನು ಖಂಡಿಸಿ ಪ್ರತಿಭಟಿಸುವ ಹಕ್ಕೂ ನಮಗಿಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. 1975ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿದ್ದರು. ಇದೀಗ 2024-25ರಲ್ಲಿ ಸಿದ್ದರಾಮಯ್ಯ ಒಬ್ಬ ಭಯಂಕರವಾದ ಸರ್ವಾಧಿಕಾರಿ, ಅಹಂಕಾರಿ ಮತ್ತು ಭ್ರಷ್ಟನಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಏನಾದರೂ ಕಮಾಂಡ್ ಇದ್ದರೆ ಸಿದ್ದರಾಮಯ್ಯರನ್ನು ತಕ್ಷಣ ಹುದ್ದೆಯಿಂದ ಕೆಳಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯರ ನೇರ ತನಿಖೆ ಆಗಬೇಕಿದೆ. ಅವರ ಪಾಲ್ಗೊಳ್ಳುವಿಕೆ ಇಲ್ಲದೇ ಇಂಥ ದೊಡ್ಡ ಭ್ರಷ್ಟಾಚಾರ ಆಗಲು ಸಾಧ್ಯವಿಲ್ಲ ಎಂದು ನುಡಿದ ಅವರು, ಮೈಸೂರು ಅವರ ತವರೂರು. ಈ ಹಗರಣಕ್ಕೆ ಅವರೇ ನೇರ ಹೊಣೆ ಎಂದು ತಿಳಿಸಿದರು. ಅವರಿಗೆ ಗೊತ್ತಿದ್ದೇ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ಹಗರಣದ ಕುರಿತು ಮಾತನಾಡಿದ ಅವರು, ಒಂದೆಡೆ ಇ.ಡಿ, ಸಿಬಿಐ ಮಾಜಿ ಸಚಿವರ ತನಿಖೆ ಮಾಡಲು ಮುಂದಾದಾಗ ನಿಗಮದ ಅಧ್ಯಕ್ಷರು ಎಸ್ಐಟಿ ಮುಂದೆ ಶರಣಾಗಿದ್ದಾರೆ. ಸಿದ್ದರಾಮಯ್ಯನವರು ಒಬ್ಬ ಹಣಕಾಸಿನ ಸಚಿವರಾಗಿದ್ದು, ಆರೋಪಿಗಳನ್ನು ಅವರು ಅತ್ಯಂತ ಸಮರ್ಪಕವಾಗಿ ರಕ್ಷಿಸುತ್ತಿದ್ದಾರೆ. ವ್ಯವಸ್ಥಿತವಾಗಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚುನಾವಣಾ ಅಫಿಡವಿಟ್ನಲ್ಲಿ ಕಡಿಮೆ ಮೊತ್ತ..
ಮುಡಾದಲ್ಲಿ 50-50 ಅನುಪಾತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಕೆಸರೇ ಬಡಾವಣೆಯಲ್ಲಿ ನಿವೇಶನ ಇದ್ದರೂ ಅತ್ಯಂತ ಪ್ರತಿಷ್ಠಿತ ಬಡಾವಣೆ ವಿಜಯನಗರದಲ್ಲಿ ನಿವೇಶನ ಕೊಡಲಾಗಿದೆ. 2023ರ ಚುನಾವಣಾ ಅಫಿಡವಿಟ್ನಲ್ಲಿ ಕಡಿಮೆ ಮೊತ್ತ ಘೋಷಿಸಿದ್ದ (8 ಕೋಟಿ) ಸಿದ್ದರಾಮಯ್ಯನವರು ಇವತ್ತು 62 ಕೋಟಿ ಎಂದು ಹೇಳುತ್ತಾರೆ. ಮುಂಬೈ ಸೇರಿ ದೇಶದ ಯಾವುದೇ ಮೂಲೆಯಲ್ಲೇ ಆದರೂ 2023ರಲ್ಲಿ 8 ಕೋಟಿ ಇದ್ದ ನಿವೇಶನಗಳ ಮೌಲ್ಯ ಈಗ 62 ಕೋಟಿ ಆಗಲು ಸಾಧ್ಯವೇ ಎಂದು ಮುಖ್ಯಮಂತ್ರಿಗಳು ಹೇಳಬೇಕೆಂದು ಪ್ರಲ್ಹಾದ್ ಜೋಶಿ ಅವರು ಸವಾಲೆಸೆದರು.
