ಬೆಂಗಳೂರು: ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇದೇ ಸಲುವಾಗಿ ವಾಯವ್ಯ ಸಾರಿಗೆಗೆ 425 ಸಿಸಿ ಕ್ಯಾಮೆರಾ ಬಸ್ ಪರಿಚಯಿಸಲಾಗುತ್ತಿದೆ. ಈ ಬಸ್ ಗಳಲ್ಲಿ ಮುಂದೆ- ಹಿಂದೆ ಒಂದೊಂದು ಕ್ಯಾಮೆರಾಗಳು ಇರಲಿದ್ದಾವೆ. 15 ದಿನದ ಡಾಟಾ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಕೂಡ ಹೊಂದಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಸಿ ಕ್ಯಾಮೆರಾವುಳ್ಳ 425 ಬಸ್ಗಳು ಸೇರ್ಪಡೆಯಾಗಿವೆ. ಇದರಿಂದ ಚಾಲಕರ ಆಟೋಟಾಪಕ್ಕೆ ಕಡಿವಾಣ, ಸಾರಿಗೆ ಸಂಸ್ಥೆಯ ಮೇಲೆ ಅಪಘಾತ ಪರಿಹಾರಕ್ಕಾಗಿ ದಾಖಲಾಗುವ ಸುಳ್ಳು ಮೊಕದ್ದಮೆ ತಡೆಯುವ ಉದ್ದೇಶದಿಂದ ಈ ಬಸ್ ಗಳನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.
ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುವುದು ಮಾಮೂಲಿ. ಆದರೆ ಪ್ರತಿಸಲ ಅಪಘಾತಗಳಾದಾಗಲೂ ಪರಿಹಾರ ಕೊಡುವುದು ಮಾತ್ರ ಸಾರಿಗೆ ಸಂಸ್ಥೆಯೇ. ಕೆಲವು ಬಾರಿ ಸಂಸ್ಥೆಯ ಚಾಲಕರ ತಪ್ಪು ಇಲ್ಲದಿದ್ದರೂ ಸಂಸ್ಥೆಯ ಮೇಲೆಯೇ ಕೇಸ್ ದಾಖಲಾಗುತ್ತಿರುತ್ತದೆ. ಸಂಸ್ಥೆಯ ಚಾಲಕರ ತಪ್ಪಿಲ್ಲ ಎಂದೂ ಸಾಬೀತುಪಡಿಸಲು ಸಾಧ್ಯವಾಗಲ್ಲ. ಸಾಕ್ಷ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಪರಿಹಾರ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸದ್ಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ರೂ 66 ಕೋಟಿ ಪರಿಹಾರ ನೀಡುವುದು ಬಾಕಿಯಿದೆ ಎಂದು ತಿಳಿಸಿದ್ದಾರೆ.
ಇನ್ನು ಚಾಲಕರು ಕೂಡ ನಿರ್ಲಕ್ಷ್ಯ ಚಾಲನೆ, ಎಲ್ಲಿ ಬೇಕೋ ಅಲ್ಲಿ ನಿಲ್ಲಿಸುವುದು. ಕೆಲವೊಂದು ಬಸ್ ನಿಲ್ದಾಣಗಳನ್ನು ಮರೆಮಾಚಿ ತೆರಳುವುದು, ಸ್ಪೀಡ್ ಲಿಮಿಟ್ ಮೀರಿ ಓವರ್ ಸ್ಪೀಡ್ನಲ್ಲೇ ವಾಹನ ಚಲಾಯಿಸುವುದು ಈ ಬಗ್ಗೆ ಪ್ರಯಾಣಿಕರಿಂದ, ಸಾರ್ವಜನಿಕರಿಂದ ದೂರುಗಳು ನಿತ್ಯ ಬರುತ್ತಲೇ ಇರುತ್ತವೆ. ಇವೆಲ್ಲಕ್ಕೂ ಪರಿಹಾರವೆಂದರೆ ಸಿಸಿ ಕ್ಯಾಮೆರಾ ಅಳವಡಿಸುವುದು. ಅಂತಹ ಬಸ್ ಗಳನ್ನಿಗ ಸರ್ಕಾರವೇ ಸಂಸ್ಥೆಗೆ ನೀಡಿದೆ ಅಂತ ಹೇಳಿದ್ದಾರೆ.