ಬಡ ಎಸ್ಟಿ ಜನಾಂಗದ ಅಭಿವೃದ್ಧಿ- ಉದ್ಧಾರಕ್ಕೆ ಇದ್ದ ವಾಲ್ಮೀಕಿ ನಿಗಮದ ದುಡ್ಡನ್ನು ಇವರು ದುರುಪಯೋಗ ಮಾಡಿದ್ದಾರೆ. 187 ಕೋಟಿ ರೂಪಾಯಿಯಲ್ಲಿ ಐಶಾರಾಮಿ ಕಾರು ಖರೀದಿ ಸೇರಿದಂತೆ ಇತರ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಮಾಜಿ ಸಚಿವರನ್ನು ನೀವು ಬಂಧಿಸಿಲ್ಲ. ಆದರೆ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು, ಬಿಜೆಪಿ ಶಾಸಕರು ಮತ್ತು ಅನೇಕ ಕಾರ್ಯಕರ್ತರನ್ನು ಬೆಂಗಳೂರು, ಶ್ರೀರಂಗಪಟ್ಟಣ, ರಾಮನಗರ, ಮೈಸೂರಿನಲ್ಲಿ ಬಂಧಿಸಿದ್ದೀರಿ ಎಂದು ಟೀಕಿಸಿದರು.
ಈ ಸರಕಾರದ ಒಂದೆರಡು ತಿಂಗಳ ಆಡಳಿತ ಅವಧಿಯಲ್ಲೇ ಭ್ರಷ್ಟಾಚಾರ ಶುರುವಾಗಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುವುದನ್ನು ಅವರ ಪಕ್ಷದ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ಕ್ರಮ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಂವಿಧಾನದ ಪ್ರತಿಯನ್ನು ಹಿಡಿದು ಮಾತನಾಡುವ ರಾಹುಲ್ ಗಾಂಧಿಯವರು ಈ ಹಗರಣಗಳ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಆಡಳಿತವು ಭ್ರಷ್ಟಾಚಾರ, ಹಗರಣಗಳನ್ನು ಮಾಡಿದೆ. ಇದರ ವಿರುದ್ಧ ನಮಗೆ ರಾಜ್ಯದಲ್ಲಿ ಪ್ರತಿಭಟಿಸುವ ಹಕ್ಕೂ ಇಲ್ಲವೇ ಎಂದು ಕೇಳಿದರು.
ಹೋರಾಟ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ..
ಸಿದ್ದರಾಮಯ್ಯನವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯೇ? 2023ರಲ್ಲಿ ಅವರೇ 8 ಕೋಟಿ ಎಂದು ಘೋಷಿಸಿ ಈಗ 62 ಕೋಟಿ ಕೇಳುತ್ತಿದ್ದಾರಲ್ಲವೇ? ಎಂದು ಪ್ರಲ್ಹಾದ್ ಜೋಶಿ ಅವರು ಪ್ರಶ್ನೆಯನ್ನು ಮುಂದಿಟ್ಟರು. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ನೇತೃತ್ವದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವವರೆಗೆ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಪ್ರಕಟಿಸಿದರು.
1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರ ಸಂಬಂಧ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಕ್ಷಮೆ ಕೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಬಂಧನ, ಹೆದರಿಸುವ ಮತ್ತು ಬೆದರಿಸುವ ಕಾರ್ಯಕ್ಕೆ ಬಿಜೆಪಿ ಬಗ್ಗುವುದಿಲ್ಲ ಎಂದು ಅವರು ಹೇಳಿದರು. ರಾಜಕೀಯವಾಗಿ ಮಾತ್ರವಲ್ಲದೆ, ಅಗತ್ಯವಿದ್ದರೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದರು.
‘ಮೆಸ್ಕಾಂ ಗ್ರಾಹಕ’ರ ಗಮನಕ್ಕೆ: ಈ ‘ರಜಾ ದಿನ’ಗಳಲ್ಲಿಯೂ ತೆರೆದಿರಲಿದೆ ‘ವಿದ್ಯುತ್ ಬಿಲ್ ಪಾವತಿ’ ಕೌಂಟರ್
BREAKING: ರಾಜ್ಯಾಧ್ಯಂತ ಡೆಂಗ್ಯೂ ಆರ್ಭಟ: ಇಂದು ಒಂದೇ ದಿನ 437 ಜನರಿಗೆ ಪಾಸಿಟಿವ್ | Dengue Case