ಅದು ಕೂಡ ಬರೋಬ್ಬರಿ 425 ಬಸ್ ಗಳು ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾಗಿವೆ. ಈ ಬಸ್ ಗಳಿಗೆ ಹಿಂದೊಂದು, ಮುಂದೊಂದು ಸಿಸಿ ಕ್ಯಾಮೆರಾಗಳಿವೆ. ಬಸ್ ನಲ್ಲೇ ಕ್ಯಾಮೆರಾ ಫುಟೇಜ್ ಸಂಗ್ರಹಿಸುವ ವ್ಯವಸ್ಥೆಯಿದೆ. ಬರೋಬ್ಬರಿ 1 ಟಿಬಿಯಷ್ಟು ಫುಟೇಜ್ ಸಂಗ್ರಹಿಸಬಹುದಾಗಿದೆ. 15 ದಿನದ ದೃಶ್ಯಾವಳಿಗಳೆಲ್ಲ ಬಸ್ ಸ್ಟೋರೇಜ್ ನಲ್ಲಿ ಲಭ್ಯವಾಗಿರುತ್ತವೆ. ಅವುಗಳನ್ನು ಪೆನ್ಡ್ರೈವ್ ಮೂಲಕ ಡೌನ್ಫೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಬಸ್ ಹಿಂದೆಯಾಗಲಿ, ಮುಂದಿನಿಂದಾಗಲಿ ಯಾವುದೇ ವಾಹನದೊಂದಿಗೆ ಅಪಘಾತವಾದರೂ ಆ ದೃಶ್ಯಗಳೆಲ್ಲ ರೆಕಾರ್ಡ್ ಆಗುತ್ತವೆ. ಜತೆಗೆ ವಾಹನ ಪಾರ್ಕ್ ಮಾಡಲು ಈ ಕ್ಯಾಮೆರಾ ನೆರವಾಗುತ್ತದೆ. ಯಾರೇ ಆಗಲಿ ಸಾರಿಗೆ ಸಂಸ್ಥೆಯ ಬಸ್ಸೇ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಮೊಕದ್ದಮೆ ದಾಖಲಿಸಲು ಸಾಧ್ಯವಾಗಲ್ಲ. ಜತೆಗೆ ಚಾಲಕ ಕೂಡ ಎಲ್ಲಿ ಎಷ್ಟು ಗಂಟೆಗೆ ತೆರಳಿದ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದನೇ ಎಂಬಂತಹ ಮಾಹಿತಿ ಕೂಡ ಲಭ್ಯವಾಗುತ್ತದೆ. ಹೀಗಾಗಿ ಸಿಸಿ ಕ್ಯಾಮೆರಾ ದಿಂದ ಅನುಕೂಲವಾಗಲಿದೆ. ಇದರೊಂದಿಗೆ ಬಸ್ ನಲ್ಲಿ ಜಿಪಿಎಸ್ ಕೂಡ ಅಳವಡಿಕೆ ಇರುವುದರಿಂದ ಯಾವ ಬಸ್ ಎಷ್ಟು ಗಂಟೆಗೆ ಎಲ್ಲಿತ್ತು ಎಂಬುದರ ಮಾಹಿತಿಯೂ ಸಮರ್ಪಕವಾಗಿ ಲಭ್ಯವಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿರುವ ಬಸ್ ಬಂದಿರುವುದರಿಂದ ಬಸ್ ಗಳ ಚಲನ-ವಲನದ ಮೇಲೆ ಸಂಸ್ಥೆ ಸಮರ್ಪಕವಾಗಿ ನಿಗಾವಹಿಸಲು ಅನುಕೂಲವಾಗಲಿದೆ.
ಜೂ.16ರಂದು ‘UPSC ಪ್ರಿಲಿಮಿನರಿ’ ಪರೀಕ್ಷೆ: ಬೆಳಿಗ್ಗೆ 6 ಗಂಟೆಯಿಂದಲೇ ‘ಮೆಟ್ರೋ ರೈಲು ಸಂಚಾರ’ ಆರಂಭ